“ಕೇವಲ ಪುಸ್ತಕದ ಹುಳುವಾಗಿ ಹಣವನ್ನು ಗಳಿಸುವ ಯಂತ್ರದಂತೆ ಸ್ವಾರ್ಥಿಯಾಗಿ ಬದುಕುವುದಕ್ಕಿಂತ ಸಮಾಜಮುಖಿಯಾಗಿ ಬಾಳುವುದು ಅತಿಮುಖ್ಯ” ಎಂದು ಸಂಸ್ಕೃತಿ ಚಿಂತಕ ಡಾ|| ಗುರುರಾಜ ಪೋಶೆಟ್ಟಿಹಳ್ಳಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಮಕ್ಕಳಿಗೆ ಕಲಿಕೆ ಪ್ರಾರಂಭವಾಗುವುದು ಮನೆಯಿಂದ, ಅದರಲ್ಲೂ ತಾಯಿಯೇ ಮೊದಲನೆಯ ಗುರು. ನಂತರ ಶಾಲೆ, ಸಮುದಾಯಗಳು ಅವುಗಳ ಮೇಲೆ ಅಪಾರ ಪ್ರಭಾವ ಬೀರುತ್ತವೆ. “ಮಕ್ಕಳ ಇಸ್ಕೂಲ್ ಮನೇಲಲ್ವೆ’’- ಕೈಲಾಸಂ ಎಂದಂತೆ ಇಂದಿನ ಕಾಲದಲ್ಲಿ 1ನೇ ವರ್ಷಕ್ಕೆ ಮಕ್ಕಳನ್ನು ಶಾಲೆಗೆ ಸೇರಿಸಿಬಿಡುವುದರಿಂದ, ಮಕ್ಕಳ ವ್ಯಕ್ತಿತ್ವದಲ್ಲಿ ಶಾಲೆಗಳು ಅಪಾರ ಪ್ರಭಾವ ಬೀರುತ್ತವೆ. ಶಾಲೆಗಳು, ಶಿಕ್ಷಕರು, ಪಾಲಕರು ಇವರ ಜವಾಬ್ದಾರಿ ಬಹಳ ಹಿರಿದು. “ಸುಭದ್ರ ರಾಷ್ಟ್ರ ನಿರ್ಮಾಣ ಬಲಿಷ್ಠ ಹಾಗೂ ಸದೃಢ ಯುವ ಜನತೆ ಅಗತ್ಯ’’ ಎಂದು ನುಡಿದ ಸ್ವಾಮಿ ವಿವೇಕಾನಂದರ ನುಡಿ ಇಂದಿಗೂ ಪ್ರಸ್ತುತ. ಕೇವಲ ಪುಸ್ತಕದ ಹುಳುವಾಗಿ ಹಣವನ್ನು ಗಳಿಸುವ ಯಂತ್ರದಂತೆ ಸ್ವಾರ್ಥಿಯಾಗಿ ಬದುಕುವುದಕ್ಕಿಂತ ಸಮಾಜಮುಖಿಯಾಗಿ ಬಾಳುವುದು ಅತಿಮುಖ್ಯ. ದೇಶ ಸಮಾಜದ ಋಣ ತೀರಿಸಿ ಬದುಕನ್ನು ಸಾರ್ಥಕ ಬದುಕನ್ನು ನಡೆಸುವ ಗಟ್ಟಿಕಾಳಾಗಬೇಕೆಂದು ಸಂಸ್ಕೃತಿ ಚಿಂತಕರಾದ ಡಾ|| ಗುರುರಾಜ ಪೋಶೆಟ್ಟಿಹಳ್ಳಿಯವರು ಅಭಿಪ್ರಾಯಪಟ್ಟರು.
ಈ ದಿಶೆಯಲ್ಲಿ ಶ್ರೀವಿವೇಕಾನಂದ ಕಲಾಕೇಂದ್ರದವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಿಂದ ಎಂ.ಪ್ರಹ್ಲಾದ್ರವರ ನಿರ್ದೇಶನದಲ್ಲಿ ಪ್ರಥಮವಾಗಿ ಪ್ರಸ್ತುತಪಡಿಸಿದ ಟಿ.ಪಿ.ಕೈಲಾಸಂ ರವರ “ಟೊಳ್ಳು ಗಟ್ಟಿ’’ ನಾಟಕ ಅರ್ಥಪೂರ್ಣವಾಗಿ ಮೂಡಿ ಬಂದು ನೋಡುಗರ ಮನ ಸೆಳೆಯಿತು. ಎಲ್ಲಾ ಕಲಾವಿದರು ಪಾತ್ರದ ಔಚಿತ್ಯವನ್ನರಿತು ಅಭಿನಯಿಸಿದ್ದು ಹೃದಯಸ್ಪರ್ಶಿಯಾಗಿತ್ತು.
ಬಡಾವಣೆಗಳಲ್ಲಿ ಇಂತಹ ಒಳಾಂಗಣ ಸಭಾಂಗಣ ಅಗತ್ಯವಿದ್ದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರೀವಿವೇಕಾನಂದ ಕಲಾ ಕೇಂದ್ರ ಉತ್ತಮ ಸೇವೆ ಸಲ್ಲಿಸುತ್ತಿದೆಯೆಂದು, ಕೃಷ್ಣ ಕಾಲೇಜಿನ ಪ್ರೊ. ಶೈಲಜಾರವರು ಕಲಾಕೇಂದ್ರದ ಗೌರವ ಕಾರ್ಯದರ್ಶಿಗಳಾದ ಡಾ. ವಿ. ನಾಗರಾಜರವರನ್ನು ಅಭಿನಂದಿಸಿದರು.
ಇಂತಹ ಕಾರ್ಯಕ್ರಮಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿರುವ ಲಾರೆಲ್ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಮಹಾಲಕ್ಷ್ಮಿರಾಜ್ ರವರು, ವಿವೇಕಾನಂದ ಕಲಾಕೇಂದ್ರವು ಹಲವಾರು ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ಮಕ್ಕಳನ್ನು ಪ್ರೋತ್ಸಾಹಿಸಿ, ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನು ಗುರ್ತಿಸಿ ಪುರಸ್ಕರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಡಾ. ಎನ್. ಶ್ವೇತ ಹಾಗೂ ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ಎಂ. ಕೆ. ಜಯಶ್ರೀ ಉಪಸ್ಥಿತರಿದ್ದರು.