ಹಾಸನ – ಗಮಕ ಕಲೆ ಬಹು ಪ್ರಾಚೀನ ಕಲೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಲೆ. ಅಂದಿನಿಂದ ಇಂದಿನವರೆಗೂ ಬತ್ತದೆ ಗಂಗಾ ನದಿಯಂತೆ ಪ್ರವಹಿಸುತ್ತಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಜಿ .ದಕ್ಷಿಣಾಮೂರ್ತಿ ತಿಳಿಸಿದರು.
ಕರ್ನಾಟಕ ಗಮಕಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಹಾಸನ, ಸಂಸ್ಕಾರ ಭಾರತಿ ಕರ್ನಾಟಕ ಹಾಸನ ಜಿಲ್ಲಾ ಸಮಿತಿ, ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ, ಸಂತ ಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ ಹಾಸನ ನಗರ ಗೃಹ ನಿರ್ಮಾಣ ಸಹಕಾರ ಸಂಘ ಇವರ ಸಹಯೋಗದಲ್ಲಿ ನಗರದ ಶ್ರೀ ಸೀತಾರಾಮಾಂಜನೇಯ ದೇವಾಲಯದ ಸಪ್ತಪದಿ ಸೌದಾಮಿನಿ ಸಭಾಂಗಣದಲ್ಲಿ ನಡೆದ ಗಮಕ ಹಬ್ಬ ಕವಿ ನಮನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ಗಮಕ ಕಲೆಯ ಬಗ್ಗೆ ಯುವಕ ಯುವತಿಯರು ಹೆಚ್ಚಿನ ಆಸಕ್ತಿ ವಹಿಸಿ ಕಲಿಯಲು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೀತಾರಾಮಾಂಜನೇಯ ಸೇವಾ ಸಮಿತಿಯ ಕಾರ್ಯದರ್ಶಿ ಎಂ ವಿ ಶ್ರೀನಿವಾಸಮೂರ್ತಿಯವರು ಮಾತನಾಡಿ ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣದ ಶ್ಲೋಕಗಳನ್ನು ಶ್ರೀರಾಮಚಂದ್ರನ ಸುಪುತ್ರರಾದ ಕುಶ ಲವರು ತಂಬೂರವನ್ನು ಮೀಟುತ್ತಾ ವಿವಿಧ ರಾಗಗಳಿಂದ ಸುಶ್ರಾವ್ಯವಾಗಿ ಹಾಡಿರುವುದರಿಂದ ಕುಶಲವರೇ ಆದಿ ಗಮಕಿಗಳು ಎಂದರು.
ಬೆಳಗಾವಿಯ ಸಂಗೀತ, ಗಮಕ ವಿದುಷಿ ಭಾರತಿ ಮಹಾದೇವ ಭಟ್ ಅವರಿಗೆ “ಗಮಕಕಲಾದುರಂಧರೆ”, ಬೆಂಗಳೂರಿನ ಗಮಕ ವಿದುಷಿ ವಾಸುಕಿ ಶರ್ಮ ಅವರಿಗೆ “ಗಮಕಕಲಾಕೋವಿದೆ”, ಚನ್ನರಾಯಪಟ್ಟಣದ ಗಮಕ ವಿದುಷಿ ಸುಮಿತ್ರಾ ವಿಶ್ವನಾಥ್ ಅವರಿಗೆ “ಕಾವ್ಯಗಾಯನಕಲಾಚತುರೆ” ಹಾಗೂ ಸಾಹಿತಿ, ಕವಿ, ನಾಟಕಕಾರ ಗೊರೂರು ಅನಂತರಾಜು ಅವರಿಗೆ “ಕಲಾವಿಮರ್ಶಾವಿಚಕ್ಷಣಕಲೋಪಾಸನತತ್ಪರವಿಮರ್ಶಾವಿಧು” ಎಂಬ ಬಿರುದುಗಳನ್ನು ನೀಡಿ ಫಲ ತಾಂಬೂಲದೊಂದಿಗೆ ಗೌರವಿಸಲಾಯಿತು. ಇದಕ್ಕೂ ಮೊದಲು ಬೆಳಗಾವಿಯ ಬಾಲಗಮಕಿ ಕು. ಕವನ ಭರ್ಣೇಕರ್ ಅವರು ಮಹಾಕವಿ ಕುಮಾರವ್ಯಾಸ ವಿರಚಿತ “ಕರ್ಣಾಟಭಾರತಕಥಾಮಂಜರಿ”ಯಿಂದ “ಬಕಾಸುರ ವಧೆ” ಭಾಗವನ್ನು ತನ್ನ ಕಂಠಸಿರಿಯಿಂದ ಸುಶ್ರಾವ್ಯವಾಗಿ ಗಾಯನ ಮಾಡಿದರೆ ತಿಪಟೂರಿನ ಬಾಲಗಮಕಿ ಕು.ಭುವನೇಶ್ವರಿ ಎಸ್ ಬೆಳ್ಳೂರು ಹಾಗೂ ಬೆಂಗಳೂರಿನ ಬಾಲಗಮಕಿ ಕು.ಭಗವತಿ ಗಿರಿಧರ್ ಅವರು ತಮ್ಮ ವಯಸ್ಸಿಗೂ ಮೀರಿ ವ್ಯಾಖ್ಯಾನವನ್ನು ನೀಡಿ ಸಭಿಕರು ಹುಬ್ಬೇರಿಸುವಂತೆ ಮಾಡಿದರು.
ಈ ವರ್ಷದ ಗಮಕ ಹಬ್ಬ ಕವಿನಮನ ಕಾರ್ಯಕ್ರಮವು ಸರ್ವ ರೀತಿಯಲ್ಲಿಯೂ ಯಶಸ್ವಿಯಾಗಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಬೆಳಗಾವಿಯ ಪ್ರಸನ್ನ ಅವರು ಪ್ರಾರ್ಥಿಸಿ
ಪರಿಷತ್ತಿನ ಕಾರ್ಯದರ್ಶಿ ಪ್ರೊ. ಜಿ ಎನ್. ಅನಸೂಯ ಸ್ವಾಗತಿಸಿದರು. ಶ್ವೇತಾ ಮೋಹನ್ ನಿರೂಪಿಸಿದರು. ಪರಿಷತ್ತಿನ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ಕಲಾಶ್ರೀ ಗಣೇಶ್ ಉಡುಪ ವಂದಿಸಿದರು.