ಮೂಡಲಗಿ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಒಂದು ಪ್ರಮುಖ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನಿರುದ್ಯೋಗಿ ಯುವಕ-ಯುವತಿಯರಿಗೆ ಸಹಾಯ ಮಾಡುವ ಮೂಲಕ ಕೃಷಿಯೇತರ ವಲಯದಲ್ಲಿ ಸೂಕ್ಷ್ಮ ಉದ್ಯಮಗಳ ಸ್ಥಾಪನೆಯ ಮೂಲಕ ಸ್ವಯಂ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ರಾಜ್ಯಸಭಾ ಸಂಸತ್ತಿನ ಬಜೆಟ್ ಅಧಿವೇಶನಲ್ಲಿ ಕರ್ನಾಟಕದಲ್ಲಿ ಮಹಿಳಾ ಕೇಂದ್ರಿತ ಉದ್ಯಮಗಳ ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ 1650 ಯೋಜನೆಗಳಲ್ಲಿ 13,200 ಉದ್ಯೋಗ ಸೃಷ್ಠಿಸಲಾಗಿದೆ ಎಂದು ತಿಳಿಸಿದ ಸಚಿವರು, ದೇಶದಲ್ಲಿ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ, ಉಪಕರಣ ಕೊಠಡಿ ಮತ್ತು ತಂತ್ರಜ್ಞಾನ ಕೇಂದ್ರಗಳು, ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ ನಿಧಿಯ ಯೋಜನೆ, ಸಂಗ್ರಹಣೆ ಮತ್ತು ಮಾರುಕಟ್ಟೆ ಬೆಂಬಲ ಯೋಜನೆ, ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸುತ್ತದೆ ಎಂದರು.
ಸಾರ್ವಜನಿಕ ವಲಯದ ಉದ್ಯಮಗಳು ತಮ್ಮ ವಾರ್ಷಿಕ ಸಂಗ್ರಹಣೆಯಲ್ಲಿ ಕನಿಷ್ಠ ಶೇ 3% ರಷ್ಟು ಮಹಿಳಾ ಮಾಲೀಕತ್ವದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಂದ ಸಂಗ್ರಹಿಸಬೇಕು ಎಂದು ಸರ್ಕಾರವು ಕಡ್ಡಾಯಗೊಳಿಸಿದೆ. 2021-22ರಲ್ಲಿ ಮಹಿಳಾ ಕ್ವಾಯರ ಯೋಜನೆಯಡಿ ಒಟ್ಟು 2,331 ಫಲಾನುಭವಿಗಳು, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ ಒಟ್ಟು 86,380 ರಲ್ಲಿ 32,883 ಫಲಾನುಭವಿಗಳು ಹಾಗೂ ಸಾರ್ವಜನಿಕ ಸಂಗ್ರಹಣೆ ನೀತಿ ಒಟ್ಟು 1,73,856 ರಲ್ಲಿ 7,735 ಫಲಾನುಭವಿಗಳನ್ನು ಗುರುತಿಸಲಾಗದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.