ರಾಮದುರ್ಗ– ಸರಕಾರಿ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ವಿಶೇಷವಾದ ಹಕ್ಕುಗಳಿದ್ದು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿ ಸದಸ್ಯರು ಶ್ರಮಿಸಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ವಿಠಲ ಜಟಗನ್ನವರ ಹೇಳಿದರು.
ಸಮೀಪ ತುರನೂರ ಗ್ರಾಮದ ಸಿದ್ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಾಲುಮತ ಸಮುದಾಯದ ನೂತನ ಗ್ರಾಮ ಪಂಚಾಯತಿ ಸದಸ್ಯರಿಗಾಗಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಸರಕಾರದ ಎಲ್ಲ ಇಲಾಖೆಗಳು ಗ್ರಾಪಂ ನ ಕಾರ್ಯವ್ಯಾಪ್ತಿಯಲ್ಲಿ ಬರುವುದರಿಂದ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಜನರ ವಿಸ್ವಾಸಕ್ಕೆ ಪಾತ್ರರಾಗಬೇಕೆಂದು ನುಡಿದರು.
ಸಾರ್ವಜನಿಕ ಕಾರ್ಯಗಳನ್ನು ಮಾಡಲು ತಮಗೆ ಒದಗಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಗ್ರಾಮ ಸ್ವರಾಜ್ಯ ಪರಿಕಲ್ಪಣೆಯ ಮಾದರಿ ಗ್ರಾಮ ಪಂಚಾಯತಿಗಳನ್ನಾಡಿ ಮಾಡುವ ಪಣತೊಡಬೇಕೆಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ ತಿಳಿಸಿದರು.
ಪುರಸಭೆ ಸದಸ್ಯೆ ರಾಜೇಶ್ವರಿ ಮೆಟಗುಡ್ಡ ಮಾತನಾಡಿ ಗ್ರಾಪಂ ಸದಸ್ಯರು ತಮ್ಮ ಅಧಿಕಾರ ಮತ್ತು ಕರ್ತವ್ಯಗಳನ್ನು ಅರ್ಥಮಾಡಿಕೊಂಡು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯೋಜನೆಗಳು ಹಾಗೂ ಬರುವ ಅನುದಾನಗಳ ಬಗ್ಗೆ ತಿಳಿದು ಅಭಿವೃದ್ಧಿ ಕಾರ್ಯ ಮಾಡಬೇಕೆಂದು ಹೇಳಿದರು.
ನಿವೃತ್ತ ಶಿಕ್ಷಕ ಎಚ್.ಎನ್.ನರಗುಂದ, ನಾಗಪ್ಪ ಇಂಗಳಗಿ ಮಾತನಾಡಿದರು. ತಾಲೂಕಿನ 33 ಗ್ರಾಪಂ ನಿಂದ ಆಯ್ಕೆಯಾದ 103 ಜನ ನೂತನ ಸದಸ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತುರನೂರ ಗ್ರಾಪಂ ಅಧ್ಯಕ್ಷ ಲಕ್ಕಪ್ಪ ಕ್ವಾರಿ ಅಧ್ಯಕ್ಷತೆ ವಹಿಸಿದ್ದರು.
ಮುಗಳಖೋಡದ ಕನಕಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಜಿಪಂ ಮಾಜಿ ಅಧ್ಯಕ್ಷೆ ಮಹಾದೇವಿ ರೊಟ್ಟಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ನಿರ್ದೇಶಕ ನೀಲಪ್ಪ ಚಾಕಲಬ್ಬಿ, ಶಶಿಕಲಾ ಸೋಮಗೊಂಡ, ಪಿ.ಎಲ್.ಡಿ ಬ್ಯಾಂಕಿನ ಉಪಾಧ್ಯಕ್ಷ ಮಾದೇವಪ್ಪ ಶರಮಗೊಂಡ, ಈರಪ್ಪ ಕೊಳಚಿ, ಶಿವಪ್ಪ ಹಕ್ಕೆಪ್ಪನವರ, ರವಿ ಮೊರಬದ, ಪುರಸಭೆ ಸದಸ್ಯೆ ಪಿ.ಎಸ್.ಸಿದ್ಲಿಂಗಪ್ಪನವರ, ತಾಪಂ ಸದಸ್ಯೆ ಸುರೇಖಾ ಸೋಮಗೊಂಡ, ಬಸವರಾಜ ಕರಿಗಾರ, ಎಚ್.ಕೆ.ಸಾಗನೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಸಹಕಾರ್ಯದರ್ಶೀ ಅಶೋಕ ಮೆಟಗುಡ್ಡ ಸ್ವಾಗತಿಸಿದರು. ಶಿಕ್ಷಕ ಮಾರುತಿ ಅದ್ದೂರಿ ನಿರೂಪಿಸಿದರು. ಸಿದ್ದಪ್ಪ ಮಕ್ಕಣ್ಣವರ ವಂದಿಸಿದರು.