ಈ ಸುದ್ದಿ ಇಂದಿನ ಅಂದರೆ ದಿನಾಂಕ 03-06-2021 ರಂದು ಎಲ್ಲಾ ದಿನಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟಗೊಂಡಿದೆ.
ಸಂಕ್ಷಿಪ್ತದಲ್ಲಿ ಅದರ ವಿವರ , ಚಾಮರಾಜನಗರ ಜಿಲ್ಲೆಯ ಮೂಕಳ್ಳಿ ಎಂಬ ಗ್ರಾಮದಲ್ಲಿ ಮಹಾದೇವಪ್ಪ(47) ಎಂಬ ಯುವಕನು ತನ್ನ ಪತ್ನಿ ಮಂಗಳಮ್ಮ ( 40) ಹಾಗೂ ತನ್ನ ಎರಡು ಹೆಣ್ಣು ಮಕ್ಕಳಾದ ಜ್ಯೋತಿ (14) ಶ್ರುತಿ ( 12) ಅವರೊಂದಿಗೆ ಸಾಮೂಹಿಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣವೇನೆಂದರೆ ಅವರಿಗೆ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ತಗುಲಿತ್ತು. ಗ್ರಾಮಪಂಚಾಯತ್ ನವರು ಅವರೆಲ್ಲರಿಗೂ ಹದಿನಾಲ್ಕು ದಿನ ಮನೆಯಲ್ಲಿಯೇ ಉಳಿದುಕೊಂಡಿರುವಂತೆ ಹೇಳಿ, ಕೆಲವು ಔಷಧಗಳ ಕಿಟ್ ನೀಡಿ ಹೋಗಿದ್ದರು.
ಆದರೆ ಅಲ್ಲಿನ ಸ್ಥಳೀಯ ಜನರು ಇವರನ್ನು ಹತ್ತಿರದಿಂದ ಮಾತನಾಡುವುದು ಬಿಡಲಿ , ಮೊಬೈಲ್ ನಲ್ಲೂ ಮಾತನಾಡುತ್ತಿರಲಿಲ್ಲವಂತೆ ಇದರಿಂದ ಈ ರೀತಿಯ ಅಸ್ಪ್ರಶ್ಯತೆಯಿಂದಾಗಿ ಮಹಾದೇವಪ್ಪನು ಅತೀವವಾಗಿ ನೊಂದುಕೊಂಡು ಆತ್ಮಹತ್ಯೆಗೆ ತನ್ನ ಇಡೀ ಕುಟುಂಬದೊಂದಿಗೆ ಶರಣಾಗಿದ್ದಾನೆ.
ಇಲ್ಲಿ ಎಲ್ಲರೂ ಇಂದು ಒಂದು ಸಂಗತಿ ತಿಳಿದುಕೊಳ್ಳುವುದೇನೆಂದರೆ
ಒಮ್ಮೆ ಗೌತಮ ಬುದ್ಧನ ಕಡೆಗೆ ಒಬ್ಬ ಹೆಣ್ಣು ಮಗಳು ರೋಧಿಸುತ್ತ ಬರುತ್ತಾಳೆ. ಆಗ ಗೌತಮ ಬುದ್ಧನು ಅವಳಿಗೆ ರೋಧಿಸುವ ಕಾರಣ ಕೇಳುತ್ತಾನೆ. ಆಗ ಅವಳು ತನ್ನ ಪ್ರೀತಿಯ ಪತಿ ತೀರಿಕೊಂಡಿದ್ದು ತಾವು ಮಹಾತ್ಮರಿದ್ದೀರಿ ! ನನ್ನ ಗಂಡನನ್ನು ಬದುಕಿಸಿ. ನಾನು ನಿಮ್ಮ ಮೇಲೆ ಅತೀವವಾಗಿ ಭರವಸೆ ಇಟ್ಟು ಇಲ್ಲಿ ಬಹಳ ದೂರದಿಂದ ಬಂದಿದ್ದೇನೆ ಎನ್ನುತ್ತಾಳೆ. ಅವಳ ದುಃಖ ನೋಡಿದ ಗೌತಮರು ಅವಳಿಗೆ ಸಾಕಷ್ಟು ಸಂತೈಸುತ್ತ ಸತ್ತು ಹೋದವರು ಮತ್ತೆ ಬದುಕಿ ಬರುವುದಿಲ್ಲ; ನೀನು ರೋಧಿಸುವುದನ್ನು ಬಿಡು ಎಂದು ಹೇಳುತ್ತಾರೆ. ಆದಾಗ್ಯೂ ಅವಳಿಗೆ ಸಮಾಧಾನವಾಗುವುದಿಲ್ಲ. ನೀವು ದೊಡ್ಡ ಮಹಾತ್ಮರಿದ್ದೀರಿ , ಅವರೇ ನಿನ್ನ ಗಂಡನನ್ನು ಬದುಕಿಸಬಹುದೆಂದು ನನಗೆ ಬಹಳ ಜನರು ಹೇಳಿದ್ದರಿಂದ ನಾನು ಅಷ್ಟೊಂದು ದೂರದಿಂದ ಬಂದಿದ್ದೇನೆ. ನೀವು ಏನೇ ಮಾಡಿ. ನನ್ನ ಗಂಡನನ್ನು ಬದುಕಿಸಿ ಎಂದು ಆಕೆ ಅಂಗಲಾಚತೊಡಗಿದಳು.
ಆಗ ಗೌತಮರು ಆಕೆಗೆ ಆಯ್ತು ನಾನು ನಿನ್ನ ಗಂಡನನ್ನು ಬದುಕಿಸುತ್ತೇನೆ. ಆದರೆ ಅದಕ್ಕೆ ಕೆಲವು ವಸ್ತುಗಳು ಬೇಕಾಗುತ್ತವೆ. ನೀನು ಅವನ್ನು ನನಗೆ ತಂದು ಕೊಟ್ಟರೆ, ನಾನು ನಿನ್ನ ಗಂಡನನ್ನು ಬದುಕಿಸುವೆ ! ಎನ್ನುತ್ತಾರೆ.
ಆಗ ಆಕೆ ನಾನು ಏನು ತರಬೇಕು ಹೇಳಿ ಸ್ವಾಮಿ , ನನ್ನ ಜೀವ ಕೊಟ್ಟಾದರೂ ಸರಿ ನಾನು ನೀವು ಹೇಳಿದ ವಸ್ತು ತರುತ್ತೇನೆ ಎನ್ನುವಳು.
ಆಗ ಗೌತಮ ಬುದ್ಧನು ಅವಳಿಗೆ ” ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ. ” ಎನ್ನುತ್ತಾರೆ.
ತನ್ನ ಗಂಡನ ಪ್ರಾಣ ಕೇವಲ ಸಾಸಿವೆ ತಂದರೆ ಉಳಿಯುತ್ತದೆಂಬ ಖುಷಿಯಿಂದ ಆಕೆ ಸಾಸಿವೆ ಕೇಳಲು ಹೋಗುತ್ತಾಳೆ. ಅವಳು ಹೋದ ಕಡೆಗೆಲ್ಲ ಸಾವಿಲ್ಲದ ಮನೆಯ ಸಾಸಿವೆ ಅಂತ ಹೇಳಿದ ಕೂಡಲೇ ಪ್ರತಿಯೊಬ್ಬರೂ ಆಕೆಗೆ ಅಂಥ ಸಾಸಿವೆ ನಮ್ಮ ಮನೆಯಲ್ಲಿ ಇಲ್ಲವಮ್ಮ; ಮೊನ್ನೆ ನನ್ನ ತಾತ ತೀರಿಕೊಂಡರು ಎಂದೊ , ನನ್ನ ಮಾವ , ನನ್ನ ಅತ್ತೆ , ನನ್ನ ಮಗ , ನನ್ನ ಸಹೋದರಿ ಎಂದೊ ಒಂದಿಲ್ಲೊಂದು ಸಂಬಂಧ ಹೊಂದಿರುವವರು ತೀರಿಕೊಂಡರೆಂದು ಆಕೆಗೆ ಹೇಳುತ್ತಾರಲ್ಲದೇ “ಸಾವಿಲ್ಲದ ಮನೆಯ ಸಾಸಿವೆ” ನಿನಗೆ ಎಲ್ಲಿಯೂ ಸಿಗುವುದಿಲ್ಲ ಎಂದು ಅವಳಿಗೆ ಮನದಟ್ಟಾಗುವಂತೆ ಹೇಳುತ್ತಾರೆ.
ಗೆಳೆಯರೆ , ಈ ಕಥೆ ಎಲ್ಲರಿಗೂ ಗೊತ್ತಿರುವದೇ ಆಗಿದೆ ! ಈ ಕಥೆಯಂತೆಯೇ ಇಂದಿನ ಕೊರೊನಾ ಸೋಂಕು ಕೂಡ ಹೌದು ! ಅದು ಕೂಡ ಬಡವ ಬಲ್ಲಿದ, ಸಣ್ಣವ ದೊಡ್ಡವ , ಶಾಸಕ , ಮಂತ್ರಿ , ಮುಖ್ಯ ಮಂತ್ರಿ ಹೀಗೆ ಯಾರನ್ನೂ ಅದು ಬಿಡುವುದಿಲ್ಲ , ಬಿಟ್ಟಿಲ್ಲ !
ನಿರ್ಲಕ್ಷ್ಯತನ ತೋರಿಸದೇ , ಸರಕಾರದ ಮಾರ್ಗಸೂಚಿಯಂತೆ ನಡೆದುಕೊಂಡರೆ ನಮಗೆ ಒಳಿತಾಗುವುದು.
ಇಷ್ಟಾಗಿಯೂ ಅದು ಬಂದರೆ ಸಾವಿಲ್ಲದ ಮನೆಯ ಸಾಸಿವೆಯ ಕಥೆ ನೆನಪಿಗೆ ತಂದುಕೊಳ್ಳಬೇಕೆ ವಿನಹ: ಈ ಜಗತ್ತಿನಲ್ಲಿ ನಮಗೇನೂ ಆಗುವುದಿಲ್ಲ ಎಂಬ ಅಹಂಭಾವದಿಂದ ವರ್ತಿಸುತ್ತ ಚಾಮರಾಜನಗರದ ಮಹಾದೇವಪ್ಪನಂಥವರ ಸಾವಿಗೆ ಕಾರಣವಾಗಬಾರದು.
– ನೀಲಕಂಠ ದಾತಾರ. ರಬಕವಿ.