ಮೂಡಲಗಿ – ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಇನ್ನೂ ತೆರವುಗೊಳಿಸಿಲ್ಲ.
ಈ ಸರ್ಕಾರ ಕನ್ನಡಿಗರ ಪರವಾಗಿ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ ಎಂಬುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.
ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ೧೯೬೪ ರ ಪೌರಸಭೆಯ ಕಾಯ್ದೆಯ ಪ್ರಕಾರ ಯಾವುದೇ ನಗರಸಭೆಯ ಕಟ್ಟಡದ ಮೇಲೆ ರಾಷ್ಟ್ರಧ್ವಜವನ್ನಷ್ಟೇ ಹಾರಿಸಬೇಕು ಇದನ್ನು ಬಿಟ್ಟು ಬೇರಾವುದೇ ಧ್ವಜವನ್ನು ಹಾರಿಸಿದಲ್ಲಿ ಅದರ ಮುಖ್ಯಸ್ಥರಿಗೆ ರೂ. ೫೦೦೦ ದಂಡ ಹಾಗೂ ೩ ತಿಂಗಳ ಜೈಲು ಶಿಕ್ಷೆ ವಿಧಿಸಬೇಕೆಂಬ ನಿಯಮ ಇದೆ ಹಾಗೂ ಧ್ವಜ ಹಾರಿಸಿದ ದಿನದಿಂದ ಪ್ರತಿದಿನಕ್ಕೆ ರೂ. ೫೦೦ ದಂಡ ವಿಧಿಸಬೇಕೆಂಬ ನಿಯಮ ಇದೆ ಆದರೂ ಜಿಲ್ಲಾಧಿಕಾರಿಗಳು ಈ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ದೂರಿದರು.
ಸದ್ಯದ ಬಿಜೆಪಿ ಸರ್ಕಾರ ತಾನು ಕನ್ನಡಿಗರ ಪರವಾಗಿ ಇರುವದಾಗಿ ಹೇಳಿಕೊಂಡರೂ ಮೊನ್ನೆ ಕನ್ನಡ ಧ್ವಜ ಹಿಡಿದಿದ್ದ ವಿದ್ಯಾರ್ಥಿಯ ಮೇಲೆ ಪೊಲೀಸರು ಹಲ್ಲೆ ಮಾಡಿದರು, ಬಾಗೇವಾಡಿಯಲ್ಲಿ ಕನ್ನಡ ಹೋರಾಟಗಾರರ ಮೇಲೆ ಹಲ್ಲೆ ಮಾಡಲಾಯಿತು. ಆದ್ದರಿಂದ ಬೊಮ್ಮಾಯಿ ಸರ್ಕಾರವು ಕನ್ನಡಿಗರ ವಿರೋಧಿ ಸರ್ಕಾರವೇ ಎಂಬ ಅನುಮಾನ ಮೂಡುತ್ತಿದೆ.
ಕಳೆದ ವರ್ಷದ ಡಿ.೨೦ ರಂದು ಜಿಲ್ಲಾಧಿಕಾರಿಗಳಿಗೆ ನಿಪ್ಪಾಣಿ ಪುರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಮನವಿ ಸಲ್ಲಿಸಲಾಗಿತ್ತು ಒಂದು ವರ್ಷವಾದರೂ ಇನ್ನು ತೆರವುಗೊಳಿಸಿಲ್ಲ. ಇನ್ನು ಮೇಲಾದರೂ ಜಿಲ್ಲಾಧಿಕಾರಿಗಳು ಈ ಭಗವಾಧ್ವಜವನ್ನು ತೆರವು ಗೊಳಿಸದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಕನ್ನಡಪರ ಸಂಘಟನೆಗಳ ಜೊತೆಗೂಡಿ ಭಗವಾಧ್ವಜ ತೆರವುಗೊಳಿಸಲು ತಾವೇ ಮುಂದಾಗುವುದಾಗಿ ಗಡಾದ ಹೇಳಿದರು.