ಸವದತ್ತಿ – “ತಾಲೂಕಿನ ಚುಳಕಿ ಗ್ರಾಮದ ಅವಧೂತ ಗವಿಯು ಇತಿಹಾಸದ ಪರಂಪರೆ ಹೊಂದಿದ ಗವಿಯಾಗಿದ್ದು ಇಲ್ಲಿನ ಹಿಂದಿನ ಪೂಜ್ಯರಾದ ಅವಧೂತ ಕಲ್ಮೇಶ್ವರರು ಮನಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದವರು.ಚುಳಕಿ ಗ್ರಾಮವೆಂದರೆ ಶ್ರೀಗಳ ಗವಿಯು ಎಲ್ಲರ ಕಣ್ಮುಂದೆ ಬರುತ್ತದೆ.
ಈ ಗವಿಯ ಅಭಿವೃದ್ದಿ ಪಡಿಸುವ ಬಗ್ಗೆ ಇಂಚಲ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಸೂಚನೆ ಕೊಟ್ಟ ಪ್ರಕಾರ ನಾನು ಸುಮಾರು 1 ಕೋಟಿ ರೂಪಾಯಿಗಳ ವೆಚ್ಚದ ಅಂದಾಜು ಪತ್ರಿಕೆ ತಯಾರು ಮಾಡಿ ಸರಕಾರಕ್ಕೆ ಮಂಡಿಸಿದಾಗ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಮೊದಲ ಹಂತವಾಗಿ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ ಆ ಹಣವು ಈಗಾಗಲೇ ಪೂಜ್ಯರ ಖಾತೆಗೆ ಜಮೆಯಾಗಿದೆ.
ಎರಡನೇಯ ಹಂತದ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಸುವಲ್ಲಿಯೂ ಕೂಡಾ ನಾನು ಪ್ರಾಮಾಣಿಕವಾದ ಪ್ರಯತ್ನ ಮಾಡುವೆ. ಒಟ್ಟು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಚುಳಕಿಯ ಇತಿಹಾಸ ಪ್ರಸಿದ್ದ ಗವಿಯನ್ನು ಅಭಿವೃದ್ದಿಪಡಿಸಲಾಗುವುದು” ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಹೇಳಿದರು.
ಅವರು ತಾಲೂಕಿನ ಚುಳಕಿ ಗ್ರಾಮದ ಅವಧೂತ ಕಲ್ಮೇಶ್ವರರ ಮಹಾ ಗವಿಮಠದ ಅಭಿವೃದ್ದಿ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಚುಳಕಿ ಗ್ರಾಮದ ಹಿರಿಯರ ಆಶಯದಂತೆ ಈ ಮಹಾಗವಿ ಮಠವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಈ ಒಂದು ಅಭಿವೃದ್ಧಿ ಕೆಲಸಕ್ಕೆ ಗ್ರಾಮಸ್ಥರೂ ಕೂಡಾ ತನು ಮನ ಧನದಿಂದ ಸಹಕಾರ ನೀಡಬೇಕು. ಎಂದರು.
ನಂತರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಚಿದಾನಂದ ಮಹಾಸ್ವಾಮಿಗಳು ಮಾತನಾಡಿದರು.
ಚಂದ್ರಶೇಖರಯ್ಯ ಚುಳಕಿಮಠ ಸಮ್ಮುಖ ವಹಿಸಿದ್ದರು. ನಂತರ ಮಠದ ವತಿಯಿಂದ ಮತ್ತು ಗ್ರಾಮದ ವತಿಯಿಂದ ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿಯವರನ್ನು ಸನ್ಮಾನಿಸಿ ಗೌರವಿಸಿದರು.
ಅತಿಥಿಗಳಾಗಿ ಆಗಮಿಸಿದ ಗ್ರಾಮ ಪಂಚಾಯತ ಅಧ್ಯಕ್ಷರಾದ ವಿಜಯಲಕ್ಮಿ ಹರಲಾಪುರ, ಸದಸ್ಯರಾದ ಪ್ರಕಾಶಕೋಟಿ, ಬಸನಗೌಡಾ ಮುನ್ಯಾನಕೊಪ್ಪ, ಪ್ರೇಮಾ ಅ ಬಡಿಗಿಗೌಡರ, ಮುತ್ತಪ್ಪ ಹಳಕಟ್ಟಿ, ಪಕ್ಕೀರಸಾಬಿ ನದಾಫ, ವಿರುಪಾಕ್ಷ ಹಣಸಿ, ಜಗದೀಶ ಕೌಜಗೆರಿ,ಗಂಗನಗೌಡಾ ದ್ಯಾ ಪಾಟೀಲ, ಮಹಾದೇವಗೌಡಾ ಬರಮಗೌಡರ, ಬಸನಗೌಡಾ ಭರಮಗೌಡರ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.