ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಪ್ರಗತಿ ಪರ ರೈತರಾದ ಖಾಜೇಸಾಬ ಗಾಲಿಸಾಬ ಅವಟಿ (ಮುಲ್ಲಾ) ಅವರ ಎತ್ತುಗಳು ಗ್ರಾಮದ ಪ್ರಕಾಶ ಬಸವರಾಜ ಜೋಗೂರ ಅವರ ಕೇಸರಿ ಭೂಮಿಯಲ್ಲಿ ಶುಕ್ರವಾರರಂದು ಮುಂಜಾನೆ ವೇಳೆಯಿಂದ ಸತತ 9 ತಾಸಿನಲ್ಲಿ 34 ಎಕರೆ ಭೂಮಿಯಲ್ಲಿ ಅವಟಿಯವರು ಎತ್ತುಗಳ ಮೂಲಕ ಹರಗಿ ಉತ್ತಮ ಸಾಧನೆ ಮಾಡಿದ್ದಾರೆ.
ರೈತ ಮೌಲಾಲಿ ಅವಟಿ ಮಾತನಾಡಿ, ನಾವು ಶ್ರೀಮಂತರ ಹೊಲಗಳಿಗೆ ಕೆಲಸಕ್ಕೆ ಹೋಗುತ್ತೇವೆ ಆದರೆ ಇಂದು ನಮ್ಮ ಎತ್ತುಗಳ ಹಾಗೂ ನಮ್ಮ ಸಾಧನೆ ತೋರಬೇಕು ಅಂದುಕೊಂಡು ಗ್ರಾಮದ ಜೋಗೂರ ಸಾಹುಕಾರ ಭೂಮಿಯಲ್ಲಿ 34 ಎಕರೆ ಭೂಮಿಯಲ್ಲಿ 9 ತಾಸಿನಲ್ಲಿ ಹರಗಿವೆ ಎಂದರು , ನಮಗೆ ಬಡತನ ಇರಬಹುದು ಆದರೆ ನಮ್ಮ ಎತ್ತುಗಳಿಗೆ ನಿತ್ಯ ನಿರಂತರವಾಗಿ ಉತ್ತಮ ಆಹಾರ ನೀಡುತ್ತೇನೆ, ಅವುಗಳ ಉಪಚಾರ ಮಾಡುತ್ತೇನೆ ನನ್ನ ಮನೆಯಲ್ಲಿ ನಮ್ಮ ತಂದೆ , ತಾಯಿ ಎತ್ತುಗಳ ಮೇಲೆ ಬಹಳ ಪ್ರೀತಿಯಿಂದ ಕಾಣುತ್ತಾರೆ , ನಮ್ಮ ಎತ್ತುಗಳಿಗೆ ನಿರಂತರವಾಗಿ ಉತ್ತಮ ಆರೋಗ್ಯ ಜೊತೆಯಲ್ಲಿ ಸಾತ್ವಿಕ ಹುಲ್ಲು ಕಣಕಿ ಹಿಂಡಿ ಮೇಲಿಂದ ಮೇಲೆ ನೀರು ಕುಡಿಸುವದು ಮಾಡುತ್ತಾರೆ, ನಮ್ಮ ಎತ್ತುಗಳು ನಮ್ಮ ಮನೆಯ ಜೀವಾಳವಾಗಿವೆ ಎಂದರು.
ನಮ್ಮ ಎತ್ತುಗಳು ಭೂಮಿಯನ್ನು ಹರಗುವದನ್ನು ನೋಡಲು ಬ್ಯಾಕೋಡ, ಕೊಕಟನೂರ,ಬಂದಾಳ ಗ್ರಾಮದ ರೈತರು ಬಂದಿದ್ದರು.ಬಂದ ರೈತರಿಗೆ ಜೋಗೂರ ಸಾಹುಕಾರರು ಊಟ ಉಪಚಾರ ಮಾಡಿಸಿದರು ಎಂದರು.
9 ತಾಸಿನಲ್ಲಿ 34 ಎಕರೆ ಭೂಮಿಯಲ್ಲಿ ಹರಗಿದ್ದು ಕಂಡು ಗ್ರಾಮದ ಯುವಕರು, ರೈತರು ಸಂತೋಷ ಪಟ್ಟು ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಿದರು. ಮೆರವಣಿಗೆಯಲ್ಲಿ ಎತ್ತುಗಳಿಗೆ ಸಿಂಗಾರ ಮಾಡಿ ಹಲಗೆ ಬಾರಿಸುತ್ತಾ ಮದ್ದು ಸುಡುತ್ತಾ ಮಂಡಕ್ಕಿ ಹಾರಿಸುತ್ತಾ ಯುವಕರು ಕೆಂಪು ಬಣ್ಣ ರೈತರ ಮೈ ಮೇಲೆ ಹಾಕುವ ಮೂಲಕ ಅದ್ದೂರಿಯಾಗಿ ಮೆರವಣಿಗೆ ಮಾಡಿದರು,ಪ್ರಗತಿ ಪರ ರೈತ ಪ್ರಕಾಶ ಬಸವರಾಜ ಜೋಗೂರ .ಶಿವಾನಂದ ಬಸವರಾಜ ಜೋಗೂರ , ಶ್ರೀಮತಿ ಲಕ್ಷ್ಮೀ ಬಸವರಾಜ ಜೋಗೂರ ತಮ್ಮ ಮನೆಯಲ್ಲಿ ಸಂತಸದಿಂದ ಎತ್ತುಗಳಿಗೆ ಕುಟುಂಬದ ಸುಮಂಗಲೆಯರು ಸೇರಿ ಕೊಂಡು ಆರತಿ ಮಾಡಿ ಮನೆಯಲ್ಲಿ ಕರೆದುಕೊಂಡರು. ನಂತರ ಮೆರವಣಿಗೆಯಲ್ಲಿ ಭಾಗವಹಿಸಿದ ರೈತರು ಹಾಗೂ ಯುವಕರನ್ನು ಮನೆಯಲ್ಲಿ ಸಿಹಿ ಊಟ ಮಾಡಿಸಿದರು. ಚಿಕ್ಕ ಸಿಂದಗಿ ಗ್ರಾಮದಲ್ಲಿ ಇಂದು ಹಬ್ಬದ ವಾತವರಣ ನಿರ್ಮಾಣವಾಗಿತ್ತು.