ಎಲ್ಲಿ ಹೋದವೋ ಆ ಕ್ಷಣಗಳು..
ಎಲ್ಲಿ ಹೋದವೋ ಆ ಮಧುರ ಕ್ಷಣಗಳು,
ಜಾತಿ-ಧರ್ಮಗಳ ಬೇಧವಿಲ್ಲದೇ ,
ಸಂತಸ ,ಸಂಭ್ರಮದಿಂದ
ಜರುಗುತ್ತಿದ್ದ ಗ್ರಾಮೀಣ ಜಾತ್ರೆಗಳು,
ಪುರಿ ,ಬತ್ತಾಸು,ಕಾರಸೇವೆ,ಹೂವು -ಜವನಗಳು ,
ನೆಂಟರೆಲ್ಲ ಒಂದೆಡೆ ಸೇರಿ ಮಾಡುತ್ತಿದ್ದ ,
ಸಿಹಿ-ಸಿಹಿಯಾದ ಭಕ್ಷ್ಯ-ಭೋಜನಗಳು….
ಯುಗಾದಿ-ದೀಪಾವಳಿ ಹಬ್ಬಗಳಲಿ,
ಊರ ಮುಂದಿನ ಕೆರೆಗಳಲಿ,
ರಾಸುಗಳ ಮೈ ತೊಳೆದು,
ಕೊಂಬುಗಳಿಗೆ ಬಣ್ಣ ಬಳಿದು,
ಹೂಹಾರ ಹಾಕಿ,ದಾವಣಿ ಹೊದಿಸಿ
ಗ್ರಾಮದೊಳಗೆ ಭಕ್ತಿಯಿಂದ ನಡೆಸುತ್ತಿದ್ದ
ಆಕರ್ಷಕ ರಾಸುಗಳ ಮೆರವಣಿಗೆಗಳು
ಎಲ್ಲಿ ಹೋದವೋ ಆ ಮಧುರ ಕ್ಷಣಗಳು..
ಭತ್ತ ಬಡಿದು ರಾಶಿ ಹಾಕಿ,
ಗಾಳಿಯಲಿ ತೂರುವಾಗ ಹಾಡುತ್ತಿದ್ದ,
ಹೆಣ್ಮಕ್ಕಳ ಸುಮಧುರ ಹಾಡುಗಳು ,
ಮೊರ ತುಂಬಿ,ಮನ ತುಂಬಿ ನೀಡುತ್ತಿದ್ದ
ಜಮೀನಿನ ಒಡೆಯನ ಮುಗ್ಧ ಮನಸಿನ ದಾನಗಳು…
ಎಲ್ಲಿ ಹೋದವೋ ಆ ಕ್ಷಣಗಳು..
ಮನೆಗೆ ಬಂದ ಅತಿಥಿಗಳಿಗೆ
ಮಾಡುತ್ತಿದ್ದ ಹಾಲು-ಹಣ್ಣಿನ ಆತಿಥ್ಯಗಳು ,
ಬೆಳೆದ ಕಾಯಿಪಲ್ಲೆಗಳ ದಾನಗಳು ,
ಆರೋಗ್ಯ ನೀಡುತ್ತಿದ್ದ ಕೈಔಷಧಿಗಳು ,
ಊರ ಮುಂದಿನ ಅರಳಿಕಟ್ಟೆಯ
ಪ್ರೀತಿ-ವಿಶ್ವಾಸದ ಹಿರಿಯರ ಸಭೆಗಳು
ಎಲ್ಲಿ ಹೋದವೋ ಆ ಕ್ಷಣಗಳು..
ಗ್ರಾಮಪಂಚಾಯ್ತಿ ರೇಡಿಯೋದಿಂದ
ಕೇಳುತ್ತಿದ್ದ ಅನುಕ್ಷಣದ ವಾರ್ತೆಗಳು,
ಮನಸೆಳೆಯುತ್ತಿದ್ದ ಯಕ್ಷಗಾನ ಪ್ರಹಸನ ಗಳು,
ತೊಗಲು ಬೊಂಬೆಯಾಟಗಳು,ರಂಗಭೂಮಿ ನಾಟಕಗಳು,
ಬಾಲಕರ ಮನಗೆದ್ದಿದ್ದ ಬುಗುರಿ,ಲಗೋರಿ,ಗೋಲಿ ಆಟಗಳು,
ಬಾಲಕಿಯರ ಮನಸೆಳೆದಿದ್ದ ಹಗ್ಗದಾಟ,ಕುಂಟೆಬಿಲ್ಲೆ,ಕಟ್ಟೆಮನೆ,ಚೌಕಾಬಾರ ಆಟಗಳು..
ಎಲ್ಲಿ ಹೋದವೋ ಆ ಅತ್ಯಮೂಲ್ಯ ಕ್ಷಣಗಳು..
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು