ಸವದತ್ತಿ: ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯಕ್ಕೆ ನ್ಯಾಕ್ನಿಂದ ‘ಎ’ ಗ್ರೇಡ್ ಮಾನ್ಯತೆ ದೊರೆತಿದೆ. ಇದೇ ೩೦ನೇ ಜೂನ್ ಹಾಗೂ ಜುಲೈ ೦೧, ೨೦೨೨ರ ತಾರೀಖಿನಂದು ಯುಜಿಸಿಯ ನ್ಯಾಕ್ ಪರಿಶೀಲನಾ ಸಮಿತಿಯು ಮಹಾವಿದ್ಯಾಲಯಕ್ಕೆ ಭೇಟಿ ನೀಡಿತ್ತು. ಈ ಮುಂಚೆ ಇದ್ದ ಬಿ++ಗ್ರೇಡ್ನ್ನು ದಾಟಿ ನಾಲ್ಕನೇ ಸುತ್ತಿನ ಪುನರ್ ಮೌಲ್ಯಾಂಕನ ಪರಿಶೀಲನೆಯಲ್ಲಿ ಕಾಲೇಜು ‘ಎ’ ಗ್ರೇಡ್ ಪಡೆದಿದೆ.
ಈ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿ ಉತ್ತರ ಪ್ರದೇಶ ರಾಜ್ಯದ ವಾರಣಾಸಿಯ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಓಂಪ್ರಕಾಶ್ ರಾಯ್, ಸಂಯೋಜಕ ಸದಸ್ಯರಾಗಿ ಆಂಧ್ರಪ್ರದೇಶ ರಾಜ್ಯದ ಅನಂತಪುರಂನ ಎಸ್.ಕೆ. ವ್ಯವಸ್ಥಾಪನಾ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ಸಿ.ಎನ್. ಕೃಷ್ಣಾ ನಾಯಿಕ್ ಮತ್ತು ಸದಸ್ಯರಾಗಿ ಮಹಾರಾಷ್ಟ್ರ ರಾಜ್ಯದ ಠಾಣೆಯ ಶಂಕರ ನಾರಾಯಣ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿಷ್ಣು ಯಾದವ ಅವರು ಆಗಮಿಸಿದ್ದರು.
ಈ ಸಮಿತಿಯು ೨೦೧೬ರಿಂದ ೨೦೨೧ ವರೆಗಿನ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ವಿವಿಧ ವಿಭಾಗಗಳ ಚಟುವಟಿಕೆಗಳು ಹಾಗೂ ಮಹಾವಿದ್ಯಾಲಯದ ಭೌತಿಕ ಪರಿಸರವನ್ನು ಪ್ರತ್ಯಕ್ಷ್ಯವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು.
ಕೆ.ಎಲ್.ಇ.ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಬಿ. ಕೋರೆ, ಅಧ್ಯಕ್ಷರಾದ ಮಹಾಂತೇಶ ಎಸ್.ಕೌಜಲಗಿ, ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಜಯಾನಂದ ಮುನವಳ್ಳಿ ಹಾಗೂ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷರಾದ ವಿರೂಪಾಕ್ಷ ಮಾಮನಿ, ಸದಸ್ಯರಾದ ಬಿ.ವಿ.ಮಲಗೌಡರ, ಉಮೇಶ ಬಾಳಿ, ಈಶ್ವರ ಜಕಾತಿ ಇವರು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಮಾರುತಿ ದೊಂಬರ ಮತ್ತು ಬೋಧಕ, ಬೋಧಕೇತರ ಸಿಬ್ಬಂದಿವರ್ಗ, ಹಳೆಯ ವಿದ್ಯಾರ್ಥಿ ಸಂಘ, ಪಾಲಕ ಬಳಗ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.