ಲೇಖಕ ಡಾ. ಗಜಾನನ ಶರ್ಮ ಅವರು ಬರೆದ ಐತಿಹಾಸಿಕ ಕಾದಂಬರಿ- ʻರಾಣಿ ಚೆನ್ನಭೈರಾದೇವಿʼ. ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ; ಕರಿಮೆಣಸಿನ ರಾಣಿಯ ಅಕಳಂಕ ಚರಿತೆ -ಈ ಕೃತಿ. ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಈ ಕೃತಿ, ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. ಇದರ ಆಯ್ದ ಭಾಗಗಳನ್ನು ರಂಗರೂಪಾಂತರಗೊಳಿಸಿ ಹಿರಿಯ ರಂಗಭೂಮಿ ಕಲಾವಿದೆ ಡಾ.ಲೀಲಾ ಬಸವರಾಜು ಅಭಿನಯಿಸುವ ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’ ಪ್ರದರ್ಶನವನ್ನು ಇದೇ ಅ 29 ಶನಿವಾರ ಸಂಜೆ 6.15ಕ್ಕೆ ನಗರದ ಎನ್ ಆರ್ ಕಾಲೋನಿಯ ಪ್ರಭಾತ್ ಕಲಾಪೂರ್ಣಿಮಾದಲ್ಲಿ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ಆಯೋಜಿಸಿದ್ದಾರೆ.
ಕಲಾ ಸೇವೆಯಲ್ಲಿ ತಮ್ಮನ್ನು ಅರ್ಧ ಶತಮಾನದಿಂದಲೂ ತೊಡಗಿಸಿಕೊಂಡಿರುವ ಕಲಾವಿದೆ ಡಾ.ಲೀಲಾ ಬಸವರಾಜು 75ರ ವಯೋಮಾನದಲ್ಲೂ ಲವಲವಿಕೆಯಿಂದ ಅಭಿನಯಿಸಿರುವುದು ಈ ಪ್ರಯೋಗದ ವಿಶೇಷತೆ.
ತಮ್ಮ ಏಕವ್ಯಕ್ತಿ ಪ್ರಯೋಗಗಳಿಂದ ನಾಡಿನ ಮನೆಮತಾಗಿರುವ ಅವರು ಕಿರುತೆರೆಯಲ್ಲಿಯೂ ಜನಪ್ರಿಯ ನಟ. ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜೊತೆಗೆ ಧಾರಾವಾಹಿ, ಸಿನಿಮಾಗಳಲ್ಲಿಯೂ ನಟಿಸಿರುವ ಕೃಷ್ಣಮೂರ್ತಿ ಕವತ್ತಾರು ಅವರು ಬಹುಮುಖ ಪ್ರತಿಭೆ .ಇವರು ಪ್ರಸ್ತುತ ‘ಅವ್ವರಸಿ’ ಪ್ರಯೋಗದ ರಂಗ ರೂಪ, ವಿನ್ಯಾಸ , ಸಂಗೀತ ಮತ್ತು ನಿರ್ದೇಶನದ ಹೊಣೆಹೊತ್ತಿದ್ದಾರೆ.
ಅದಮ್ಯ ಚೇತನ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್ ನಾಟಕಕ್ಕೆ ಚಾಲನೆ ನೀಡುವರು, ನಿವೃತ್ತ ಐಎಎಸ್ ಅಧಿಕಾರಿ , ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಗಜಾನನ ಶರ್ಮ ಉಪಸ್ಥಿತರಿರುವರು.
ನಾಟ್ಯ ದರ್ಪಣ ಸಂಸ್ಥೆಯ ಅಧ್ಯಕ್ಷ ಅಬ್ಬೂರು ಜಯತೀರ್ಥ , ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ ಸಂಸ್ಥಾಪಕ ಗೋಪಿನಾಥ್ ಬಿ.ಆರ್.ಅವರಿಗೆ ಅಭಿನಂದನೆ ಸಮಾರಂಭದಲ್ಲಿ ನಟ, ನಿರ್ದೇಶಕ ಶ್ರೀಪತಿ ಮಂಜನ ಬೈಲು ವಿಶೇಷ ಆಹ್ವಾನಿತರಾಗಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.