ಮೂಡಲಗಿ – ಬದಲಾದ ಇಂದಿನ ಕಾಲಘಟ್ಟದಲ್ಲಿ ನಾನಾ ಕಾರಣಗಳಿಂದ ನಮ್ಮ ಉಡುಗೆ, ತೊಡುಗೆ, ಸಂಪ್ರದಾಯ, ಆಚರಣೆ, ವಿವಿಧ ಕಲೆಗಳು ಅವನತಿಯತ್ತ ಸಾಗುತ್ತಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಜಾನಪದ ಜಾತ್ರೆಗಳ ಅಗತ್ಯತೆ ಇಂದು ತುಂಬಾ ಇದೆ ಅವುಗಳನ್ನು ಪೋಷಿಸಿ ಬೆಳೆಸುವ ಕಾರ್ಯ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹಳ್ಳೂರಿನ ಎಸ್ ಆರ್ ಸಂತಿ ಕಾಲೇಜಿನ ಸಮಾಜ ಶಾಸ್ತ್ರ ಉಪನ್ಯಾಸಕ ವಾಯ್.ಬಿ.ಕಳ್ಳಿಗುದ್ದಿ ಹೇಳಿದರು.
ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಹಾಗೂ ಸಾಂಸ್ಕೃತಿಕ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ‘ಜಾನಪದ ಜಾತ್ರೆ-2022’ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಹಳ್ಳಿಯ ಬದುಕು ಬಂಗಾರದ ಬದುಕು ಇಂದು ನಾವು ಆಧುನಿಕ ಸಂಸ್ಕೃತಿಗೆ ಒಗ್ಗಿಕೊಂಡು ನಿಜವಾದ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಮುಂದಿನ ಜನಾಂಗಕ್ಕೆ ಜನವಾಣಿಯಾಗಿರುವ ಈ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮಹಾವಿದ್ಯಾಲಯ ಹಮ್ಮಿಕೊಂಡ ಈ ಜಾನಪದ ಜಾತ್ರೆ ಕಾರ್ಯಕ್ರಮ ನಮ್ಮ ಮೂಡಲಗಿ ಕೀರ್ತಿಯನ್ನು ನಾಡಿನಾದ್ಯಂತ ಹಬ್ಬಿಸುತ್ತಿದ್ದು ಪ್ರತಿವರ್ಷವೂ ಈ ಕಾರ್ಯಕ್ರಮ ಜರುಗಲಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಅತಿಥಿ ಮಹೋದಯರನ್ನು ಸಾರೋಟಿನಲ್ಲಿ ದೇವರ ಕಲ್ಲೋಳಿಯ ಕರಡಿ ಮಜಲು ಕಲಾಮೇಳದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು. ನಮ್ಮೆಲ್ಲರಿಗೂ ಅನ್ನ ನೀಡುವ ಭೂ ತಾಯಿಗೆ ರಾಶಿ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಾಂಶುಪಾಲರಾದ ಶಾನೂರಕುಮಾರ ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಎಲ್ಲರ ಸಹಕಾರದಿಂದ ಮಹಾವಿದ್ಯಾಲಯ ಪ್ರತಿವರ್ಷ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಮ್ಮ ನಾಡಿನ ಹೆಮ್ಮೆಯ ಜಾನಪದ ಕಲಾವಿದರಾದ ಈಶ್ವರಚಂದ್ರ ಬೆಟಗೇರಿ ಯವರು ಶ್ರೀ ಕೃಷ್ಣ ಪಾರಿಜಾತ ನಾಟಕದ ಕೊರವಂಜಿ ಸನ್ನಿವೇಶವನ್ನು ಅದ್ಭುತವಾಗಿ ಅಭಿನಯಿಸಿದರು. ಸ್ಥಳೀಯ ಮೂಡಲಗಿಯ ಜಾನಪದ ಕಲಾವಿದರಾದ ಚುಟುಕುಸಾಬ ಜಾತಗಾರ ಅವರು ಸಿದ್ಧಿ ಸೋಗು ಕಲೆಯನ್ನು ಪ್ರದರ್ಶಿಸಿದರು. ಅದೇ ರೀತಿ ದೇವರ ಕಲ್ಲೋಳಿಯ ಕರಡಿ ಮಜಲು ತಂಡ ಹಾಗೂ ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಾನಪದ ಕಲಾವಿದರು ಪುರವಂತಿಕೆ ಕಲೆಯನ್ನು ಪ್ರದರ್ಶಿಸಿದರು.
ಮಹಾವಿದ್ಯಾಲಯಕ್ಕೆ ಇಂದು ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಹಳ್ಳಿಯ ಬದುಕಿನ ದೇಸಿ ಉಡುಪುಗಳನ್ನು ಧರಿಸಿ ಆಗಮಿಸಿದ್ದರು ಜೊತೆಗೆ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಶ್ರೀಧರ ಬೋಧ ಸ್ವಾಮೀಜಿಗಳು ಆಶೀರ್ವಚನ ನೀಡಿ, ನಮ್ಮ ಜನಾಂಗದ ಜೀವನಾಡಿಯೆಂದರೆ ಜಾನಪದ ಸಂಸ್ಕೃತಿ. ಇಲ್ಲಿ ನೆರೆದಿರುವ ದೃಶ್ಯ ನೋಡಿದರೆ ಜಾನಪದವೇ ನಮ್ಮ ಉಸಿರಿನಲ್ಲಿ ಬೆರೆತಿದೆ ಎಂಬಂತಿದೆ. ಅದನ್ನು ಉಳಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಬಿ.ಸಿ. ಹೆಬ್ಬಾಳ, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಶ್ರೀಮತಿ ಶಿವಲೀಲಾ, ಬಿ.ಎಸ್. ಕೆಸರಗೊಪ್ಪ, ವೀಣಾ ಮೂಗನೂರ, ಸುಮಿತ್ರಾ ಮಾಸ್ತಿ , ರಾಧಾ ಎಂ.ಎನ್, ಶ್ರೀಮತಿ ಗಾಯತ್ರಿ ಸಾಳೋಖೆ, ಚೇತನರಾಜ್ ಬಿ, ಡಾ. ರವಿ ಗಡದನ್ನವರ, ಶಿವಕುಮಾರ, ಹನುಮಂತ ಕಾಂಬಳೆ, ಶ್ರೀಮತಿ ಶೀತಲ ತಳವಾರ , ಶಿವಾನಂದ ಚಂಡಕೆ, ಮಹಾದೇವ ಪೋತರಾಜ, ಎ.ಜಿ.ಗಿರೆನ್ನವರ, ಎನ್.ಬಿ.ಸಂಗ್ರೇಜಿಕೊಪ್ಪ, ಶಿವು ಮುಗಳಖೋಡ ಮುಂತಾದವರು ಭಾಗವಹಿಸಿದ್ದರು.
ಮಧ್ಯಾಹ್ನದ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುಮಾರಿ ಗೀತಾ ಭೂಮಣ್ಣವರ ಸ್ವಾಗತಿಸಿದರು. ಕುಮಾರಿ ಭಾಗ್ಯಶ್ರೀ ಹಂದಿಗುಂದ ಹಾಗೂ ಶಿಲ್ಪಾ ಮುಗಳಖೋಡ ನಿರೂಪಿಸಿದರು. ಕುಮಾರ ಪ್ರಶಾಂತ ಯರಗುದ್ರಿ ವಂದಿಸಿದರು.