Homeಕವನಕವನ: ಚನ್ನಮ್ಮ ಸರ್ಕಲ್

ಕವನ: ಚನ್ನಮ್ಮ ಸರ್ಕಲ್

ಚನ್ನಮ್ಮ ಸರ್ಕಲ್

ನಮ್ಮ ಬೆಳಗಾವಿಯ
ಹೃದಯ….!!
ಗಿಜುಗುಡುವ ಕಾರಸ್ಥಾನ
ಇತಿಹಾಸ ರಾಜಕೀಯ
ಹೋರಾಟ ಹರತಾಳಗಳ
ಲಬಡಬ್ ಬಡಿತ
ನಮ್ಮೆಲ್ಲರ ಮಿಡಿತ….!

ಹೊಸಬರಿಗೊಂದು
ಸಾಂಕೇತಿಕ ಕುರುಹು
ನಾಲ್ಕು ದಿಕ್ಕುಗಳಿಗೂ
ವಿಸ್ತಾರವಾಗಿ ಚಾಚಿಕೊಂಡರು
ತನ್ನ ಸುಳಿಯೊಳಗೆ ಸುತ್ತಿಕೊಳ್ಳುವ ವರ್ತಳ….!!

ಖಡ್ಗ ಹಿಡಿದು
ಕುದುರೆಯೇರಿ
ಯುದ್ದಕ್ಕೆ ಹೊರಟ
ಚೆನ್ನಮ್ಮ ಸದ್ದುಗದ್ದಲಿನೊಳಗೆ
ಮರತೆಬಿಟ್ಟಿದ್ದಾಳೆ….!!
ಸಿಗ್ನಲ್ ನ ಕೆಂಪು ಹಸಿರು
ದೀಪಗಳ ನಡುವೆ…!
ಆಟೋ, ಬಸ್ಸು ಕಾರು,ಮೊಟರ್ ಸೈಕಲ್ ಉಗುಳುವ ಹೊಗೆಯ
ಮಾಲಿನ್ಯ ನಡುವೆ….!
ರಾಜ್ಯೋತ್ಸವ, ಗಣೇಶೋತ್ಸವದ
ಡಾಲ್ಬಿ ಗಳ ಸಂಗೀತದ
ಅಬ್ಬರಕೆ ಕುಣಿವ
ಪಡ್ಡೆ ಹುಡುಗರ ಅಭಿಮಾನದ ನಡುವೆ….!
ಆಗೊಮ್ಮೆ ಈಗೊಮ್ಮೆ ಹಾಕುವ
ಮಾಲೆಯ ಸುಗಂಧದ ನಡುವೆ…!
ಝಗಮಗಿಸುವ ದೀಪಾಲಂಕಾರದ
ಹೊನಲು ಬೆಳಕಿನ ಆಟದ ನಡುವೆ ….!
ಬದುಕು ಕಟ್ಟಿಕೊಳ್ಳಲು ಓಡುವವರ ಧಾವಂತದ ಓಟದೊಳಗೆ….!
ಹೋರಾಟದ ಜೈಕಾರ ಧಿಕ್ಕಾರದ ಕೂಗಾಟಗಳ ನಡುವೆ…!
ಸಾಹಿತ್ಯ ಭವನದ ವಿದ್ವಾಂಸರ ಚರ್ಚೆ, ವಿಶ್ಲೇಷಣೆ, ಹಿರಿಕಿರಿ ಕವಿಗಳ ಕಥೆ,ಕವನ ಕಾದಂಬರಿಗಳ
ನಡುವೆ….!
ಶಾಲೆಕಾಲೇಜಿಗೆ ಹೊರಟ
ಹುಡುಗ ಹುಡುಗಿಯರು
ಕನಸುಕಂಗಳ ನಡುವೆ….!
ರಾಚಿ ಬರುವ ಆಂಬ್ಯುಲೆನ್ಸ್
ಭಯದ ಸದ್ದಿನ ನಡುವೆ….!
ರೈತರು ಹೊತ್ತು ತರುವ ತರಕಾರಿ
ಹಣ್ಣು ಹಂಪಲಿನ ವ್ಯಾಪಾರದ ನಡುವೆ….!
ಕಿತ್ತ ಚಪ್ಪಲಿ ,ಛತ್ರಿಗಳ ಹೊಲೆದು
ಸೇವೆಕೊಡಲು ಕಾಯುತ
ಕುಳಿತವರ ಮೌನದ ನಡುವೆ….!
ಪಂಜರದೊಳಗೊಂದು
ಗಿಳಿಯನಿಟ್ಟು ಹೊತ್ತಿನ ಊಟಕ್ಕಾಗಿ
ಭವಿಷ್ಯ ಹೇಳುವ ಜ್ಯೋತಿಷಿಯ ಸುಳ್ಳಿನ ನಡುವೆ….!
ಕನ್ನಡ ಮರಾಠಿ ಎಲ್ಲಾ ಮರೆತು
ಸಹಬಾಳ್ವೆ ಮಾಡುವ
ಸಾಮಾನ್ಯರ ನಡುವೆ….!
ತನ್ನ ಸುತ್ತುವರೆದ ಕೋರ್ಟು, ಕಚೇರಿ
ದವಾಖಾನೆ ,ಶಾಲಾ ಕಾಲೇಜು ಗ್ರಂಥಾಲಯ,
ಹೋಟೆಲ್ ,ಬಾರ್, ಮಾಲ್
ಪೆಟ್ರೋಲ್ ಬಂಕ್ , ಹಾಂ…ಬೆನ್ನಿಗೆ
ಗಣಪತಿಗುಡಿ ನೆರಳಿಗೆ ಅರಳಿಕಟ್ಟೆ…!ಏನುಂಟು ಎನಿಲ್ಲಾ…!!
ರೌದ್ರಾವತಾರ ವ ಮರೆತು
ನಸುನಗುತಾ
ಬಿಗುತ್ತಿದ್ದಾಳೆ ಚೆನ್ನಮ್ಮ
ತನ್ನ ವರ್ತಮಾನದ ವೈಭೋಗವ ಕಂಡು….!!

ಈಗ
ಚೆನ್ನಮ್ಮ
ಬಿಕೋ ಎನ್ನುವ ವರ್ತುಳಲೊಳಗೆ
ಮಂಕಾಗಿದ್ದಾಳೆ….!!
ಖಾಲಿ ರಸ್ತೆಯಲ್ಲಿ ಒಬ್ಬಂಟಿ ಯಾಗಿ
ನಿಂತು ದಿಕ್ಕು ತೋಚದಂತಾಗಿದ್ದಾಳೆ…!
ಬರಿ ಚಿತ್ಕಾರ ಹಾಕುತ್ತ ಬರುವ
ಆಂಬ್ಯುಲೆನ್ಸ್ ಸದ್ದಿಗೆ ಬೆಚ್ಚಿ ಬಿಳುತ್ತಾಳೆ….!!
ವೈದ್ಯ ದಾದಿಯರು ಮಾತ್ರ ಓಡಾಡುವುದು ಕಂಡು ಗಾಬರಿ ಗೊಂಡಿದ್ದಾಳೆ
ಪೋಲಿಸರ ಬೂಟಿನ ಸದ್ದಿಗೆ
ಆತಂಕಗೊಂಡಿದ್ದಾಳೆ….!
ರಾಶಿ ರಾಶಿ ಹೆಣಗಳು
ಸುಟ್ಟವಾಸನೆಯನ್ನು
ಸಹಿಸಲಾರದೆ ಕೆಮ್ಮುತ್ತಾ ಉಸಿರು
ಕಟ್ಟಿ ಒದ್ದಾಡುತ್ತಿದ್ದಾಳೆ….!
ಕಿತ್ತೂರಿನ ಯುದ್ದ ನೆನೆದು
ಹೌಹಾರಿದ್ದಿಳೆ….!
ನನ್ನ ನಾಡು ನನ್ನ ಮಕ್ಕಳ ಮೇಲೆ
ಮತ್ತೆ ವೈರಿಗಳೂ ದಾಳಿಮಾಡಿದರೆ
ಎಂದು ಚಿಂತಿಸುತಿದ್ದಾಳೆ…!
ಉತ್ತರ ಕೊಡದೆ ಹೊಗುವವರಿಗೆ
ಏನಾಗುತ್ತಿದೆ ಎಂದು ಹೇಳಿ ಹೋಗಿ ಎಂದು ಚೀರಿ ಚೀರಿ ಕೇಳುತ್ತಿದ್ದಾಳೆ….!
ಏನಾಗುತ್ತೀದೆ ಯಾರಾದರೂ ಹೇಳಿ….!! ಎಂದು ಅಪರೂಪಕ್ಕೆ ಹಾದುಹೋಗುವರ ಕೊರಳ ಪಟ್ಟಿ ಹಿಡಿದು ಕೇಳುತ್ತಾ
ಬಿಕ್ಕುತ್ತಿದ್ದಾಳೆ…!!
ವೈರಿ ದಾಳಿಯೆ ಇರಬೇಕು
ನಡೆ ಮುನ್ನಡೆ ಸಂಹರಿಸೋಣ
ಎಂದು ಕುದುರೆಗೆ
ಹುರಿದುಂಬಿಸುತ್ತಿದ್ದಾಳೆ….!
ಖಡ್ಗ ಝಳಪಿಸುತ್ತಿದ್ದಾಳೆ….!
ಚೆನ್ನಮ್ಮ ಓಟ ಕಂಡು ಯಾರೊ ಒಬ್ಬ ಕೂಗಿದಾ…
ಓ…..ನನ್ನವ್ವ
ಕಿತ್ತೂರ ಅರಸಿ ಚೆನ್ನವ್ವ
ಇದು ವೈ(ರಿ)ರಸ್ ದಾಳಿ….!!
ಅರ್ಥವಾಗದೆ ಚೆನ್ನಮ್ಮ ಸ್ತಬ್ದವಾಗುತ್ತಿದ್ದಾಳೆ ಜಾರುವ ಕಣ್ಣಹನಿಗಳ ಒರಸಿಕೊಳ್ಳಲಾಗದೆ..!!

ಡಾ. ನಿರ್ಮಲಾ ಬಟ್ಟಲ
23.5.2021

RELATED ARTICLES

Most Popular

error: Content is protected !!
Join WhatsApp Group