ಬೀದರ – ಕರೋನಾ ನಿಯಮಗಳನ್ನು ಜಾರಿಗೆ ತರಬೇಕಾದ ಅಧಿಕಾರಿಯೇ ಸಾರ್ವಜನಿಕ ವಾಗಿ ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಯಾರು ತೆಗೆದುಕೊಳ್ಳುವುದು ಎಂಬುದು ಯಕ್ಷಪ್ರಶ್ನೆ ಆಗಿದೆ.
ಮಹಾರಾಷ್ಟ್ರವು ಕರೋನಾ ವೈರಸ್ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿ ಒದ್ದಾಡುತಿರುವಾಗ ಹಾಗೂ ನಮ್ಮ ರಾಜ್ಯದ ನಾಯಕರು ರಾಜ್ಯದ ಒಳಗೆ ವೈರಸ್ ಅಲೆ ನುಸುಳದಂತೆ ತಡೆಯಲು ರಾಜ್ಯದ ಗಡಿಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಕ್ಕಾಗಿ ಒದ್ದಾಡುತಿದ್ದರೆ ಇತ್ತ ಗಡಿ ಜಿಲ್ಲೆಯಾದ ಬೀದರ ಬಸವಕಲ್ಯಾಣ ತಹಸಿಲ್ದಾರರು ತಾಲೂಕಿನ ಮಹಾರಾಷ್ಟ್ರದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಗೋಕುಳ ಕಿಟ್ಟಾ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸಕ್ಕೆ ಆಗಮಿಸಿ ನಿಯಮಗಳನ್ನು ಗಾಳಿಗೆ ತೂರಿ ಕನಿಷ್ಠ ಪಕ್ಷ ಮಾಸ್ಕನ್ನು ಉಪಯೋಗಿಸದೆ ಸಾರ್ವಜನಿಕರಲ್ಲಿ ಬೆರೆತು ನೃತ್ಯ ಮಾಡುತಿರುವುದು ಅಚ್ಚರಿ ಮೂಡಿಸಿದೆ.
ಮುಂಬರುವ ದಿನಗಳಲ್ಲಿ ಇವರೆ ತಮ್ಮ ತಾಲೂಕಿನಲ್ಲಿ ಕಟ್ಟುನಿಟ್ಟಾಗಿ ಕರೋನಾ ನಿಯಮಗಳನ್ನು ಜಾರಿಗೆ ತರುವುದಕ್ಕೆ ಹೇಗೆ ಸಾಧ್ಯ ಎಂಬ ಸಂಶಯ ಜನರಲ್ಲಿ ಮನೆ ಮಾಡಿದೆ ಏಕೆಂದರೆ ತಾವೇ ನಿಯಮಗಳನ್ನು ಗಾಳಿಗೆ ತೂರಿ ಇತರರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದರೆ ಅದನ್ನು ಬಿಟ್ಟು ಇತರರು ಹೇಗೆ ಪಾಲಿಸಲು ಸಾದ್ಯ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಜಿಲ್ಲಾಡಳಿತವು ಈಗಲಾದರು ಎಚ್ಚೆತ್ತು ಇಂಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ ಪಕ್ಕದ ಮಹಾರಾಷ್ಟ್ರ ದಲ್ಲಿನ ಕರೋನಾ ವೈರಸ್ ಎರಡನೆ ಅಲೆಯನ್ನು ಜಿಲ್ಲೆಗೆ ಬರದಂತೆ ತಡೆದು ಜನರನ್ನು ಲಾಕ್ ಡೌನ್ ನಿಂದ ಬಳಲುವುದನ್ನು ತಪ್ಪಿಸುವರೋ ಅಥವಾ ಇಲ್ಲವೋ ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ