ಜೀವನದ ವ್ಯವಹಾರದಲ್ಲಿ ನಾವೆಷ್ಟು ಸುಖಿಗಳು? ವ್ಯವಹಾರವೆ ಜೀವನವಾದಾಗ ಕೂಡು,ಕಳೆದು,ಗುಣಿಸಿ ಭಾಗಿಸೋದೆ ಕೆಲಸವಾಗುತ್ತದೆ. ಜೀವನದಲ್ಲಿ ವ್ಯವಹಾರಇರಬೇಕಷ್ಟೆ. ಇದನ್ನು ತತ್ವಜ್ಞಾನದಿಂದ ತಿಳಿದರೆ ಸಾಲ ಕಳೆಯುತ್ತದೆ.ತಂತ್ರಜ್ಞಾನದಿಂದ ಆಳಿದರೆ ಸಾಲ ಬೆಳೆದು ದು:ಖವೇ ಹೆಚ್ಚಾಗುತ್ತದೆ.
ತತ್ವಜ್ಞಾನ ದಲ್ಲಿ ಸಮಾನತೆ,ಸತ್ಯ,ಧರ್ಮ, ನ್ಯಾಯ, ನೀತಿ, ಸಂಸ್ಕಾರ,ಸಂಸ್ಕೃತಿಗಳಿದ್ದು ಅದನ್ನು ವ್ಯವಹಾರದ ರೂಪದಲ್ಲಿ ನೋಡಿಕೊಂಡು ಹಣಸಂಪಾದನೆಗಿಳಿದರೆ ಹಣದ ಲಾಭ ಪಡೆದು ಜ್ಞಾನದ ನಷ್ಟ ಅನುಭವಿಸಲೆಬೇಕು.
ಹಾಗೆಯೇ ತಂತ್ರಜ್ಞಾನದಲ್ಲಿಯೂ ಇದ್ದರೂ ಅಲ್ಲಿ ತತ್ವಜ್ಞಾನ ಬಿಟ್ಟು ವ್ಯವಹಾರ ನಡೆಸುವಾಗ ಜೀವನದ ಜೀವ ಮಾತ್ರ ಕಾಣುತ್ತದೆ. ಆತ್ಮ ಕಾಣೋದಿಲ್ಲವಾದ್ದರಿಂದ ತಿಳಿಯದೆ ನಡೆಸುವ ವ್ಯವಹಾರವಾಗುತ್ತದೆ.
ಸತ್ಯ ತಿಳಿದೂ ನಡೆಸುವ ಅಸತ್ಯದ ವ್ಯವಹಾರದಿಂದ ಭೂಮಿ ನಡುಗುತ್ತದೆ. ಭೂಮಿಯನ್ನು ಮುಂದಿಟ್ಟುಕೊಂಡು ಅಸತ್ಯದ,ಅಧರ್ಮದ,ಅನ್ಯಾಯದ ವ್ಯವಹಾರ ನಡೆಸಿ ಹಣ,ಅಧಿಕಾರ, ಸ್ಥಾನ ಪಡೆದವರೆಷ್ಟೋ ಜನರು ಈಗಲೂ ಭೂಮಿಯಿಂದ ಮುಕ್ತಿ ಸಿಗದೆ ಸಂಕಟದಲ್ಲಿ ಇದ್ದರೂ ಭೌತಿಕ ಜಗತ್ತಿಗೆ ಅವರು ಬಡವರಷ್ಟೆ. ಅವರ ಈ ಸ್ಥಿತಿಗೆ ಅಜ್ಞಾನ ಕಾರಣವಾದಾಗ ಜ್ಞಾನದ ಶಿಕ್ಷಣ ನೀಡಿ ಸಹಕರಿಸುವುದು ಮಾನವೀಯತೆಯಾಗುತ್ತದೆ.
ಶಿಕ್ಷಣದಲ್ಲಿಯೇ ಇನ್ನಷ್ಟು ಅಜ್ಞಾನತುಂಬಿ ವ್ಯವಹಾರ ನಡೆಸಿದರೆ ಇದರ ಪ್ರತಿಫಲ ಎಷ್ಟು ಕ್ರೂರವಾಗಿರಬಹುದು?
ಭೂಮಿಯನ್ನು ಧರ್ಮದಿಂದ ಉಳಿಸಿ ಬೆಳೆಸಬೇಕಾದವರೆ ಭೂಮಿಯನ್ನು ವ್ಯವಹಾರಕ್ಕೆ ಬಳಸಿಕೊಂಡರೆ ಧರ್ಮ ಎಲ್ಲಿದೆ? ಭೂಮಿ ಮೇಲಿರುವ ಜೀವ ಶಾಶ್ವತವಲ್ಲ.
ಜೀವಕ್ಕಾಗಿ ವ್ಯವಹಾರವಲ್ಲ. ಆತ್ಮಜ್ಞಾನದಿಂದ ವ್ಯವಹಾರ ನಡೆಸುವುದಕ್ಕೆ ತತ್ವಜ್ಞಾನ ಅರ್ಥ ವಾಗಬೇಕಿತ್ತು. ಅದರಲ್ಲಿಯೂ ರಾಜಕೀಯ ಬೆಳೆಸಿಕೊಂಡರೆ ನಷ್ಟ ಯಾರಿಗೆ?ಕಲಿಯುಗ ಹೇಗಿರುವುದೆಂದು ಶ್ರೀ ಕೃಷ್ಣ ಪರಮಾತ್ಮನೆ ತಿಳಿಸಿದಂತೆ ನಡೆದಿದೆ. ಪರಮಾತ್ಮನನ್ನು ವ್ಯವಹಾರದ ವಸ್ತು ಮಾಡಿ ಹಣ ಮಾಡೋದರಲ್ಲಿ ಅರ್ಥವಿದೆಯೆ?
ಹಣ ಬೇಕು.ಇದು ಸಾಮಾನ್ಯಜ್ಞಾನವನ್ನು ಅಳಿಸಿಹಾಕಿ ಆಳೋವಷ್ಟು ಇರಬಾರದಷ್ಟೆ. ಇದರಲ್ಲಿ ನಷ್ಟ ಕಷ್ಟ ಜೀವ ಅನುಭವಿಸುತ್ತದೆ. ಜೀವ ಒಳಗಿದೆ. ನೋವು ಒಳಗಿದೆ.
ಅನುಭವ ಒಳಗಾಗುತ್ತದೆ. ಆದರೂ ಹೊರಗಿನ ಜೀವಹಿಂಸೆ,ಪ್ರಾಣಹಿಂಸೆ ಮಾಡುವವರಿಗೆ ಸಹಕಾರ ನೀಡಿ ವ್ಯವಹಾರದಿಂದ ಹಣಗಳಿಸಿದರೆ, ಅವರ ಪಾಪಕ್ಕೆ ಸಹಕಾರ ನೀಡಿದ್ದಕ್ಕೆ ಶಿಕ್ಷೆಯೂ ಇರುವುದಲ್ಲವೆ? ಇಷ್ಟು ಸತ್ಯ ತಿಳಿದರೆ ನಮ್ಮ ಸಹಕಾರದ ಫಲ ಯಾರು ಹೇಗೆ ಅನುಭವಿಸುತ್ತಾರೆ.ಅದರಿಂದ ನಮಗೆ ಲಾಭ ನಷ್ಟವೇನು ಇದನ್ನು ತಡೆಯಬಹುದೆ?
ಆಧ್ಯಾತ್ಮ ಎಂದರೇನು?
ನಾನ್ಯಾರು? ಪ್ರಶ್ನೆಯವರೆಗೆ ಮನಸ್ಸನ್ನು ಒಳಗೆಳೆಯಬಹುದು. ಪರಮಾತ್ಮನನ್ನು ನಾನು ಆಳುವುದೆ? ಪರಮಾತ್ಮನೆ ನನ್ನ ಆಳುವುದೆ? ದಾಸ,ಶರಣರೆಂದರೆ ಯಾರು? ತತ್ವಜ್ಞಾನದ ದಾಸರಾದರೆ ಹಣವನ್ನು ಸತ್ಕರ್ಮದಿಂದ ಸಂಪಾದಿಸಿ ದಾನ ಮಾಡುತ್ತಾರೆ. ತಂತ್ರಜ್ಞಾನ ದ ಹಣವನ್ನೂ ಸತ್ಪಾತ್ರರಿಗೆ ದಾನ ಮಾಡಿದರೂ ಸಾಲ ತೀರುತ್ತದೆ.
ದಾನವನ್ನು ದಾನವರಿಗೆ ಮಾಡಬಾರದಷ್ಟೆ. ಎಷ್ಟು ಕೊಟ್ಟರೂ ತೃಪ್ತಿ ಸಿಗದಿದ್ದರೆ ವ್ಯರ್ಥವಲ್ಲವೆ? ಇನ್ನು ಭ್ರಷಾಚಾರದಿಂದ ಸಂಪಾದಿಸಿದ ಹಣವನ್ನು ಪಡೆಯುವುದರಿಂದಲೂ ಕಷ್ಟ ನಷ್ಟ ತಪ್ಪುವುದಿಲ್ಲ.
ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದಾಗಲೆ ದೇಶದ ಸಾಲ ತೀರಿಸಲು ಸಾಧ್ಯ.ಮಧ್ಯವರ್ತಿಗಳು ತತ್ವ ಹಾಗು ತಂತ್ರವನ್ನು ಸ್ವಾರ್ಥ ಕ್ಕೆ ಬಳಸಿಕೊಂಡು ಅರ್ಧಸತ್ಯದ ವ್ಯವಹಾರ ನಡೆಸಿರೋದೆ ಮಾನವನ ಸಂಕಟಕ್ಕೆ ಕಾರಣ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು