ದಲಿತ ಕವಿ, ಬಂಡಾಯ ಕವಿ ಎಂದು ಹೆಸರಾಗಿದ್ದ ಡಾ. ಸಿದ್ಧಲಿಂಗಯ್ಯ ಕೊರೋನಾ ದೆಸೆಯಿಂದಾಗಿ ಅಸ್ವಸ್ಥತೆಯ ನಂತರ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರಿನ ರಂಗದೊರೈ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ಡಾ. ಸಿದ್ಧಲಿಂಗಯ್ಯ ಚಿಕಿತ್ಸೆ ಫಲಕಾರಿಯಾಗದೆ ತಮ್ಮ ೬೭ ನೇ ವಯಸ್ಸಿನಲ್ಲಿ ತೀರಿಹೋದರು ಎಂಬುದಾಗಿ ತಿಳಿದುಬಂದಿದೆ. ವಿಪರ್ಯಾಸವೆಂದರೆ ಸಿದ್ಧಲಿಂಗಯ್ಯ ಅವರಿಗೆ ಕೋವಿಡ್ ಕಾಣಿಸಿಕೊಂಡಾಗ ಆಸ್ಪತ್ರೆಗಳಿಗೆ ಎಡತಾಕಿದರೂ ಬೆಡ್ ಸಿಕ್ಕಿರಲಿಲ್ಲ. ಕೊನೆಗೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಪ್ರಯತ್ನದ ಫಲವಾಗಿ ರಂಗದೊರೈ ಆಸ್ಪತ್ರೆಯಲ್ಲಿ ಬೆಡ್ ದೊರಕಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಮೊನ್ನೆ ತಾನೆ ಮಣಿಪಾಲ್ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿತ್ತು.
ಡಾ. ಸಿದ್ಧಲಿಂಗಯ್ಯ ಅವರು ಸಾಮಾಜಿಕ ಸುಧಾರಣೆ, ದಲಿತೋದ್ಧಾರಕ್ಕಾಗಿ ಕಥೆ, ಕವಿತೆ, ನಾಟಕಗಳನ್ನು ಬರೆದವರು. ವಿಮರ್ಶೆ, ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿಯೂ ಪ್ರಸಿದ್ಧರಾಗಿದ್ದರು.
ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ ೧೯೫೪ ರಲ್ಲಿ ಜನಿಸಿದ ಅವರು ಅಂಬೇಡ್ಕರ್ ಮುಂತಾದವರ ವಿಚಾರಧಾರೆಗಳನ್ನು ಅಭ್ಯಾಸ ಮಾಡಿ ಅವರಿಂದ ಆಕರ್ಷಿತರಾಗಿ ದಲಿತೋದ್ಧಾರಕ ಸಾಹಿತ್ಯವನ್ನೇ ರಚಿಸುತ್ತಿದ್ದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಸಿದ್ಧಲಿಂಗಯ್ಯ ಅವರ ಮುಡಿಗೇರಿವೆ.