(ಲೇಖನ ಭಾರತೀಯ ನನ್ನ ರೈತರಿಗೆ ಅರ್ಪಣೆ)
ಭಾರತ ದೇಶ ಸನಾತನ ಕಾಲದಿಂದ ಕೃಷಿಯನ್ನು ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಭಾರತದ ಸಂತತಿಯನ್ನು ಬೆಳೆಸಿಕೊಂಡ ಬಂದಿದೆ. ಋಗ್ವೇದ ಕಾಲದಲ್ಲಿಯು ಭಾರತದ ಭೂಮಿ ಕೃಷಿ ಪ್ರಧಾನ ಭೂಮಿ ಮೇರೆಯಾಗಿತ್ತು ಅಂತಾ ಉಲ್ಲೇಖವಿದೆ. ಸಿಂಧೂ, ಹರಪ್ಪಾ ನಾಗರಿಕತೆಯಲ್ಲು ಇದರ ವಿವರಣೆಯಿದೆ. ಆದ್ದರಿಂದ ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು ಅದರ ಆತ್ಮವೆಂದು ಸಾಬೀತಾಗಿದೆ.
ಬಹು ಸಂಖ್ಯಾತ ಭಾರತೀಯರು ಮತ್ತು ಗ್ರಾಮೀಣ ಪ್ರದೇಶದವರ ಮೂಲ ಕಸುಬು ಕೃಷಿಯಾಗಿದೆ. ಇದರ ವ್ಯಾಪ್ತಿಗೆ ಬರುವರೆಲ್ಲರು ರೈತರಾಗಿದ್ದಾರೆ.
ಆದರೆ ಈ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಲಾಭದಾಯಕ ಕ್ಷೇತ್ರವಾಗಿಲ್ಲ ಮತ್ತು ಈ ಕ್ಷೇತ್ರದಲ್ಲಿ ಬಿಡುವಂತು ಇಲ್ಲಾ. ಬಿಟ್ಟರೆ ಹಸಿವಿನಿಂದ ಸಾಯುವ ಪರಿಸ್ಥಿತಿಗೆ ಬರಬಹುದು. ಆದ್ದರಿಂದ ಈ ಕೃಷಿ ಕ್ಷೇತ್ರದಲ್ಲಿ ಆಧುನಿಕ ಎರಡನೇ ಹಸಿರು ಕ್ರಾಂತಿಯಾಗಬೇಕಿದೆ.
ಡಿಸೆಂಬರ್ 24 ನೇ ದಿನ ರೈತರ ದಿನ ಅಂತಾ ಆಚರಣೆ ಮಾಡಿ ಕೃಷಿ ಕ್ಷೇತ್ರ ನೆನಪಿಗೆ ತರುತ್ತೇವೆ. ಆದರೆ ಅವರನ್ನು ಅರಿಯುವ ಪ್ರಯತ್ನ ದೇಶವಾಸಿಗಳು ಮಾಡಬೇಕಾಗಿದೆ.
ರೈತರ ದಿನದ ಹಿನ್ನೆಲೆ
ದೇಶದ ಮಾಜಿ ಪ್ರಧಾನ ಮಂತ್ರಿ ಮತ್ತು ಕೃಷಿ ಸುಧಾರಣಾ ಹರಿಕಾರ ಚೌಧರಿ ಚರಣ ಸಿಂಗ್ ರವರ ಜನ್ಮ ದಿನವನ್ನು ರೈತರ ದಿನ ಅಂತಾ ಸಾಂಕೇತಿಕವಾಗಿ ದೇಶದಲ್ಲಿ ಆಚರಣೆ ಮಾಡಲಾಗುತ್ತಿದೆ. ಇದು ದೇಶದ ರೈತರ ಹಬ್ಬವಾಗಿದೆ. ಉಣ್ಣುವ ಎಲ್ಲಾ ಜೀವಿಗಳ ಹಬ್ಬವಾಗಿದೆ. 1980 ರಿಂದ ಈ ದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಮತ್ತೊಬ್ಬ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರು “ಜೈ ಜವಾನ್ ಜೈ ಕಿಸಾನ್” ಅಂತಾ ದೇಶದ ಗಡಿ ಮತ್ತು ರೈತ ಕ್ಷೇತ್ರ ಬಲಪಡಿಸಲು ಪ್ರಯತ್ನಿಸಿದರು. ಆದ್ದರಿಂದ ರೈತರ ದಿನ ಮಹತ್ವದಾಗಿದೆ.
ಚಿಮ್ಮಬೇಕು ನೀರಿನ ಕಿಡಿಗಳು
ಉತ್ತರ ಭಾರತ ಸದಾ ಹಿಮ ನದಿ ಮತ್ತು ತಂಪಿನಿಂದ ಕೂಡಿದೆ ಇಲ್ಲಿ ಅತಿಮಳೆಯಾಗಿ ಜವಳು ಮತ್ತು ಪ್ರವಾಹವಾಗಿ ಬೆಳೆ ಹಾಳಾಗುತ್ತಿದೆ. ದಕ್ಷಿಣದಲ್ಲಿ ಮಳೆ ಕೊರತೆ, ಬರಗಾಲ ಮತ್ತು ತೇವಾಂಶ ಕೊರತೆಯಿಂದ ಒಣ ಬೇಸಾಯ ಕುಂಠಿತವಾಗುತ್ತಿದೆ. ಇವುಗಳನ್ನು ಸರಿದೂಗಿಸಲು ನದಿ ಜೋಡಣೆ ಮಾಡಬೇಕಾಗಿದೆ. ಇದರಿಂದ ಲಭ್ಯವಿದ್ದ ಮತ್ತು ಕೊರತೆಯ ಪ್ರದೇಶಕ್ಕೆ ನೀರು ಸಮಾನವಾಗಿ ಹಂಚಬಹುದು. ಹೀಗೆ ಕೃಷಿಯಲ್ಲಿ ನೀರಾವರಿ ಕ್ರಾಂತಿಯಾಗುತ್ತದೆ. ಎರಡು ಮೂರು ಬೆಳೆ ಬೆಳೆಯಬಹುದು. ರೈತರಿಗೆ ಅರೆ ಉದ್ಯೋಗ ಬದಲಾಗಿ ಪೂರ್ಣ ಪ್ರಮಾಣದ ಉದ್ಯೋಗ ನೀಡಬಹುದು.
ರೈತರ ಉತ್ಪನ್ನ ಹೆಚ್ಚಿಸಬಹುದು. ರಾಷ್ಟ್ರೀಯ ಆದಾಯ ಹೆಚ್ಚಾಗುತ್ತದೆ. ಅರಣ್ಯ ಹೆಚ್ಚು ಬೆಳೆಯುತ್ತದೆ. ಕಾಡು ಕೃಷಿ ಹೆಚ್ಚಾಗಬಹುದು. ಮತ್ತು ಅನೇಕ ವಿಧದಲ್ಲಿ ಕೃಷಿ ಉತ್ಪನ್ನ ದ್ವಿಗುಣವಾಗುತ್ತವೆ. ಆಹಾರ ಭದ್ರತೆ ಸುಭದ್ರಪಡಿಸಬಹುದು. ನೀರಿನ ಕಿಡಿ ಚಿಮ್ಮಿದರೆ ಹಸಿರು ಉಸಿರಾದಂತೆ ಆದ್ದರಿಂದ ನೀರಾವರಿಗೆ ಆದ್ಯತೆ ನೀಡಬೇಕು.
ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು
ದೇಶದ ಬಹು ಸಂಖ್ಯಾತರ ಪಾಲು ಕೃಷಿಯಲ್ಲಿ ಹಂಚಿದೆ. ಅವರನ್ನು ಸದೃಡಗೊಳಿಸಿದರೆ ದೇಶ ಸದೃಢಗೊಂಡಂತೆ. ಗಾಂಧಿಜೀಯವರು ” ಗ್ರಾಮೀಣ ಏಳಿಗೆ ದೇಶದ ಏಳಿಗೆ” ಎಂದಿದ್ದಾರೆ. ರೈತ ದೇಶದ ಬೆನ್ನೆಲುಬು ಅಂತಾ ಮಾತಿದೆ.
ಆದ್ದರಿಂದ ಕೃಷಿ ಕ್ಷೇತ್ರ ಬಲಿಷ್ಠವಾಗಲು ಮತ್ತು ದೇಶದ ಆರ್ಥಿಕತೆಗೆ ಪೂರಕವಾಗಿರಲು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರ ಕೃಷಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಬೇಕು ಮತ್ತು ಪ್ರತ್ಯೇಕ ಅನುದಾನ ಮೀಸಲಿಡಬೇಕು. ರೈತರಿಗೆ ಬೆಂಬಲ ಬೆಲೆ, ಬಡವರ ಕೃಷಿ ಸಾಲ ಮನ್ನಾ ಯೋಜನೆ ಪೂರ್ಣಗೊಳಿಸಬೇಕು, ಉಚಿತವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ನೀಡಬೇಕು, ಮಾರುಕಟ್ಟೆ ಸುಧಾರಿಸಬೇಕು, ಆಧುನಿಕ ಕೃಷಿ ಪದ್ಧತಿಗಳನ್ನು ಪರಿಚಯಿಸಬೇಕು, ಪ್ರೋತ್ಸಾಹ ಮತ್ತು ಉತ್ತೇಜನ ನೀಡಬೇಕು. ಕೃಷಿಯನ್ನು ಉದ್ಯಮವನ್ನಾಗಿ ಪರಿವರ್ತಿಸಲು ಕೃಷಿ ಬಜೆಟ್ ನಲ್ಲಿ ಕ್ರಮ ಕೈಗೊಂಡರೆ ಹಸಿರು ಕ್ರಾಂತಿಯಾದಂತೆ. ಅದು ಯಶಸ್ವಿಯಾಗುವದರಲ್ಲಿ ಅನುಮಾನವಿಲ್ಲ.
ಆಧುನಿಕ ಮಿಶ್ರ ಕೃಷಿ ಪದ್ಧತಿ ಪರಿಚಯಿಸಬೇಕು
ಹಳೆಯ ಕೃಷಿ ಪದ್ಧತಿ ಮತ್ತು ಉಪಕರಣದಿಂದ ಕೃಷಿ ಕ್ಷೇತ್ರ ಹಾನಿಯಲ್ಲಿದೆ. ಇದನ್ನು ಸರಿಪಡಿಸಲು ಆಧುನಿಕ ಮಿಶ್ರ ಕೃಷಿ ಪದ್ಧತಿ ಪರಿಚಯಿಸಬೇಕು. ಇಸ್ರೇಲ್ ಮಾದರಿ ಕೃಷಿ ಪದ್ಧತಿ ಕೃಷಿಯಲ್ಲಿ ಅಳವಡಿಸಬೇಕು. ಕೃಷಿಯ ಜೊತೆಗೆ ಕೃಷಿಗೆ ಸಹಾಯಕವಾದ ಮತ್ತು ಸ್ಥಳೀಯ ಸಂಪನ್ಮೂಲಗಳು, ವಸ್ತು ದೊರಕುವ ಕೃಷಿ ಪದ್ಧತಿಯನ್ನು ರೈತರು ಬಳಸಿಕೊಳ್ಳಬೇಕು.
ಕೃಷಿಯಲ್ಲಿ ಹೈನುಗಾರಿಕೆ, ಹೂದೋಟ, ತೋಟಗಾರಿಕೆ ಬೆಳೆಗಳು, ಕಾಡು ಕೃಷಿ, ಜೇನು ಸಾಕಣೆ, ಹಂದಿಸಾಗಾಣಿಕೆ, ಕೋಳಿಸಾಗಾಣಿಕೆ, ಮೊಲ, ಕುರಿ, ಮೇಕೆ ಸಾಗಾಣಿಕೆ, ರೇಷ್ಮೆಗಾರಿಕೆ, ಬೀಜೋತ್ಪನ್ನ, ನರ್ಸರಿ ಮತ್ತು ಕೃಷಿ ಉತ್ಪನ್ನದ ಸಣ್ಣ ಸಣ್ಣ ಘಟಕಗಳನ್ನು ಸ್ಥಾಪಿಸಿ ಕೃಷಿ ಮಾಡುವದರಿಂದ ರೈತರು ಹೆಚ್ಚು ಆದಾಯ ಗಳಿಸಬಹುದು. ಆರ್ಥಿಕವಾಗಿ ಸದೃಢರಾಗುತ್ತಾರೆ. ಇದೆ ಕೃಷಿ ಕ್ರಾಂತಿಯಾಗಿರುತ್ತದೆ. ಹೀಗೆ ಕೃಷಿಯಲ್ಲಿ ಹೊಸ ಹೊಸ ಪದ್ಧತಿ ಮತ್ತು ಮಿಶ್ರ ಕೃಷಿ ಅಳವಡಿಸಿಕೊಂಡು ಕ್ರೋಢೀಕರಣ ಮಾಡಿ ಬೇಸಾಯ ಮಾಡಿದರೆ ರೈತರು ಕಂಪನಿದಾರರ ಸಮನಾಗಿ ಬೆಳೆಯಬಲ್ಲರು.
ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸಬೇಕು
ರೈತರಿಗೆ ಬೆಳೆಯಲು ಉತ್ತೇಜನ ನೀಡಿದರೆ ಹೆಚ್ಚು ಉತ್ಪನ್ನ ಬರುತ್ತದೆ. ಬೆಳೆ ಸಂಸ್ಕರಿಸಲು ಉಗ್ರಾಣ ವ್ಯವಸ್ಥೆ ಅತ್ಯಾಧುನಿಕವಾಗಿ ಕಲ್ಪಿಸಬೇಕು, ದೇಶದ ಆಂತರಿಕ ಬೇಡಿಕೆ ಮತ್ತು ಪೂರೈಕೆ ನೋಡಿಕೊಂಡು ಆಹಾರ ಭದ್ರತೆ ಗಮನದಲ್ಲಿಟ್ಟುಕೊಂಡು ಉಳಿದ ಉತ್ಪನ್ನಕ್ಕೆ ವಿಶ್ವ ಮಾರುಕಟ್ಟೆಯನ್ನು ರೈತರಿಗೆ ಪರಿಚಯಸಬೇಕು. ರೈತರ ಉತ್ಪನ್ನ ಮಾರಲು ಮುಕ್ತ ಮಾರುಕಟ್ಟೆ ಒದಗಿಸಬೇಕು. ಆನಲೈನ್ ಮಾರಾಟ ಮಳಿಗೆ ಸವಲತ್ತುಗಳನ್ನು ರೈತರಿಗೆ ನೀಡಬೇಕು.
ಇದರಿಂದ ವಿದೇಶಿ ಆದಾಯ, ಬಂಡವಾಳ ದೇಶಕ್ಕೆ ಹರಿದು ಬರುತ್ತದೆ. ಇದರ ತೆರಿಗೆ ರೈತರ ಅಬ್ಯುದಯಕ್ಕೆ ಬಳಸಿದರೆ ಇದರಿಂದ ದೇಶದ ಕೃಷಿ ವಲಯ ಆಧುನಿಕ ರೂಪ ಪಡೆದುಕೊಳ್ಳುತ್ತದೆ. ಕೃಷಿ ಉತ್ಪನ್ನವಾದ ತರಕಾರಿ, ಹಣ್ಣು, ತಪ್ಪಲ,ಧಾನ್ಯ ಇತ್ಯಾದಿ ಕೆಡದಂತೆ ಸಮರ್ಪಕವಾಗಿ ಪೂರೈಕೆಯಾಗಿ ಮಾರಬೇಕು. ಕೊರತೆಯಾಗದ ಹಾಗೆ ಪೂರೈಕೆಯಾಗಿ ಉಪಯೋಗವಾಗಬೇಕು. ಇದರಿಂದ ಉತ್ಪನ್ನಕ್ಕೆ ಬೆಲೆ ಬಂದು ಬೆಳೆ ಕೊಳೆಯದೆ ಆದಾಯ ಗಳಿಸಬಹುದು. ಇದಕ್ಕೆ ಕ್ರಮ ಕೈಗೊಳ್ಳಬೇಕು.
ದೇಶದ ಸದ್ಯದ ಪರಿಸ್ಥಿತಿ ಕೊರೊನ, ಪ್ರಾಕೃತಿಕ ವಿಕೋಪಗಳ ಹಾವಳಿ ಮತ್ತು ಭೂಮಿಯಲ್ಲಿನ ಫಲವತ್ತತೆ ಕೊರತೆ ಮತ್ತು ದುಬಾರಿ ಕೃಷಿ ಸಲಕರಣೆಗಳಿಂದ ದೇಶದ ಕೃಷಿ ವಲಯದ ಆದಾಯ 35% ದಿಂದ 20% ಕ್ಕೆ ಕುಸಿದಿದೆ. ಆದ್ದರಿಂದ ಸಧ್ಯ ದೇಶದಲೊಂದು ಆಧುನಿಕ ಕೃಷಿ ಹಸಿರು ಕ್ರಾಂತಿಯಾಗಲೇಬೇಕಾಗಿದೆ.
ಲೇಖಕರು:- ಶರೀಫ ಗಂ ಚಿಗಳ್ಳಿ ( ಸಾಹಿತಿ)
ಸಾ/ ಬೆಳಗಲಿ ತಾ/ ಹುಬ್ಬಳ್ಳಿ ಜಿ /ಧಾರವಾಡ- 580024
ಮೊ: 9902065126