ಮೂಡಲಗಿ: ದೇಶ ಸೇವೆಯಲ್ಲಿ ಸೈನಿಕರು ಹಾಗೂ ಪತ್ರಿಕಾರಂಗದವರು ಪ್ರತಿ ಕ್ಷಣವು ದೈನಂದಿನ ಬದುಕಿನಲ್ಲಿ ನಿರಂತರವಾಗಿ ಸೇವೆಯಲ್ಲಿ ನಿರತರಾಗಿರುತ್ತಾರೆ. ದೇಶದ ಭದ್ರ ಬುನಾದಿ ಯಾಗಿ ಕಾರ್ಯ ನಿರ್ವಹಿಸಿ ದೇಶದ ಜನತೆಯ ಹಾಗೂ ಅತಿವೃಷ್ಟಿ ಅನಾವೃಷ್ಟಿಗಳು ಸಂಭವಿಸಿದಾಗ ಪ್ರಾಣದ ಹಂಗನ್ನು ತೊರೆದು ಹೋರಾಡುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಜರುಗಿದ ನಿವೃತ್ತ ಯೋಧರಿಗೆ ಸತ್ಕಾರ ಹಾಗೂ ನೂತನ ಬಸವ ಕ್ರಾಂತಿ ದಿನಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೃಷಿಕ, ಸೈನಿಕ, ಶಿಕ್ಷಕ ಈ ವೃತ್ತಿಗಳು ಶ್ರೇಷ್ಠವಾದವುಗಳಾಗಿವೆ. ಪ್ರಸಕ್ತ ದಿನಗಳಲ್ಲಿ ಭಯೋತ್ಪಾದನೆ ಎಂಬ ಸಾಮಾಜಿಕ ಪಿಡುಗಿನಿಂದಾಗಿ ಜಗತ್ತು ತತ್ತರಿಸಿ ಹೋಗಿದೆ. ಭಯೋತ್ಪಾದನೆ ಹಾಗೂ ಆಂತರಿಕ ಭದ್ರತೆಯ ದೃಷ್ಟಿಯಲ್ಲಿ ಸೈನಿಕರ ಪಾತ್ರ ಬಹು ಮುಖ್ಯವಾಗಿದೆ. ತಂದೆ ತಾಯಿ ಬಂಧು ಬಳಗದಿಂದ ದೂರವಿದ್ದು, ದೇಶ ಸೇವೆಯಲ್ಲಿ ನಿರಂತರ ಕಾರ್ಯನಿರ್ವಹಿಸಿ ತಾಯ್ನಾಡಿನ ರಕ್ಷಣೆಯಲ್ಲಿ ನಿರತರಾಗಿರುತ್ತಾರೆ. ನಿವೃತ್ತಿ ಬದುಕಿನಲ್ಲಿ ಅವರು ಯಶಸ್ವಿಯಾದ ಸುಂದರ ಬದುಕು ತಮ್ಮದಾಗಿರಲೆಂದು ಹಾರೈಸಿದರು.

ಪ್ರತಿ ದಿನವು ಬೆಳಗಿನ ಸಮಯದಲ್ಲಿ ಪತ್ರಿಕೆಗಳನ್ನು ಹಂಚುವದು ನಂತರ ಸುದ್ದಿಗಳನ್ನು ತಯಾರಿಸಿ ಕಾರ್ಯಾಲಯಕ್ಕೆ ಕಳುಹಿಸುವ ಕಾರ್ಯ ನಿರಂತರವಾದದ್ದು. ಪತ್ರಿಕೆಗಳನ್ನು ಸುದ್ದಿಗಳ ಪುಟ ವಿನ್ಯಾಸಗೊಳಿಸಿ ಮುದ್ರಿಸಿ ಓದುಗರಿಗೆ ತಲುಪಿಸುವ ಕಾರ್ಯ ಮಹತ್ತರವಾದದ್ದು. ಅಂತಾರಾಷ್ಟ್ರೀಯ ರಾಷ್ಟ್ರೀಯ ರಾಜ್ಯ ಜಿಲ್ಲೆ ಸ್ಥಳೀಯ ಸುದ್ದಿ ಹಾಗೂ ಅಂಕಣಗಳಾದ ಕ್ರೀಡೆ, ಕೃಷಿ, ಧಾರ್ಮಿಕ, ಶೈಕ್ಷಣಿಕ, ಸ್ಪರ್ಧಾತ್ಮಕ, ಚಿತ್ರಕಲೆ, ಆರೋಗ್ಯ ಹಾಗೂ ಮನೊರಂಜನೆಯಂತಹ ವಿಭಿನ್ನ ಶೈಲಿಯ ಲೇಖನಗಳ ಮೂಲಕ ಓದುಗರ ಮನ ತಣಿಸುವ ಕಾರ್ಯ ಮೆಚ್ಚುವಂತಹದು. ನಮ್ಮ ನಾಡಿನ ವಿಶ್ವ ಗುರು ವಚನಗಳ ಸಂವಿಧಾನ ಮಹಾನ್ ವ್ಯಕ್ತಿತ್ವದ ಬಸವಣ್ಣನವರ ಹೆಸರಿನಿಂದ ಪ್ರಾರಂಭವಾಗಿರುವ ಬಸವ ಕ್ರಾಂತಿ ಪತ್ರಿಕೆಗೆ ಶುಭ ಹಾರೈಸಿದರು.
ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಮಾತನಾಡಿ, ದೇಶಕ್ಕಾಗಿ ತಮ್ಮ ಅತ್ಯಮೂಲ್ಯ ಜೀವನದ ಅರ್ಧ ಭಾಗದಷ್ಟು ಸೇನೆಯಲ್ಲಿ ಕಳೆದು ನಮಗಾಗಿ ಮಿಸಲಾಗಿಸಿರುತ್ತಾರೆ. ಪತ್ರಿಕೆಗಳು ಸಮಾಜದ ಅಂಕುಡೊಂಕುಗಳನ್ನು ಹೊರಕ್ಕೆ ತಂದು ಸರಿ ತಪ್ಪುಗಳನ್ನು ಬಿಂಬಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ ಎಂದರು.
ನಿವೃತ್ತ ಸೈನಿಕರಾದ ಸಂತೋಷ ಜಾಧವ, ಮೋಹನ ಜಾಧವ, ಬಾಳು ಶಿವಾಪೂರ ಸತ್ಕಾರ ಸ್ವೀಕರಿಸಿ ಮಾತನಾಡಿ, ದೇಶ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ತಂದೆ ತಾಯಿ ಬಂಧು ಬಳಗದ ಅಗಲಿಕೆಯ ನೋವಿತ್ತು ಆದರೆ ಭಾರತಾಂಬೆಯ ಮಡಿಲಲ್ಲಿ ಆಕೆಯ ಸೇವಾ ಕಾರ್ಯ ನಮಗೆ ದೊರೆತಿರುವದು ಹೆಮ್ಮೆಯ ವಿಷಯವಾಗಿದೆ. ದೇಶ ಸೇವೆಗೆ ಸೇರ್ಪಡೆಯಾಗಲು ಬೇಕಾಗುವ ದೈಹಿಕ ಕಸರತ್ತು, ತರಬೇತಿ, ಕರ್ತವ್ಯ ನಿರ್ವಹಣೆಯ ಬಗೆ, ಸಿಗುವಂತಹ ಸರಕಾರಿ ಸೇವಾ ಸೌಲಭ್ಯಗಳು, ವಿಶಾಲ ಭಾರತ ದೇಶದ ಭಾಷೆ, ಸಂಸ್ಕೃತಿ, ಭೌಗೋಳಿಕ ಅನುಭವಗಳನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಸಂಸ್ಥೆಯ ಅಧ್ಯಕ್ಷ ಎಲ್.ವಾಯ್ ಅಡಿಹುಡಿ ಮಾನಾಡಿ, ಭಾವಿ ಸೈನಿಕರಿಗೆ ತರಬೇತಿ ಹಾಗೂ ದೈಹಿಕ ಅರ್ಹತೆ, ಸಾಮಾನ್ಯ ಜ್ಞಾನ ಅತ್ಯವಶ್ಯಕವಾಗಿದೆ. ಸೇವೆಯಲ್ಲಿದ್ದಾಗ ನಿವೃತ್ತಿಯ ಬದುಕಿನ ಕುರಿತು ವಿವರಿಸಿದರು.
ನಿವೃತ್ತ ಸೈನಿಕರಾದ ಸಂತೋಷ ಜಾಧವ, ಮೋಹನ ಜಾಧವ, ಬಾಳು ಶಿವಾಪೂರ ಅವರನ್ನು ಸತ್ಕರಿಸಿ, ನೂತನ ಪತ್ರಿಕೆಯಾದ ಎಸ್ ಎನ್ ಪೋಲಿಸಗೌಡ ಸಂಪಾದಕತ್ವದ ಬಸವ ಕ್ರಾಂತಿ ದಿನಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಮಲಿಕ್ ಹುಣಶ್ಯಾಳ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಅಲ್ತಾಫ್ ಹವಾಲ್ದಾರ, ಶಿಕ್ಷಣ ಸಂಯೋಜಕರಾದ ಟಿ. ಕರಿಬಸವರಾಜು, ಸತೀಶ ಬಿ.ಎಸ್, ಮುಖ್ಯೋಪಾಧ್ಯಯರಾದ ಎಸ್.ಐ ಭಾಗೋಜಿ, ಸಿ.ಬಿ ಪೂಜೇರಿ, ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್ ಮೀಶಿ, ಎಸ್.ಬಿ ಕಮತೆ, ಯಲ್ಲಪ್ಪ ಮಬನೂರ, ಮನೋಹರ ಲಮಾಣಿ, ಕೃಷ್ಣಾ ಗಾಡಿವಡ್ಡರ, ಕೆ.ವಾಯ್ ಮೀಶಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.