ಸ್ವ ಗ್ರಾಮಕ್ಕೆ ಆಗಮಿಸಿದ ವೀರಯೋಧನಿಗೆ ಅದ್ದೂರಿ ಸ್ವಾಗತ
ಬೈಲಹೊಂಗಲ – ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರು ಬೈಲಹೊಂಗಲ ತಾಲೂಕಿನ ಸಿದ್ಧಸಮುದ್ರ ಗ್ರಾಮಕ್ಕೆ ಆಗಮಿಸಿದ ವೀರ ಯೋಧ ಪ್ರಕಾಶ ನಾಗಪ್ಪ ಅಂಗಡಿ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ನಿವೃತ್ತರಾಗಿ ಗ್ರಾಮಕ್ಕೆ ಆಗಮಿಸುತ್ತಿರುವ ವಿಷಯವನ್ನು ಅರಿತ ಊರಿನ ಜನತೆ ವೀರ ಯೋಧನ ಸ್ವಾಗತಕ್ಕೆ ಕಾದು ಕುಳಿತಿದ್ದರು. ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಭಾರತ ಮಾತೆಯ ಸೇವೆಗೈದು ಹುಟ್ಟೂರಿಗೆ ರವಿವಾರ ಬೆಳಿಗ್ಗೆ 11 ಗಂಟೆಗೆ ಆಗಮಿಸಿದ ನಿವೃತ್ತ ವೀರ ಯೋಧ ಪ್ರಕಾಶ ನಾಗಪ್ಪ ಅಂಗಡಿ ಅವರಿಗೆ ಸುಮಂಗಲೆಯರು ಆರತಿ ಬೆಳಗುವ ಮೂಲಕ ಬರ ಮಾಡಿಕೊಂಡರು.
ಗ್ರಾಮದ ಮುಖಂಡರು, ಯುವಕರು ಯೋಧನಿಗೆ ಹೂವಿನ ಮಾಲೆ ಹಾಕಿ ಮತ್ತು ಹೂವಿನ ಸುರಿಮಳೆಗೈಯುತ್ತ ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ವೀರ ಯೋಧ ಪ್ರಕಾಶ ನಾಗಪ್ಪ ಅಂಗಡಿ ಅವರಿಗೆ ಜಯವಾಗಲಿ ಎಂಬ ಜಯ ಘೋಷಣೆಯನ್ನು ಹಾಕುತ್ತ, ಶಾಲೆಯ ಮಕ್ಕಳ ಪರೇಡ್ ಹಾಗೂ ವಾದ್ಯ ಮೇಳದೊಂದಿಗೆ, ಹೂವಿನಿಂದ ಅಲಂಕೃತವಾದ ತೆರೆದ ವಾಹನದಲ್ಲಿ ಯೋಧನನ್ನು ಗ್ರಾಮದ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.
ನಂತರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು ಹಾಗೂ ಕುಟುಂಬದವರ ವತಿಯಿಂದ ಸತ್ಕಾರ ಕಾರ್ಯಕ್ರಮವನ್ನು ಮಾಡಲಾಯಿತು.
ಸತ್ಕಾರ ಸ್ವೀಕರಿಸಿದ ನಿವೃತ್ತ ಯೋಧ ಪ್ರಕಾಶ ನಾಗಪ್ಪ ಅಂಗಡಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದರಲ್ಲಿ ಸಿಗುವ ಆನಂದ ಯಾವ ಕೆಲಸದಲ್ಲೂ ದೊರೆಯುವುದಿಲ್ಲ.
ನಿಮ್ಮೆಲ್ಲರ ಸ್ವಾಗತ ಗೌರವದಿಂದ ನನ್ನ 17 ವರ್ಷಗಳ ಸೈನಿಕ ವೃತ್ತಿ ಜೀವನ ಸಾರ್ಥಕವಾಯಿತು. ನಾವೆಲ್ಲರೂ ಯುವ ಜನತೆಯನ್ನು ಭಾರತೀಯ ಸೇನೆಗೆ ಸೇರುವಂತೆ ಪ್ರೇರೇಪಿಸಬೇಕು ನಮ್ಮೂರಿನ ಯುವಕರಿಗೆ ಸೇನೆಗೆ ಬೇಕಾದ ಎಲ್ಲ ತರದ ಟ್ರೈನಿಂಗ್ ಅನ್ನು ನಾನು ಫ್ರೀಯಾಗಿ ನೀಡಲು ಸಿದ್ದನಿದ್ದೇನೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಯುವಕರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಶಂಕರ ಕರೀಕಟ್ಟಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಸುದೀರ್ಘ 17 ವರ್ಷಗಳ ಕಾಲ ಸೇವೆಗೈದು ಹುಟ್ಟೂರಿಗೆ ಆಗಮಿಸಿರುವ ವೀರ ಯೋಧ ಪ್ರಕಾಶ ನಾಗಪ್ಪ ಅಂಗಡಿ ನಮ್ಮ ಊರಿನ ಹೆಮ್ಮೆಯ ಪುತ್ರರಾಗಿದ್ದಾರೆ. ಇವರ ದೇಶ ಸೇವೆ ಜನಮಾನಸದಲ್ಲಿ ಅಚ್ಚ ಅಳಿಯದೇ ಉಳಿಯಲಿದೆ. ಯುವ ಪೀಳಿಗೆ ಇವರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ, ಶಾಲೆಯ ಶಿಕ್ಷಕರು, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ಮತ್ತು ಸದಸ್ಯರು, ಯೋಧರು, ಅಂಗಡಿ ಕುಟುಂಬದವರು, ಸೇರಿದಂತೆ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ: ಸಿದ್ದಪ್ಪ ಕಂಬಾರ