ಪ್ರಜಾರಾಜ್ಯ ದಿನ
🇮🇳🇮🇳🇮🇳🇮🇳🇮🇳🇮🇳🇮🇳🇮🇳
ಬನ್ನಿ ಬನ್ನಿ ಗೆಳೆಯರೇ ಪ್ರಜಾರಾಜ್ಯ ದಿನವಿಂದು
ಎಲ್ಲರೂ ಕೂಡೋಣ ತಾಯಿ ಸೇವೆ ಮಾಡೋಣ
ಸಂತಸದಿ ಸೇರಿ ಇಂದು ದೇಶಭಕ್ತರ ನೆನೆಯೋಣ
ದೇಶಸೇವೆಗಾಗಿ ನಮ್ಮ ಜೀವಗಳ ಮುಡಿಪಿಡೋಣ..
ನ್ಯಾಯ ನೀತಿ ಧರ್ಮಗಳ ದಂಡ ಹಿಡಿದು ನಿಂತು
ತ್ಯಾಗ ಸಹನೆ ಶಾಂತಿಗಳ ಮಂತ್ರ ಪಠಿಸಿ ಇಂತು
ಕೆಂಪುಕೋಟೆ ಮೇಲೆ ನಮ್ಮ ತ್ರಿವರ್ಣ ಧ್ವಜ ಹಾರಿತು
ಜನಮನಗಳಲಿ ಸುಭೀಕ್ಷತೆಯ ಸಾರಿತು…
ಪ್ರಜಾಪ್ರಭುತ್ವದ ಅಡಿಯಲಿ ಗಣರಾಜ್ಯ ಪಡೆಯಲಿ
ಪ್ರಜೆಗಳೇ ಪ್ರಜೆಗಳಿಗಾಗಿ ದೇಶ ನಡೆಸುತಲಿ
ಭವ್ಯ ಸಂವಿಧಾನದಡಿಯಲಿ ನಾಡಿನ ಪ್ರಗತಿಯಲಿ
ರಾಷ್ಟ್ರಾಭಿವೃದ್ಧಿಯ ಕನಸು ಕಾಣುತಲಿ.. ಮುನ್ನಡೆಯುತಲಿ…
ಭಾರತಮಾತೆಯ ಪುತ್ರರೆಂಬ ಧ್ಯೇಯದಲಿ
ಎಲ್ಲರೂ ಸಹೋದರ ಸಹೋದರಿಯರೆಂಬ ಭಾವದಲಿ
ಜಾತಿ ಮತ ಧರ್ಮ ಲಿಂಗಬೇಧ ಮರೆಯುತಲಿ ವಿವಿಧತೆಯಲಿ ಏಕತೆಯ ತತ್ವ ಮೆರೆಸುತಲಿ…
ಕಟ್ಟಕಡೆಯ ಪ್ರಜೆಯೂ ಉನ್ನತ ಹುದ್ದೆಗೇರುತ
ಗಣರಾಜ್ಯ ಪರಿಕಲ್ಪನೆ ಸಾಕಾರಗೊಳಿಸುತ
ಜನರೇ ತಮ್ಮಭಿಮತವ ಗೌಪ್ಯತೆಯಲಿ ಒತ್ತುತ
ಸಂಸದರ ಪ್ರಧಾನಮಂತ್ರಿ ರಾಷ್ಟ್ರಪತಿಗಳ ಚುನಾಯಿಸುತ…
ಪಂಚವಾರ್ಷಿಕ ಯೋಜನೆಗಳ ತೆಕ್ಕೆಯಲಿ
ಪಂಚಶೀಲ ತತ್ವಗಳ ಅನುಸರಿಸುತಲಿ
ಬೃಹತ್ ಸಂವಿಧಾನದ ಚೌಕಟ್ಟಿನಲಿ
ಭರತಮಾತೆಯ ಉತ್ತುಂಗಕ್ಕೇರಿಸುತಲಿ…
ಸತತ ಕಾಯಕ ತತ್ವ ಪಾಲಿಸುತಲಿ
ಆತ್ಮಾವಲೋಕನ.. ಕರ್ತವ್ಯ ಪ್ರಜ್ಞೆಯಲಿ
ಸ್ವಾರ್ಥ ಬ್ರಷ್ಟಾಚಾರ ಸುಟ್ಟುಹಾಕುತಲಿ
ದುಷ್ಟಶಕ್ತಿಗಳ ಮಟ್ಟಹಾಕುತಲಿ…
ಪ್ರಾಮಾಣಿಕತೆಯ ಅಸ್ತ್ರ ಹಿಡಿದು ಇಂದು
ಸರ್ವೋದಯದ ಮಂತ್ರ ಪಠಿಸಿ ನಿಂದು
ಆತ್ಮವಿಶ್ವಾಸದಿ ನಾನೇ ಎಲ್ಲವನು ಮಾಡಬಲ್ಲೆನೆಂದು
ರಾಷ್ಟ್ರಾಭಿವೃದ್ಧಿಗೆ ಪಣತೊಟ್ಟು ಇಂದು…
ಮೈತ್ರಾದೇವಿ ರಾಚಯ್ಯ ಹಿರೇಮಠ, ಶಿಕ್ಷಕಿ
ಪ್ರಜಾರಾಜ್ಯ
ನಮ್ಮ ಪ್ರಜಾರಾಜ್ಯ
ಪ್ರಜೆಗಳ ರಾಜ್ಯ
ಆಗದಿರಲಿ ಕುರ್ಚಿಗಾಗಿ ವ್ಯಾಜ್ಯ
ಬಗೆಹರಿಯಲಿ ಸಮಸ್ಯೆಗಳ ತ್ಯಾಜ್ಯ
ಆಗಲಿ ರಾಮರಾಜ್ಯ
ಜನಸೇವೆಯೇ ಗುರಿಯಾಗಲಿ
ಧನದಾಸೆ ಮಾಯವಾಗಲಿ
ಜನಗಣಕ್ಕೆ ಜಯವಾಗಲಿ
ಜನ್ಮಭೂಮಿಯ ಋಣತೀರಲಿ
ಜನುಮದ ಸಾರ್ಥಕ ವಾಗಲಿ
ದೇಶಪ್ರೇಮ ರಕ್ತಗತವಾಗಲಿ
ನಾಡ ಸೇವೆಗಾಗಿ ಜೀವಮುಡಿಪಾಗಿರಲಿ
ಸರ್ವರ ಏಳಿಗೆಯೇ ಸರ್ವೋದಯ
ಇದುವೇ ಭಾರತದ ಭಾಗ್ಯೋದಯ
ನೀಲಮ್ಮ ಎಸ್. ಸಾಲಿಮಠ.
ಕಲಬುರ್ಗಿ