ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿಗೆ ವಹಿಸಿದೆಯಾದರೂ ಪ್ರಕರಣದ ಮುಖ್ಯ ವ್ಯಕ್ತಿಯಾಗಿರುವ ಸಿಡಿ ಯುವತಿ ಎಸ್ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಳೆ.
ಇಂದು ಅಜ್ಞಾತ ಸ್ಥಳದಿಂದ ಮತ್ತೊಂದು ವಿಡಿಯೋ ಹರಿಯಬಿಟ್ಟಿರುವ ಯುವತಿ, ಎಸ್ಐಟಿ ಯಾರ ಪರ ಇದ್ದಾರೆ ? ಎಂದು ಪ್ರಶ್ನಿಸಿದ್ದಾಳೆ. ನನಗೆ ನನ್ನ ತಂದೆ-ತಾಯಿಯ ಸುರಕ್ಷತೆ ಮುಖ್ಯ. ನನ್ನ ತಂದೆ, ತಾಯಿಗೆ ನಾನು ತಪ್ಪೇ ಮಾಡಿಲ್ಲ ಎಂಬುದು ಗೊತ್ತಿದೆ. ನನ್ನ ಅಪ್ಪ-ಅಮ್ಮ ಸ್ವ-ಇಚ್ಛೆಯಿಂದ ದೂರು ಕೊಡಲು ಸಾಧ್ಯವೇ ಇಲ್ಲ ಎಂದಿದ್ದಾಳೆ.
ನನ್ನ ತಂದೆ-ತಾಯಿಗೆ ರಕ್ಷಣೆ ನೀಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಮೇಶಕುಮಾರ್ ಹಾಗೂ ಮಹಿಳಾ ಸಂಘಟನೆಗೆ ಯುವತಿ ಮನವಿ ಮಾಡಿದ್ದಾಳೆ. ನನ್ನ ತಂದೆ-ತಾಯಿ ಸುರಕ್ಷಿತವಾಗಿದ್ದಾರೆ ಎಂಬುದು ಖಾತ್ರಿಯಾದ ಬಳಿಕವೇ ನಾನು ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡುತ್ತೇನೆ ಎಂದಿದ್ದಾಳೆ.
ಮಾ. 12ರಂದು ಕಮಿಷನರ್ ಹಾಗೂ ಎಸ್ಐಟಿಗೆ ನಾನೊಂದು ವಿಡಿಯೋ ಮಾಡಿ ತಲುಪಿಸಿದ್ದು, ನಾನು ಎಸ್ಐಟಿಗೂ ತಲುಪಿಸಿದ್ದೇನೆ. ಆದರೆ ಮಾ. 13ರಂದು ರಮೇಶ ಜಾರಕಿಹೊಳಿ ತರಾತುರಿಯಲ್ಲಿ ದೂರು ನೀಡುತ್ತಾರೆ. ಅವರು ದೂರುಕೊಟ್ಟ ಅರ್ಧಗಂಟೆಯಲ್ಲಿ ನನ್ನ ವಿಡಿಯೋ ಹೊರಬಿಡುತ್ತಾರೆ. ಇದೆಲ್ಲವನ್ನು ನೋಡಿದರೆ ಎಸ್ಐಟಿ ಯಾರ ಪರ ಇದೆ ಎಂಬ ಅನುಮಾನ ಮೂಡುತ್ತದೆ ಎಂದಿದ್ದಾಳೆ. ಇನ್ನು ಎರಡು ದಿನದಲ್ಲಿ ನ್ಯಾಯ ಸಿಗುವುದಾಗಿ ಯುವತಿ ವಿಡಿಯೋ ಭರವಸೆ ವ್ಯಕ್ತಪಡಿಸಿದ್ದಾಳೆ.