ಮೂಡಲಗಿ – ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ಸಿಮೆಂಟ್, ಕಬ್ಬಿಣ,ಗ್ಯಾಸ್, ದಿನಸಿ ವಸ್ತುಗಳು ಅಷ್ಟೇ ಅಲ್ಲದೆ ಕುಡುಕರಿಗೆ ಪ್ರಿಯವಾಗಿರುವ ಸಾರಾಯಿ ಬೆಲೆಯಲ್ಲಿ ಕೂಡ ಅತೀ ಹೆಚ್ಚಳವಾಗಿದ್ದು ಬಡವರ ಜೀವನ ದುರ್ಭರವಾಗಿದೆ ಆದ್ದರಿಂದ ತಕ್ಷಣವೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲ ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಜನತಾ ದಳ (ಜಾತ್ಯತೀತ ) ದ ಅರಭಾವಿ ಕ್ಷೇತ್ರ ಘಟಕದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಮೂಡಲಗಿ ತಹಸೀಲ್ದಾರ ಡಿ ಜೆ ಮಹಾತ್ ಅವರ ಮೂಲಕ ಮನವಿ ಸಲ್ಲಿಸಿರುವ ಪಕ್ಷದ ಕಾರ್ಯಕರ್ತರು ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಿದೆ. ಇದರಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗಿ ಸಿಮೆಂಟ್, ಕಬ್ಬಿಣ, ಗ್ಯಾಸ್ ಹಾಗೂ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದಷ್ಟೇ ಅಲ್ಲದೆ ಕುಡುಕರಿಗೆ ಪ್ರಿಯವಾಗಿರುವ ಸಾರಾಯಿ ಬೆಲೆ ಕೂಡ ಆಕಾಶಕ್ಕೇರಿದ್ದು ಬಡವರು ಸಾಲದ ಸುಳಿಯಲ್ಲಿ ಸಿಕ್ಕು ಒದ್ದಾಡುವಂತಾಗಿದೆ ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಮನವಿಗೆ ಸ್ಪಂದಿಸಿ ಎಲ್ಲ ದರಗಳನ್ನು ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ರೈತರಿಗೆ ಅಗತ್ಯವಾಗಿರುವ ರಸಗೊಬ್ಬರ ಕೂಡ ಅತ್ಯಂತ ದುಬಾರಿಯಾಗಿದ್ದು ಬೆಳೆಗೆ ಗೊಬ್ಬರ ಪೂರೈಸಲು ರೈತ ಪರದಾಡುವಂತಾಗಿದೆ. ಜನಸಾಮಾನ್ಯರ ಬದುಕು ಹೈರಾಣವಾಗಿದೆ ಕಾರಣ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರು ಶೀಘ್ರವೇ ಬೆಲೆ ಇಳಿಕೆ ಮಾಡಿ ಬಡಜನರು ಹಾಗೂ ರೈತಾಪಿ ಜನರ ನೆರವಿಗೆ ಬರಬೇಕು ಎಂದು ಜಾತ್ಯತೀತ ಜನತಾ ದಳದ ಅರಭಾವಿ ಘಟಕವು ತಹಸೀಲ್ದಾರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ತಿಳಿಸಿದೆ.