ಸರಕಾರದ ವಿರುದ್ಧ ಪಿ.ಆಯ್.ಎಲ್ ಮುಖ್ಯ ಕಾರ್ಯದರ್ಶಿಗಳಿಗೆ ಗಡಾದ ಪತ್ರ
ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಒಟ್ಟು 12 ಜನ ಅತೃಪ್ತ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಸಂಸದೀಯ ಕಾರ್ಯದರ್ಶಿಗಳ ನೇಮಕವೇ “ಅಸಿಂಧು” ಎಂದು ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದರಿಂದ ಇವರು ತಮ್ಮ ಅಧಿಕಾರವಧಿಯಲ್ಲಿ ವೇತನ ಭತ್ಯೆಗಳ ರೂಪದಲ್ಲಿ ಸರಕಾರದಿಂದ ಪಡೆದುಕೊಂಡಿದ್ದ 3.64,72,716=00 ರೂ.ಗಳನ್ನು ಇವರಿಂದ ಸರಕಾರಕ್ಕೆ ಮರುಪಾವತಿಸಿಕೊಳ್ಳಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ದಿನಾಂಕ: ಫೆ.೧೨ ರಂದು ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದಾಖಲೆಗಳ ಸಮೇತವಾಗಿ ಪತ್ರವನ್ನು ಬರೆಯಲಾಗಿತ್ತು. ಆದರೆ ಸುಮಾರು 09 ತಿಂಗಳುಗಳು ಕಳೆದರೂ ಕೂಡಾ ಇದುವರೆಗೆ ನೀಡಲಾಗಿರುವ ಹಣವನ್ನು ವಾಪಸ್ಸು ಪಡೆಯುವ ವಿಷಯದ ಬಗ್ಗೆ ವಿಧಾನಸೌಧದಲ್ಲಿರುವ ಅಧಿಕಾರಿಗಳು ಒಬ್ಬರ ಕಡೆಗೆ ಒಬ್ಬರು ಬೆರಳು ಮಾಡಿ ತೋರಿಸುತ್ತಿರುವುದ್ದಾರೆ.
ಇದನ್ನು ನೋಡಿದರೆ ವಿಧಾನಸೌಧದಲ್ಲಿರುವ ಅಧಿಕಾರಿಗಳು, ರಾಜಕೀಯ ನಾಯಕರುಗಳಿಗೆ/ ಜನಪ್ರತಿನಿಧಿಗಳಿಗೆ ಹೆದರಿಕೊಂಡು ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ನಡೆದುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಅವರು ಮತ್ತೊಮ್ಮೆ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗಾಗಿ ಸಾರ್ವಜನಿಕರು ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಹಣವನ್ನು ವೇತನ ಭತ್ಯೆಗಳ ರೂಪದಲ್ಲಿ ಈ ಸಂಸದೀಯ ಕಾರ್ಯದರ್ಶಿಗಳು ಸರಕಾರದಿಂದ ಪಡೆದುಕೊಂಡಿದ್ದಾರೆ. ಆದರೆ ಅವರ ನೇಮಕ ಅಸಿಂಧುವಾದಾಗ ಸರ್ಕಾರದಿಂದ ಪಡೆದ ಭತ್ಯೆಗಳನ್ನು ಅವರು ಹಿಂತಿರುಗಿಸಬೇಕು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಬ್ಬ ಕಡು ಬಡವನು ತನ್ನ ಹಸಿದ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ತಪ್ಪು ಮಾಹಿತಿ ನೀಡಿ ಸರಕಾರದ ಮಾಸಾಶನ ಪಡೆಯುತ್ತಿದ್ದರೆ ಅವನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಲ್ಲದೇ ಅವನು ಸರಕಾರದಿಂದ ಪಡೆದಿರುವ ಎಲ್ಲಾ ಹಣವನ್ನು ಬಡ್ಡಿ ಸಮೇತವಾಗಿ ವಸೂಲಿ ಮಾಡುವ ಈ ಅಧಿಕಾರಿಗಳು ಈ ಪ್ರಕರಣದಲ್ಲಿ ಗೌರತವಾನ್ವಿತ ಉಚ್ಛ ನ್ಯಾಯಾಲಯವೇ ಇವರ ನೇಮಕ ಅಸಿಂಧು ಎಂದು ತೀರ್ಪು ನೀಡಿದ್ದರೂ ಕೂಡಾ ಇವರು ಸರಕಾರದಿಂದ ಪಡೆದಿರುವ ಹಣವನ್ನು ಮರಳಿ ಪಡೆಯಲು ಆದೇಶವನ್ನು ಹೊರಡಿಸಲು ಯಾಕೆ ಸಿದ್ಧರಿಲ್ಲ ಎಂಬುದು ರಾಜ್ಯದ ಜನ ಸಾಮಾನ್ಯರ ಪ್ರಶ್ನೆಯಾಗಿರುವದು.
*ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ*
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಅಧಿಕಾರಿಗಳು ಬರೆದಿರುವ ಪತ್ರಗಳನ್ನು ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುತ್ತ ಸಂಸದೀಯ ಕಾರ್ಯದರ್ಶಿಗಳು ಸರಕಾರದಿಂದ ಪಡೆದುಕೊಂಡಿರುವ ಹಣವನ್ನು ಮರಳಿ ವಾಪಸ್ಸು ಪಾವತಿಸಲು ಸೂಕ್ತ ಆದೇಶ ಹೊರಡಿಸದೇ ಇದ್ದಲ್ಲಿ ಸರಕಾರದಲ್ಲಿನ ಅಧಿಕಾರಿಗಳ ವಿರುದ್ಧ ರಾಜ್ಯ ದ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕರ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಾಗುವದು ಎಂದು ಗಡಾದ ಪತ್ರದಲ್ಲಿ ತಿಳಿಸಿದ್ದಾರೆ.