spot_img
spot_img

ನಾಲ್ಕು ಗಜಲ್ ಗಳು

Must Read

- Advertisement -

ಬಾಯ್ಬಿರಿದ ಭುವಿಗೆ ಕಣ್ಣೀರು ಹನಿಸುವವರು ನಾವು

ತೇವವನು ಕರ ತಾಕಿಸುತ ಖುಷಿ ಪಡುವವರು ನಾವು

ಹಸಿರಿನ ಹಗಲು ಕನಸು ಕಂಡು ಕುಣಿಯುವವರು ನಾವು
ಬಿಸಿಲಿಗೆ ಬೆವರು ಚೆಲ್ಲಿ ಬೇಗೆಯ ತಣಿಸುವವರು ನಾವು

- Advertisement -

ಮೋಡಗಳ ಕೈಹಿಡಿದು ತಡೆಯ ಬಯಸುವವರು ನಾವು
ಬೆಳೆದ ಬೆಳೆಗೆ ಚರಗ ಚೆಲ್ಲಿ ತುತ್ತು ತಿನ್ನಿಸುವವರು ನಾವು

ಸಂತಸದ ಕಿರೀಟ ಹೊತ್ತ ಅರಸನ ಗತ್ತಿನವರು ನಾವು
ಸ್ವಾಭಿಮಾನದಿ ಸೆಟೆದು ನಿಲ್ಲುವ ಸಾಹುಕಾರರು ನಾವು

ಜಂತಿಯಲ್ಲಿದ್ದ ಬಾರ್ಕೋಲಿಗೆ ಹಂತಿಪದ ಕಲಿಸಿದವರು ನಾವು
ಮಣ್ಣಿನ ಕಂಬಳಿ ಮೇಲೆ ಮೆತ್ತಗೆ ಕುಳಿತು ತಿಂದವರು ನಾವು

- Advertisement -

ಧರೆ ಇರುವವರೆಗೆ ಜೊತೆಗಿರುವ ‘ಅಮರ’ ರೈತರು ನಾವು
ನೋವು ನುಂಗಿ ಹಸಿವು ನೀಗಿಸುವ ಅನ್ನದಾತರು ನಾವು

ಅಮರೇಶ ಎಂಕೆ


ನೀನೆ ಒಂದು ಹಾಡಾಗಿರುವಾಗ ಯಾವ ಹಾಡು ಹೇಳಲಿ ಗೆಳತಿ
ಸಪ್ತ ವರ್ಣಗಳೂ ನಿನ್ನಲ್ಲಿರುವಾಗ ಯಾವ ಬಣ್ಣ ಕೊಡಲಿ ಗೆಳತಿ

ನಯನಗಳು ಹರಿಣಿಯ ಹಾಗೆ ಉತ್ಸಾಹದ
ಜಿಗಿತ ಸೆಳೆತವಾಗದಿರುವುದೆ
ದೃಷ್ಟಿಸಿದಷ್ಟೂ ನೀನೆ ಬೇರೆಯ ನೋಟ ಹೇಗೆ ನೋಡಲಿ ಗೆಳತಿ

ಮೊದಲ ಬಾರಿ ಭೇಟಿಯಾದಾಗಲೇ ಹೃದಯ ಕೊಟ್ಟಾಯಿತು
ಮರಳಿ ಪಡೆವುದಕೆ ಅಲೆಯುತಿರುವೆ ಹೇಗೆ ಕೇಳಲಿ ಗೆಳತಿ

ನಿನಿಲ್ಲದ ಸಮಯ ಸುದೀರ್ಘ ಮಾತಾಡುತ್ತೇನೆ ನಿನ್ನೊಂದಿಗೆ
ನೀನು ಇದಿರಾದ ಹೊತ್ತು ಮಾತು ಬರದು ಮೌನವಿರದು ಹೇಗೆ ಇರಲಿ ಗೆಳತಿ

ಪದಕೆ ಪದ ಬೆಸೆದು ದನಿ ಹೊಸೆದು ಗಜಲೊಂದು ಹೊರಹೊಮ್ಮಲಿ ಅನು
ಗಂಟಲೊಣಗಿ ಉಸಿರು ನಿಲ್ಲುವ ಮುನ್ನ ಈ ಆಸೆ ಈಡೇರಲಿ ಗೆಳತಿ


ಇಂದಿನ ರಾತ್ರಿ ಇರಲಿ ಹೂವುಗಳ ಮಾತು
ಒಂದೆರಡಲ್ಲ ಕುಸುಮ ರಾಶಿಗಳ ಮಾತು

ದಂಡೆ ಹಾರ ತುರಾಯಿ ಗುಲದಸ್ತಾ ಅರಳಿವೆ
ಸಂಜೆಗೆ ಘಮಿಪ ಹೂ ಮುತ್ತುಗಳ ಮಾತು

ಪುಷ್ಪಗಳು ಚರ್ಚೆಗಿವೆ ಪ್ರತಿ ಬೈಗೂ ಬೆಳಗೂ
ಜಗದ ತುಂಬೆಲ್ಲ ಬಿರಿದ ಮೊಗ್ಗುಗಳ ಮಾತು

ಮೊಗ ಸುಮದಿ ನಯನ ಸಾವಿರ ಕಥೆ ಹೇಳಿದೆ
ಸೆಳೆದೆಳೆವ ಇಂದ್ರಚಾಪದ ವರ್ಣಗಳ ಮಾತು

ಅರಳಿ ಕಂಪು ಹರಡಿ ಬಾಡುವ ಸಾರ್ಥಕ್ಯವಿದು ಸಾಕಿ
ಲೋಕರೀತಿಯಿದು ಮರಳಿ ಗಂಧಿಸಿದ ದಿನಗಳ ಮಾತು

ಅದೆಷ್ಟೋ ಬಿಕರಿಯಾದವು ಹೂಗಳು ಎಷ್ಟೋ ಕೈಗಳಿಗೆ
ಇರುವಲ್ಲಿಯೇ ತನ್ನತನದಿ ಹೊಳೆವ ಚುಕ್ಕೆಗಳ ಮಾತು

ಜೊತೆ ಸ್ನೇಹ ಹಿತ ಪ್ರೀತಿ ಮಧುರ ಗಮನವಿದು ಸಾಕಿ
ಪ್ರಣಯ ಮಕರಂದ ಲೇಪಿತ ಹೂವ ಶರಗಳ ಮಾತು

ಸೌರಭದಿ ಗಝಲಿಂದು ಸಂಪನ್ನವಾಯಿತು ಅನು
ಮಧುಬಂಧದಿ ಬೆಸೆದ ಸುಮದಕ್ಕರ ಪದಗಳ ಮಾತು


ಪ್ರತಿ ತಪ್ಪಿಗೂ ದೇವ ಕ್ಷಮಿಸದಿದ್ದರೆ ಏನಾಗುತ್ತಿತ್ತು
ಎಡೆಬಿಡದೆ ತನು ಮನಕೆ ಗಾಯವಾಗಿದ್ದರೆ ಏನಾಗುತ್ತಿತ್ತು

ನೀರಿಲ್ಲದಿದ್ದರೆ ನಾರುವ ದೇಹಕೆಷ್ಟು ಸೌಂದರ್ಯ ಮನ್ನಣೆಯಿದೆ
ಹನಿ ನೀರು ಸಿಗದೆ ಜಲ ಬತ್ತಿದ್ದರೆ ಏನಾಗುತ್ತಿತ್ತು

ಬೆಳಕಿನಲಿ ಜಗವ ಕಂಡೆವೆಂದು ಬೀಗುವ ಬಹು ದೃಷ್ಟಿಗಳು ನಾವು
ಬೆಂಗದಿರ ತಂಗದಿರ ಬೆಳಗದಿದ್ದರೆ ಏನಾಗುತ್ತಿತ್ತು

ಉಸಿರಿದೆಯೆಂದು ದೇಹಕೆ ಚೈತನ್ಯ ಅಹಂಕಾರ ಹೊತ್ತು ತಿರುಗುತಿದೆ
ಜೀವಗಾಳಿ ಬೀಸದೆ ನಿಲ್ಲಿಸಿದ್ದರೆ ಏನಾಗುತ್ತಿತ್ತು

ಆಹಾರ ಸರಪಳಿಯದೋ ಹಸಿರು ಪೈರಿನ ಬೆಳೆ ಸಮೃದ್ಧವದು
ನಿಸ್ವಾರ್ಥ ಮರಗಿಡ ಸರಿಗಟ್ಟಿದ್ದರೆ ಏನಾಗುತ್ತಿತ್ತು

ಅವರವರ ಕರ್ತವ್ಯವದು ಭೇದವೆಣಿಸದೆಲೆ ನಡೆದಿಹದು *ಅನು*
ಪ್ರಕೃತಿ ಮುನಿಸಿ ವಿಕೃತಗೊಂಡಿದ್ದರೆ ಏನಾಗುತ್ತಿತ್ತು

ಅನಸೂಯ ಜಹಗೀರದಾರ

- Advertisement -

1 COMMENT

Comments are closed.

- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group