ವೇಣು ಜಾಲಿಬೆಂಚಿ ಗಜಲ್ ಗಳು

Must Read

ಅವರು ನೀರಿಗಾಗಿ ಇವರು ರಕ್ತಕ್ಕಾಗಿ ಬಡಿದಾಡಿದರು ರಕುತದ ಹೊಳೆ ನಿಲ್ಲಲಿಲ್ಲ

ಅವರು ಬೆಂಕಿಗಾಗಿ ಇವರು ಬದುಕಿಗಾಗಿ ಹೋರಾಡಿದರು ರಕುತದ ಹೊಳೆ ನಿಲ್ಲಲಿಲ್ಲ

ಅವರು ವಿಶ್ವಾಸಕ್ಕಾಗಿ ಇವರು ಅಭಿಮಾನಕ್ಕಾಗಿ ಕೂಗಾಡಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಅನ್ಯಾಯಕ್ಕಾಗಿ ಇವರು ಶೋಷಣೆಗಾಗಿ ಟೊಂಕ ಕಟ್ಟಿದರು ರಕುತದ ಹೊಳೆ ನಿಲ್ಲಲಿಲ್ಲ

ಅವರು ಸಾಂತ್ವನಕ್ಕಾಗಿ ಇವರು ಸಾಮರಸ್ಯಕ್ಕಾಗಿ ಕೈಜೋಡಿಸಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಮಾನಕ್ಕಾಗಿ ಇವರು ಜೀವಕ್ಕಾಗಿ ಉಸಿರು ಬಿಗಿಹಿಡಿದರು ರಕುತದ ಹೊಳೆ ನಿಲ್ಲಲಿಲ್ಲ

ಅವರು ಸರಹದ್ದಿಗಾಗಿ ಇವರು ಗೆರೆಮೀರುವುದಕ್ಕಾಗಿ ಸಂಧಾನ ಮಾಡಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಯೋಜನೆಗಾಗಿ ಇವರು ಅಚಲ ಸಾಧನೆಗಾಗಿ ಮಿಡುಕಾಡಿದರು ರಕುತದ ಹೊಳೆ ನಿಲ್ಲಲಿಲ್ಲ

ಅವರು ದ್ವೇಷಕ್ಕಾಗಿ ಇವರು ಪ್ರೀತಿಗಾಗಿ ಹಂಬಲಿಸಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಕರುಣೆಗಾಗಿ ‘ಜಾಲಿ’ ಇವರು ಜೋಗುಳಕಾಗಿ ಹರಸಿದರು ರಕುತದ ಹೊಳೆ ನಿಲ್ಲಲಿಲ್ಲ

*****************************

*ಗಜಲ್*

ನೀ ಎಷ್ಟಾದರೂ ತುಳಿ ಮುಳ್ಳು ನೆಟ್ಟು ನೋಯುವುದು ನಿನ್ನ ಕಾಲು ನನ್ನ ಮನವಲ್ಲ
ನೀ ಹೇಗಾದರೂ ತಿಳಿ ಮಾಡಿದ ಮೇಲೆ ದುಃಖಿಸುವುದು ನಿನ್ನ ಪಾಲು ನನ್ನ ಮನವಲ್ಲ

ನೀ ಏನಾದರೂ ಹೇಳು ಹಗುರಗೊಂಡು ನಗ್ನವಾಗುವುದು ನಿನ್ನ ತೆವಲು ನನ್ನ ಮನವಲ್ಲ
ನೀ ಎಂದಾದರೂ ನಿಲ್ಲು ಅತ್ತು ರೋಧಿಸಿ ತಪನಪಡುವುದು ನಿನ್ನ ತಿಪ್ಪಲು ನನ್ನ ಮನವಲ್ಲ

ನೀ ಎಲ್ಲಿಗಾದರೂ ನಡೆ ಕೊನೆಗೆ ಕುಸಿದು ಬೀಳುವುದು ನಿನ್ನ ಮಾಮೂಲು ನನ್ನ ಮನವಲ್ಲ
ನೀ ಮೌನವಾದರೂ ಸರಿ ಹಾವಿನಷ್ಟೇ ವಿಷವಾಗುವುದು ನಿನ್ನ ಹೃದಯಕವಲು ನನ್ನ ಮನವಲ್ಲ

ನೀ ಸೇರದಿದ್ದರೂ ಬರುವಂತದೇನಿಲ್ಲವಿಲ್ಲಿ ಎಲ್ಲ ಕೆಡಹುವುದು ನಿನ್ನ ಮುಗಿಲು ನನ್ನ ಮನವಲ್ಲ
ನೀ ನಾಲಿಗೆ ಬಲಿ ಕೊಟ್ಟರೂ ನಂಬಿಕೆ ಬಂದು ನೇರ ಸುಡುವುದು ನಿನ್ನ ಒಡಲು ನನ್ನ ಮನವಲ್ಲ

ನೀ ಹೇಗೇ ಜಾರಿಕೊಂಡರೂ ನಿಜಬಣ್ಣ ಜಾಹೀರಾಗಲು ಒಂದು ದಿನ ಬಯಲು ನನ್ನ ಮನವಲ್ಲ
ನೀ ಎಷ್ಟೇ ಸುತ್ತಿಗೆ ಮೊಳೆ ಹೊಡೆದರೂ “ಜಾಲಿ” ವಿಚಲಿತವಾಗುವುದು ನಿನ್ನ ಅಮಲು ನನ್ನ ಮನವಲ್ಲ

**************************

*ಗಜಲ್*

ನಾವು ಈಗಲೂ ನಷ್ಟದ ಸುಳಿಯಲ್ಲಿ ತಿರುಗುವವರು
ಹರಿದ ಚೀಲ ಹಸಿದ ಹೊಟ್ಟೆಯಲ್ಲಿ ತಿರುಗುವವರು

ಕನಸಿನ ಬಾನ ತಿಂದು ವರುಷಗಳೇ ಆದವು ಹಹಾ…
ಸನಿಹ ಬಾರದ ಕನಸ ಹುಡುಕಾಟದಲ್ಲಿ ತಿರುಗುವವರು

ಮುಖದಲಿ ನೂರೆಂಟು ನರಿಗೆಗಳು ಆಳ ಅಗಲ ಕೈಗೆಟುಕದೆ
ಮಕಾಡೆ ಮಲಗಿದ ಬದುಕು ಜೂಜಾಟದಲ್ಲಿ ತಿರುಗುವವರು

ಮುಂಜಾನೆ ಅರಳುವ ಸೂರ್ಯ ಸಂಜೆಗೆ ಬಾಡುತ್ತಾನೆ ಕಲ್ಲಾಗಿ
ಗೋರ್ಖಲ್ಲು ಹೊತ್ತುಕೊಂಡು ಅಭಿಷೇಕದಲ್ಲಿ ತಿರುಗುವವರು

ಈ ಜೀವದ ಭಾವ ಕೋಲಾಹಲಕೆ ಬಲಿಯಾಗುವದಷ್ಟೇ ಗೊತ್ತು
“ಜಾಲಿ” ಬೆನ್ನಿಗಂಟಿದ ನರಜನ್ಮದ ನರಳಿಕೆಯಲ್ಲಿ ತಿರುಗುವವರು.
*****************************

*ಗಜಲ್*

ನನ್ನ ಎದೆಯ ಗುನುಗು ಹಾಡು ಕೇಳಿಸದೆ ನಿನಗೆ
ನನ್ನ ಹೂ ಮನದ ಇಂಗಿತ ಅರ್ಥವಾಗದೆ ನಿನಗೆ

ಅಕ್ಷರದ ಅಕ್ಕರೆಯಲಿ ಪತ್ರಗಳ ಬರೆಯಲಿಲ್ಲವೆ
ನೋಡಿಯೂ ಒಳ ಮರ್ಮ ತಿಳಿಯದೆ‌ ನಿನಗೆ

ಊಹಾಪೋಹಗಳ ಚಕ್ರದಡಿ ಸಿಲುಕಿದೆಯಾ
ಸ್ಫಟಿಕದದಂತ ಅಂತರಂಗವು ತೋರದೆ ನಿನಗೆ

ಬಿಟ್ಟು ಬಿಡು ಅಜಮಾಸು ಲೆಕ್ಕಾಚಾರ ಪತ್ರ
ಖಡಾಖಂಡಿತ ಈ ಬಾಳು ತೆರೆದಿದೆ ನಿನಗೆ

ಪ್ರತಿ ನಡಿಗೆಯಲು ನಿನಗುಂಟು ಸಮಪಾಲು
“ಜಾಲಿ” ಈ ಹೃದಯಗೀತೆ ಕರೆಯುತಿದೆ ನಿನಗೆ

ವೇಣು ಜಾಲಿಬೆಂಚಿ ರಾಯಚೂರು.

- Advertisement -
- Advertisement -

Latest News

ಕವನ : ಸಮರದ ಮಾತು

ಸಮರದ ಮಾತು ಅದೆಷ್ಟು ಇವೆ ನಿನ್ನ ಮಾತಿನ ಸಮರದ ಬಾಣಗಳು ಎದೆಯ ಗುಂಡಿಗೆಯನು ಸೀಳಿ ನಿಂತಿವೆವೀರ ಪರಾಕ್ರಮದ ಕೂಸೂ ನಾನಲ್ಲ ನಿನ್ನ ಜೊತೆ ಹೋರಾಡಿ ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆಆ ಶಕ್ತಿ ಎಲ್ಲವನ್ನೂ ಕಿತ್ತು ಕೊಂಡ ವೀರ ಯೋಧ ಮಾತಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group