ಮೂಡಲಗಿ -ಮೂಡಲಗಿ ತಾಲೂಕಿನಲ್ಲಿನ ಜಿಲ್ಲಾ ಪಂಚಾಯತ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದ್ದು ದುರುದ್ದೇಶಪೂರಿತ ಹಾಗೂ ಲೋಪದೋಷಗಳಿಂದ ಕೂಡಿದ್ದು ಇದನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಇದ್ದ ವಡೇರಹಟ್ಟಿ ಜಿ. ಪಂ ಕ್ಷೇತ್ರವನ್ನು ರದ್ದು ಮಾಡಿ ಅದನ್ನು ತುಕ್ಕಾನಟ್ಟಿ ಕ್ಷೇತ್ರದಲ್ಲಿ ಸೇರಿಸಲಾಗಿದೆ. ಮಸಗುಪ್ಪಿ, ಗುಜನಟ್ಟಿ ಧರ್ಮಟ್ಟಿ ಹಾಗೂ ಜೊಕಾನಟ್ಟಿ ಗ್ರಾಮಗಳನ್ನು ದೂರದ ಕುಲಗೋಡ ಜಿ.ಪಂ.ಕ್ಷೇತ್ರಕ್ಕೆ ಸೇರಿಸಲಾಗಿದೆ. ಎಲ್ಲಿಯ ಕುಲಗೋಡ, ಎಲ್ಲಿಯ ಜೊಕಾನಟ್ಟಿ, ಎಲ್ಲಿಯ ತುಕಾನಟ್ಟಿ ಎಲ್ಲಿಯ ವಡೇರಹಟ್ಟಿ…..ಹೀಗೆ ಭೌಗೋಳಿಕವಾಗಿ ದೂರವಿರುವ ಕ್ಷೇತ್ರಗಳನ್ನು ಸೇರಿಸಿರುವುದು ಅವೈಜ್ಞಾನಿಕ ವಾಗಿದೆ ಎಂದು ಅವರು ಹೇಳಿದರು.
ಕ್ಷೇತ್ರ ಮರು ವಿಂಗಡಣೆ ಮಾಡಲು ಸರ್ಕಾರಕ್ಕೆ ತಿಳಿಸಬೇಕು, ಗೆಜೆಟ್ ಆಗಬೇಕು. ಆದರೆ ಈ ಯಾವ ನಿಯಮಗಳ ಪಾಲನೆ ಆಗಿಲ್ಲ. ಕ್ಷೇತ್ರದಲ್ಲಿ ತಮ್ಮ ಹೊರತು ಬೇರೆ ಯಾರೂ ಬೆಳೆಯಬಾರದು ಎಂಬ ದುರುದ್ದೇಶದಿಂದ ಒಂದಕ್ಕೊಂದು ಸಂಬಂಧವಿಲ್ಲದ ಗ್ರಾಮಗಳನ್ನು ಸೇರಿಸಲಾಗಿದೆ ಎಂದು ಸವಸುದ್ದಿ ಆರೋಪಿಸಿದರು.
ಈ ಕ್ಷೇತ್ರ ವಿಂಗಡಣೆ ರದ್ದಾಗಬೇಕು ಎಂದ ಅವರು, ಇದಕ್ಕಾಗಿ ಹೈಕೋರ್ಟ್ ತನಕವೂ ಹೋಗಲು ತಾವು ಸಿದ್ಧವಿರುವುದಾಗಿ ಹೇಳಿದರು.
ಇನ್ನೊಬ್ಬ ಕಾಂಗ್ರೆಸ್ ಮುಖಂಡ ಗುರುನಾಥ ಗಂಗನ್ನವರ ಮಾತನಾಡಿ, ಜಿ.ಪಂ.ಗಳಿಗೆ ಅನುದಾನ ಬರುವುದೇ ಅಪರೂಪ. ಹೀಗೆ ದೂರದ ಹಳ್ಳಿಗಳನ್ನು ಜಿ. ಪಂ. ಕ್ಷೇತ್ರಕ್ಕೆ ಸೇರಿಸದರೆ ಅಭಿವೃದ್ಧಿ ಹೇಗಾಗಬೇಕು ಎಂದು ಪ್ರಶ್ನಿಸಿದರು.
ವಿಂಗಡಣೆಯಲ್ಲಿ ಯಾವುದೇ ನಿಯಮಗಳ ಪಾಲನೆ ಆಗಿಲ್ಲ. ಜಿಲ್ಲಾಧಿಕಾರಿಗಳೂ ಕೂಡ ಉಸ್ತುವಾರಿ ಸಚಿವರು ಹಾಗೂ ಶಾಸಕರ ಕೈಗೊಂಬೆಯಾಗಿ ಕೆಲಸಮಾಡಿದ್ದಾರೆ. ಕೇವಲ ತಮ್ಮ ಹಿಂಬಾಲಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾಡಲಾಗಿದೆ ಆದ್ದರಿಂದ ಇದನ್ನು ರದ್ದುಪಡಿಸಬೇಕು. ಮೊದಲು ಇದ್ದ ವಡೇರಹಟ್ಟಿ ಜಿ.ಪಂ.ಕ್ಷೇತ್ರವನ್ನು ಪುನರ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಭಾಸ ಲೋಕನ್ನವರ ಹಾಗೂ ಶಿವಾನಂದ ಮಡಿವಾಳರ ಉಪಸ್ಥಿತರಿದ್ದರು.