ಮುನವಳ್ಳಿ: ಶಿಕ್ಷಣ ನಿಂತ ನೀರಲ್ಲ.ಗುರು ತರಗತಿ ಕೋಣೆಗೆ ಮಾತ್ರ ಸೀಮಿತವಾಗಿರದೇ ವಿದ್ಯಾರ್ಥಿಗಳ ಬದುಕಿನ ಪುಟದಲ್ಲಿ ಹೆಜ್ಜೆ ಹೆಜ್ಜೆಗೂ ಅವರಿಗೆ ಜ್ಞಾನದ ಮಾರ್ಗವನ್ನು ತೋರಿಸಬಲ್ಲ.ಇಂಥ ಗುರು ತಾನು ಬೆಳಗುವುದರೊಂದಿಗೆ ಇತರರಿಗೂ ಜ್ಞಾನ ಉಣ ಬಡಿಸಿ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳ ಮನದಾಳದಲ್ಲಿ ಉಳಿಯಬಲ್ಲ ಎಂಬುದಕ್ಕೆ ಸರ್ವಿ ಗುರುಗಳು ಸಾಕ್ಷಿ. ಬೆಳಕಿನೆಡೆಗೆ ಎಂಬ ಕೃತಿ ಜ್ಞಾನದ ಬೆಳಕನ್ನು ನೀಡುವ ಗುರುಸ್ಮರಣೆ ಕುರಿತುದಾಗಿದೆ. ಸರ್ವಿ ಗುರುಗಳು ಶಿಕ್ಷಣದ ಕೊರತೆ ಇದ್ದ ಸಂದರ್ಭದಲ್ಲಿ ಮುನವಳ್ಳಿಯಲ್ಲಿ ಜೇವೂರ ಗುರುಗಳ ಜೊತೆಗೂಡಿ ಶೈಕ್ಷಣಿಕ ಕ್ರಾಂತಿ ಮಾಡಿದರು.ಇಂದು ಜನತಾ ಗುರುಕುಲ ಸಂಸ್ಥೆ ಅಂದು ಪ್ರೌಢಶಾಲೆಯ ಮೂಲಕ ಆರಂಭವಾಗಿ ಇಂದಿನ ಪದಾಧಿಕಾರಿಗಳ ಮೂಲಕ ಪದವಿ ಪೂರ್ವ ಪದವಿ ಐಟಿಐ ಬಿಈಡಿ ಹೀಗೆ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡಿದೆ.ಸರ್ವಿ ಗುರುಗಳ ಸೇವೆ ಯಾವತ್ತೂ ಅಜರಾಮರ ಎಂದು ಮುಕ್ತಾನಂದ ಸ್ವಾಮೀಜಿಯವರು ಹೇಳಿದರು.
ಅವರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದಡಿಯಲ್ಲಿ ಮುನವಳ್ಳಿ ಬಿ.ಈಡಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಸಂಪಾದಕತ್ವದ “ಬೆಳಕಿನಡೆಗೆ” ಕೃತಿ ಲೋಕಾರ್ಪಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸರ್ವಿ ಗುರುಗಳ ವಿದ್ಯಾರ್ಥಿಗಳಾದ ಪಾಂಡುರಂಗ ಯಲಿಗಾರ, ಕೆ.ಎಲ್.ಮಳಗಲಿ, ಎಂ.ಆರ್.ಗೋಪಶೆಟ್ಟಿ, ರವೀಂದ್ರ ಯಲಿಗಾರ, ಎಸ್.ವ್ಹಿ.ಚೌಡಾಪೂರ, ಮೋಹನ ಸರ್ವಿ ಲೇಖಕ ವೈ.ಬಿ.ಕಡಕೋಳ, ಸರ್ವಿ ಗುರುಗಳ ಧರ್ಮಪತ್ನಿ ಲೀಲಾತಾಯಿ ಸರ್ವಿ, ಸುಧೀರ ವಾಗೇರಿ, ಸುರೇಶ ಜಾವೂರ, ಗುರುನಾಥ ಪತ್ತಾರ, ವೈ.ಎಫ್ ಶಾನುಭೋಗ, ಯಶವಂತ ಗೌಡರ, ರಾಜೇಂದ್ರ ಪಾಟೀಲ (ಉಮಾತನಯರಾಜ), ಸಿ.ಡಿ.ಬೋವಿ, ಎ.ಎ.ಅಣ್ಣೀಗೇರಿ, ಶಂಕರಗೌಡ ಪಾಟೀಲ, ತಾನಾಜಿರಾವ್ ಮುರಂಕರ, ವೀರಣ್ಣ ತುಳಜನ್ನವರ, ಬಸಯ್ಯ ವಿರುಪಯ್ಯನವರಮಠ ಸೇರಿದಂತೆ ಸರ್ವಿ ಗುರುಗಳ ಮಕ್ಕಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿಯವರು ಮಾತನಾಡುತ್ತ, “ಸರ್ವಿ ಹಾಗೂ ಜೇವೂರ ಗುರುಗಳು ಅಂದು ನೆಟ್ಟ ಸಸಿ ಇಂದು ಹೆಮ್ಮರವಾಗಿದೆ.ಇಂತಹ ಮಹತ್ವಪೂರ್ಣ ಕೃತಿ ವೈ.ಬಿ.ಕಡಕೋಳರ ಸಂಪಾದತ್ವದಲ್ಲಿ ಬೆಳಕಿನಡೆಗೆ ಹೆಸರಿನಲ್ಲಿ ಹೊರಬಂದಿದ್ದು ಇಂದಿನ ಪೀಳಿಗೆ ಇಂತಹ ಗುರುಗಳ ಕುರಿತು ಓದುವ ಮೂಲಕ ಅವರ ಆದರ್ಶಗಳನ್ನು ನೆನೆಯಬೇಕು.ಕಡಕೋಳ ಗುರುಗಳು ಲೂಸಿ ಸಾಲ್ಡಾನಾ ಗುರುಮಾತೆಯ ಕುರಿತು ಬಹಳ ಮಹತ್ವಪೂರ್ಣ ಕೃತಿ ಹೊರತಂದಿದ್ದು ಎಲ್ಲ ವಿದ್ಯಾರ್ಥಿಗಳು ಅಂತಹ ಶಿಕ್ಷಕಿಯ ಕುರಿತು ತಿಳಿದುಕೊಳ್ಳಬೇಕು.ಮುಂದಿನ ದಿನಗಳಲ್ಲಿ ಕಡಕೋಳ ಗುರುಗಳಿಂದ ಇಂತಹ ಇನ್ನೂ ಮಹತ್ವಪೂರ್ಣ ಕೃತಿಗಳು ಮೂಡಿ ಬರಲಿ” ಎಂದು ಹಾರೈಸಿದರು.
ಎಸ್.ವ್ಹಿ.ಚೌಡಾಪೂರ ಗುರುಗಳು ಮಾತನಾಡಿ, ತಮ್ಮ ವೃತ್ತಿ ಬದುಕಿಗೆ ಸರ್ವಿ ಗುರುಗಳು ಕಾರಣ ಎಂಬುದನ್ನು ನೆನೆಪಿಸಿಕೊಂಡು ಸರ್ವಿ ಗುರುಗಳ ಬೋಧನೆಯ ಕಾರ್ಯ ವೈಖರಿಯನ್ನು ನೆನೆಯುತ್ತ ಸಕಲ ವಿದ್ಯೆಗಳ ಪಾರಂಗತರು ಸರ್ವಿ ಗುರುಗಳು ಎಂದು ಹೇಳಿದರು.
ಪಾಂಡುರಂಗ ಯಲಿಗಾರ ಮಾತನಾಡುತ್ತ, ಶಿಕ್ಷಣ ವಂಚಿತ ಮಕ್ಕಳ ಮನೆಗಳಿಗೆ ತೆರಳಿ ಅವರನ್ನು ಶಾಲೆಗೆ ಸೇರಿಸುವ ಮಹತ್ವದ ಕಾರ್ಯವನ್ನು ಸರ್ವಿ ಮತ್ತು ಜೇವೂರ ಗುರುಗಳು ಮಾಡಿದರು. ಅಂದಿನ ನಾಡಹಬ್ಬ ನಮ್ಮ ಎಲ್ಲ ಸಹಪಾಠಿಗಳ ಜೊತೆಗೆ ಸರ್ವಿ ಗುರುಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದ ರೀತಿಯನ್ನು ನೆನಪಿಸಿಕೊಂಡು ಅವರು ಅಂದು ಆರಂಭ ಮಾಡಿದ ಶಾಲೆಯಲ್ಲಿ ನಾವು ೩೦ ವಿದ್ಯಾರ್ಥಿಗಳಿದ್ದೆವು. ಇಂದು ಸಮಾಜದಲ್ಲಿ ನಾವೆಲ್ಲರೂ ಉನ್ನತ ಹುದ್ದೆ ಹೊಂದಿದ್ದೇವೆ ಇದಕ್ಕೆ ಕಾರಣ ಸರ್ವಿ ಗುರುಗಳು ಎಂದು ಗುರುಗಳ ಸ್ಮರಣೆಯ ನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮುಕ್ತಾ ಪಶುಪತಿಮಠ ಪ್ರಾರ್ಥನಾ ಗೀತೆ ಹೇಳೀದರು. ಬಾಳು ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಗುರುನಾಥ ಪತ್ತಾರ ಲೇಖಕರ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ವೈ.ಬಿ.ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಧೀರ ವಾಗೇರಿ ಸ್ವಾಗತಿಸಿದರು.ಮೋಹನ ಸರ್ವಿ ವಂದಿಸಿದರು.