ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಓದಿ, ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವುದು ಸರ್ವೇ ಸಾಮಾನ್ಯ ಆಗಿದೆ, ಆದರೆ ನಮ್ಮ ದೇಶದ ಮಾನವ ಸಂಪನ್ಮೂಲ, ಯುವ ಶಕ್ತಿಯ ಬಳಕೆ ನಮ್ಮ ದೇಶದ ಆಸ್ತಿ ಅಲ್ಲವೆ…. ಇದು ಭಾರತದಲ್ಲಿ ಬಳಕೆ ಆಗಬೇಕು.
ಎಷ್ಟೊ ಉದ್ಯಮಿಗಳು, ಶ್ರೀಮಂತರು, ನಟರು, ಕ್ರೀಡಾಪಟುಗಳು ಸ್ವಲ್ಪ ಹಣ, ಪ್ರಚಾರ, ಪಾಪುಲರಿಟಿ ಸಿಕ್ಕರೆ ಸಾಕು ವಿದೇಶಗಳಲ್ಲಿ ನೆಲೆಯೂರುತ್ತಾರೆ. ಆದರೆ ರತನ್ ಟಾಟಾ ವಿದೇಶದಲ್ಲಿ ಓದಿ ಭಾರತದಲ್ಲಿ ಉದ್ಯೋಗಕ್ಕೆ ಸೇರುತ್ತಾರೆ. ಅವರಿಗೆ ವಿದೇಶದಲ್ಲಿ ಅವಕಾಶಗಳು ಕಮ್ಮಿ ಇರಲಿಲ್ಲ, ನಮ್ಮ ಮಾತೃಭೂಮಿಯಲ್ಲಿ ಕೆಲಸ ಮಾಡುವ ಸರಳತೆ ಅವರದ್ದು.
ಅಡುಗೆ ಮನೆಯಿಂದ ಆಕಾಶದ ವರೆಗೂ, ಉಪ್ಪಿನಿಂದ ಉಕ್ಕಿನ ವರೆಗೂ ಎಲ್ಲ ಕ್ಷೇತ್ರಗಳಲ್ಲಿ ಗಟ್ಟಿಯಾಗಿ ನೆಲೆಯೂರಿದ ಟಾಟಾ ಕಂಪನಿ, ಟಾಟಾ ಟಾಟಾ ಎಲ್ಲಿನೋಡಿದರಲ್ಲಿ ಟಾಟಾ ಕಂಪನಿಯ ವಸ್ತುಗಳೆ.
ಪ್ರಸಿದ್ಧ ‘ಟಾಟ’ ಉದ್ಯಮಗಳ ಉನ್ನತ ಸ್ಥಿತಿಗೆ ಕಾರಣರಾದ ಆ ಸಂಸ್ಥೆಯ ಮಾಜಿ ಮುಖ್ಯಸ್ಥರೂ ಹಾಗೂ ಟಾಟಾ ಸಾರ್ವಜನಿಕ ಹಿತಾಸಕ್ತಿ ಉದ್ದೇಶದ ಚಟುವಟಿಕೆಗಳ ಮುಖ್ಯಸ್ಥರೂ ಆಗಿದ್ದ ರತನ್ ನಾವಲ್ ಟಾಟ ಸಾವು ನೋವಿನ ಸಂಗತಿ.
ರತನ್ ನಾವಲ್ ಟಾಟಾ ಅವರು 1937ರ ಡಿಸೆಂಬರ್ 28ರಂದು ಜನಿಸಿದರು.ತಂದೆ ತಾಯಿಯ ಒಳ ಜಗಳ, ತಂದೆ ತಾಯಿ ಒಬ್ಬರಿಂದೊಬ್ಬರು ದೂರ ಆದಾಗ, ಅನಿವಾರ್ಯವಾಗಿ ಅಜ್ಜಿಯ ಮನೆಯಲ್ಲಿ ಬಾಲ್ಯ ಕಳೆದರು.. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇವರಿಗೆ ಒಂದು ದೊಡ್ಡ ಕಾರಿನಲ್ಲಿ ಶಾಲೆಗೆ ಕಳುಹಿಸುತ್ತಿದ್ದರು. ಸಾಮಾನ್ಯ ಜನರ ಹಾಗೆ ಜೀವನ ಮಾಡುವುದು ಇವರಿಗೆ ಇಷ್ಟವಂತ್ತೆ ಎಂಬ ಅವರ ಮಾತುಗಳು ಅವರೊಳಗಿನ ಅಸಾಮಾನ್ಯತೆಯಲ್ಲಿನ ಸಾಮಾನ್ಯತೆಯ ಆಳದ ಬಗ್ಗೆ ಒಳಹೊಕ್ಕುವಂತೆ ಮಾಡುತ್ತದೆ.
ವಿದೇಶದಲ್ಲಿ ಓದು ಮುಗಿಸಿ ಐ.ಬಿ.ಎಮ್ ಸಂಸ್ಥೆಯಲ್ಲಿ ರತನ್ ಟಾಟ ಕೆಲಸಕ್ಕೆ ಆದೇಶ ಪತ್ರ ತೆಗೆದುಕೊಂಡಿದ್ದರು. ಜೆ.ಆರ್.ಡಿ ಟಾಟ ಅವರು ರತನ್ ಅವರನ್ನು ಭಾರತಕ್ಕೆ ಬಾ ಎಂದು ಕರೆದಾಗ ಟಾಟ ಸಂಸ್ಥೆಯಲ್ಲಿನ ಹಲವಾರು ಇಂಜಿನಿಯರುಗಳ ಮಧ್ಯೆ ಒಬ್ಬನಾಗಿ ಯಂತ್ರಗಳ ಮಧ್ಯೆ ಕೆಲಸ ಮಾಡಲು ಪ್ರಾರಂಭ ಮಾಡಿ ಮುಂದೆ 1991ರಿಂದ ಟಾಟಾ ಸಮೂಹಗಳ ಮುಖ್ಯಸ್ಥರೇ ಆದರು.
ಇವರ ಹಿಂದಿನ ಟಾಟ ಸಮೂಹದ ಮುಖ್ಯಸ್ಥ ‘ಭಾರತರತ್ನ ಜೆ.ಆರ್.ಡಿ ಟಾಟ’ ಅಪಾರ ಸಾಧಕ. ಒಂದು ರೀತಿಯಲ್ಲಿ ವರ್ಣರಂಜಿತ ಮೋಹಕ ವ್ಯಕ್ತಿತ್ವ ಅವರದು. ಅವರ ಸ್ಥಾನದಲ್ಲಿ ಈ ಗಂಭೀರ ಹೃದಯಿ ಬಂದಾಗ ಅಯ್ಯೋ ಆ ಸ್ಥಾನದಲ್ಲಿ ಈತ ಸಲ್ಲುತ್ತಾನೆಯೇ ಎಂಬ ಮಾತು ಎಲ್ಲೆಲ್ಲಿಯೂ ಮೂಡಿತ್ತು. ಆದರೆ ರತನ್ ಮಾತನಾಡಲಿಲ್ಲ. ಸುಮ್ಮನೆ ಕೆಲಸ ಮಾಡುತ್ತಾ ಹೋದರು. ಈಗ ಅವರು ಮಾಡಿದ್ದೆಲ್ಲಾ ತಾನೇ ತಾನಾಗಿ ಪುಟಗಟ್ಟಲೆ ಕಥೆ ಹೇಳುತ್ತಿವೆ. ಜೆ.ಆರ್.ಡಿ ಅವರು ನಿವೃತ್ತರಾದ ದಿನಗಳಿಂದ ರತನ್ ಆಳ್ವಿಕೆಯ ಕೊನೆಯ ಅವಧಿಯ ವೇಳೆಗೆ (ಡಿಸೆಂಬರ್ 2012) ಟಾಟಾ ಸಮೂಹ ನಲವತ್ತು ಪಟ್ಟು ಬೆಳೆಯಿತು. ವಿಶ್ವದ ಪ್ರಮುಖ ಅಮೂಲ್ಯತೆಗಳನ್ನು ತನ್ನದಾಗಿಸಿಕೊಂಡಿತು. ಜೊತೆಗೆ ತನ್ನನ್ನು ಎಲ್ಲೆಡೆ ಅಮೂಲ್ಯವಾಗಿಸಿಕೊಂಡು ಬೆಳೆಯಿತು.
ಇಂದು ವ್ಯಾಪಾರಿ ಉದ್ಯಮಗಳಲ್ಲಿ ಬಿಲಿಯನ್, ಟ್ರಿಲಿಯನ್ ಡಾಲರುಗಳ ಹಣ, ಷೇರು ಮೌಲ್ಯಗಳ ಬಗ್ಗೆ ಮಾತುಗಳನ್ನು ಕೇಳುತ್ತೇವೆ. ಅದರ ಪ್ರಮುಖ ವ್ಯಕ್ತಿಗಳು ವೈಯಕ್ತಿಕವಾಗಿ ಎಷ್ಟು ಬಿಲಿಯನ್ನುಗಳ ಸರದಾರರು ಎಂದು ಪ್ರತಿದಿನ ಓದುತ್ತೇವೆ. ಅಂತಹ ಪ್ರಮುಖ ಬಿಲ್ಲಿಯನ್ನಾಧಿಪತಿ ರತನ್ ಟಾಟ ಅವರನ್ನು ನೋಡಿದವರಿಗೆ ಅದು ಆ ರತನ್ ಎಂಬ ಈ ‘ರತ್ನ’ ವ್ಯಕ್ತಿತ್ವದ ಮುಂದೆ ಅತೀ ಸಣ್ಣದು ಎನಿಸುತ್ತದೆ. ಬ್ರಹ್ಮಚಾರಿಯಾದ,ಇವರು ಕೂಡ ಒಂದು ಕಾಲದಲ್ಲಿ ಪ್ರೀತಿಯ ಸೆರೆಯಲ್ಲಿ ಸಿಲುಕಿ ಸೋತವರೆ, ಹಾಗಂತ ಜೀವನ ದಾರಿಯಲ್ಲಿ ಛಲ, ಉಲ್ಲಾಸ್,ಉತ್ಸಾಹ ಕಳೆದುಕೊಳ್ಳದೆ ಮುಂದೆ ಸಾಗಿದರು.
ಜೀವನದಲ್ಲಿ ಬಹಳಷ್ಟು ವರ್ಷಗಳ ಕಾಲ ಸಾಮನ್ಯವಾದ ಬ್ಯಾಚಲರ್ ಅಕಾಮಡೇಷನ್ ಎಂದು ಬಣ್ಣಿಸಲಾಗುವ ಜೋಪಡಿಯಲ್ಲಿ ಜೀವನ ಕಳೆದ ಅವರಿಗೆ ಅವರ ಶ್ರೀಮಂತಿಕೆ ಎಂದೂ ಪ್ರಾಧಾನ್ಯವಾಗಲಿಲ್ಲ. ಅವರಿಗೆ ಬದುಕಿನ ಶ್ರೀಮಂತಿಕೆಯು ಸಾಧನೆ, ಪರಿಶ್ರಮ ಮತ್ತು ಬದುಕಿನ ಮೌಲ್ಯಗಳಿಗೆ ಸೇರಿದ್ದಾಗಿತ್ತು.
ಈ ನಮ್ಮ ದೇಶದಲ್ಲಿ ಇಂತಹ ಅತ್ಯುತ್ತಮ ರತ್ನಗಳು ಅಲ್ಲಲ್ಲಿ ಅರಳಿದ ಕಮಲಗಳಂತೆ ಕಂಗೊಳಿಸುತ್ತವೆ. ಆದರೆ ಈ ಕಮಲಗಳ ಆಚೆಗೆ ಹರಡುತ್ತಿರುವ ಕೆಸರಿನಿಂದ ಭಾರತ ದೇಶ ತಲ್ಲಣಗೊಂಡಿದೆ. ನೈತಿಕ, ಸಾಮಾಜಿಕ, ಆರ್ಥಿಕ ಬಡತನಗಳ, ಭ್ರಷ್ಟ-ಭಂಡತನಗಳ ಮಧ್ಯೆ ಕಮಲಗಳು ಉದ್ಭವಿಸುವುದೇ ದುಸ್ತರವೇನೋ ಎನಿಸುತ್ತವೆ. ಇಂತಹ ಪ್ರಶ್ನೆಗಳು ಬಂದಾಗಲೆಲ್ಲಾ ರತನ್ ನಾವಲ್ ಟಾಟ ಅವರು ತಮ್ಮ ಹಿಂದಿನವರ ಮಾನವೀಯ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಧಾನರಾಗಿ ಕಂಗೊಳಿಸಿದ್ದಾರೆ.
ಯಾವತ್ತಿಗೂ ಶ್ರೀಮಂತರ ಪಟ್ಟಿಯಲ್ಲಿ ಇರುವುದಕ್ಕೆ ಇಶ್ಚಿಸಲಿಲ್ಲ, ಆದರೂವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮೊದಲೆನೆಯ ಸ್ಥಾನದಲ್ಲಿ ಇವರದ್ದೆ ಹೆಸರು ಇರುತ್ತಿತ್ತು.
ಬ್ರಿಟಿಷ್ ಕಾಲದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಂಪನಿಯನ್ನು ಸ್ಥಾಪಿಸಿದ ಕೀರ್ತಿ ಟಾಟಾ ಗ್ರೂಪ್ಗೆ ಸಲ್ಲುತ್ತದೆ.
ಟಾಟ ಸಂಸ್ಥೆಯವರು ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಹೋದಾಗ, ಬಂಗಾಳದಲ್ಲಿ ಕಾರು ನಿರ್ಮಾಣದ ಘಟಕ ಪ್ರಾರಂಭಿಸಿದಾಗ ಹಾಗೂ ಹಿಂದಿನ ದಶಕದಲ್ಲಿ ತಾಂಡವ ಆಡಿದ ದೂರವಾಣಿ ವಿಚಾರದ ಪ್ರಕರಣಗಳಲ್ಲಿ ರಾಜಕೀಯ ಮತ್ತು ಆಡಳಿತಾತ್ಮಕ ಭ್ರಷ್ಟವ್ಯವಸ್ಥೆಗಳು ಹೇಗೆ ನಡೆದುಕೊಂಡಿವೆ ಎಂಬುದು ದೇಶಕ್ಕೆ ತಿಳಿದಿರುವ ವಿಚಾರ. ರತನ್ ನಾವಲ್ ಟಾಟ ಅವರಿಗೆ ಪ್ರಗತಿ ಎಂದರೆ, “ಏನಾದರಾಗಲೀ ಮಾಡಿಯೇ ತೀರುತ್ತೇನೆ” ಎಂಬ ಅಹಂಕಾರವಲ್ಲ. ಈ ಗಂಭೀರ ವಾತಾವರಣಗಳಲ್ಲೆಲ್ಲಾ ಟಾಟ ಸಂಸ್ಥೆ ತನ್ನನ್ನು ಹಿಂತೆಗೆದುಕೊಳ್ಳುವಂತೆ ಮಾಡಿದರು. ಜೊತೆಗೆ ಸಾಧನೆ ಎಂದರೆ ಏನು ಎಂದು ಲೋಕಕ್ಕೆ ತೋರಿಸಿಕೊಟ್ಟರು.
ವಿದೇಶದಲ್ಲಿ ಆಯಿಷಾರಾಮಿ ಹೋಟಲ್ನಲ್ಲಿ ಇವರಿಗೆ ಪ್ರವೇಶ ಕೊಡದಿದ್ದಕ್ಕೆ, ಈಗ ಜಗದ್ವಿಖ್ಯಾತ ತಾಜ್ ಹೋಟೆಲ್ ಇವರ ಕೊಡುಗೆ, ಅಟ್ಲಿಸ್ಟ್ ಒಂದು ಕಪ್ ಕಾಫಿಯಾದರು ಸರಿ ತಾಜ್ ಹೋಟೆಲ್ ನಲ್ಲಿ ಕುಡಿಯುವ ಆಸೆ ಪ್ರತಿ ಸಾಮಾನ್ಯ ವ್ಯಕ್ತಿಯ ಕನಸು ಕೂಡ ಆಗಿದೆ.
ಮುಂಬೈನಲ್ಲಿ ಭಯೋತ್ಪಾದನೆಯ ದೆಸೆಯಿಂದ ಅವರ ಹೋಟೆಲ್ ನಿರ್ನಾಮವಾದ ಹಿನ್ನಲೆಯಲ್ಲಿ, ಅಲ್ಲಿನ ಎಲ್ಲಾ ಉದ್ಯೋಗಿಗಳನ್ನೂ ಅಷ್ಟೇ ಅಲ್ಲ ಆ ಹೋಟೆಲಿನ ಬಳಿ ಇದ್ದ ಪಾವ್ ಬಾಜಿ ಮಾರಾಟಗಾರ, ಪಾನ್ ವಾಲ ಇತ್ಯಾದಿ ಎಲ್ಲರನ್ನೂ ಅವರ ಬದುಕಿನ ಅವಶ್ಯಕತೆಗಳ ಬಗ್ಗೆ ಗೌರವಯುತವಾಗಿ ನೋಡಿಕೊಂಡ ರತನ್ ಅವರ ಬಗ್ಗೆ ಇಂದು ಭಾರತದ ಸಾಮಾನ್ಯ ಪ್ರಜೆ ಕೂಡಾ ಅತ್ಯಂತ ಗೌರವಯುತನಾಗಿ ಮಾತನಾಡುತ್ತಿದ್ದಾನೆ. 2012ರ ಅಂತ್ಯದಲ್ಲಿ ರತನ್ ಟಾಟಾ ಅವರು ತಮ್ಮ ಅಧಿಕಾರವನ್ನು ಸೈರಸ್ ಮಿಸ್ತ್ರಿ ಎಂಬವರಿಗೆ ಹಸ್ತಾಂತರಿಸಿ ನಿವೃತ್ತಿಗೆ ಬಂದರು. ಮುಂದೆ ಮಿಸ್ತ್ರಿ ಅವರ ಉಚ್ಛಾಟನೆಯಲ್ಲಿ ಪಾತ್ರವಹಿಸಿ 2016 ವರ್ಷದಲ್ಲಿ ಕೆಲಕಾಲ ಪುನಃ ಕಾರ್ಯನಿರ್ವಹಿಸಿದರು. ಟಾಟಾ ಸಂಸ್ಥೆಯ ಜನೋಪಯೋಗಿ ಚಟುವಟಿಕೆಗಳಲ್ಲಿ ಅವರ ನೇತೃತ್ವ ನಿರಂತರವಾಗಿ ಮುನ್ನಡೆದಿತ್ತು.
ಇಂತಹ ಸುಪುತ್ರರು ನಮ್ಮ ಕಾಲದಲ್ಲಿದ್ದರು ಎಂದು ಹೃದಯತುಂಬಿ ಬರುತ್ತಿತ್ತು.ತಡ ರಾತ್ರಿ ಇವರ ಸಾವಿನ ಸುದ್ದಿ ಅಷ್ಟೇ ವೇಗವಾಗಿ ಹಬ್ಬುತಿದಂತ್ತೆ ಮಲಗಿ ಭಾರತದ ಜನತೆಗೆ ಈ ಸುದ್ದಿ ನಿಜವೆ, ಒಮ್ಮೆ ಖಚಿತಪಡಿಸಿಕೊಳ್ಳಿ, ಭಾರತ ಮಾತೆಯ ಒಬ್ಬ ಶ್ರೇಷ್ಠ ಪುತ್ರ ಅಗಲಿರುವುದು ದುಃಖದ ಸಂಗತಿ ಎನ್ನುವ ಸಂದೇಶಗಳು ಹರಿದಾಡಿದವು .ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರತಿಯೊಂಬ್ಬ ಭಾರತೀಯ ಇವರ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಇವರ ಸರಳತೆ, ದೇಶದ ಜನತೆಗೆ ಇವರು ಕೊಟ್ಟ ಕೊಡುಗೆಗಳು, ಇವತ್ತಿನ ಇವರ ಸ್ಟೇಟಸ್ ಇಡೀ ಭಾರತೀಯರ ಮೊಬೈಲ ನಲ್ಲಿ ನೋಡಬಹುದು. ಇಂತಹ ಮಹಾತ್ಮಾಭಾರತ ಮಾತೆಯ ಮಡಿಲಲ್ಲಿ ಮತ್ತೆ ಹುಟ್ಟಿಬರಲಿ.
ನಂದಿನಿ ಸನಾಬಾಳ್ ಕಲಬುರಗಿ