ಸಿಂದಗಿ: ದನಗಳ ಕಾಲುಬಾಯಿ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ವರ್ಷದಲ್ಲಿ ಎರಡು ಬಾರಿ ಲಸಿಕೆಯನ್ನು ಹಾಕಲಾಗುವುದು. ಸೆ.26ರಿಂದ ಆರಂಭಿಸಿ ಅ.25ರವರೆಗೆ ಉಚಿತ ಲಸಿಕೆ ನೀಡಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಎಂದು ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.
ಪಟ್ಟಣದ ಪಶು ಸಂಗೋಪನಾ ಇಲಾಖೆಯ ಆವರಣದಲ್ಲಿ ಜಿಲ್ಲಾ ಪಂಚಾಯತ, ವಿಜಯಪುರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ನಾಲ್ಕನೆಯ ಸುತ್ತಿನ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪಶುಗಳ ಸಾಕಾಣಿಕೆ ಕಡಿಮೆಯಾಗುತ್ತಿದ್ದು ಇದ್ದ ಪಶುಗಳಿಗೆ ಪಶು ವೈದ್ಯರು ತಮ್ಮ ಮನೆ ಮನೆಗೆ ಲಸಿಕಾಕರಣಕ್ಕೆ ಬಂದಾಗ ರೈತರು ನಿಮ್ಮ ನಿಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆಯನ್ನು ಹಾಕಿಸಬೇಕು ಮತ್ತು ಹೆಚ್ಚು ಜಾನುವಾರು ಉತ್ತೇಜನಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ತಾಲೂಕು ಸಹಾಯಕ ನಿರ್ದೇಶಕ ಡಾ.ರಾಮು ರಾಠೋಡ ಮಾತನಾಡಿ, ರೈತರಿಗಾಗಿ ಸರಕಾರ ಉಚಿತ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ. ಕಾರಣ ತಾಲೂಕಿನ ಎಲ್ಲ ರೈತರು ಮರೆಯದೇ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಿ ರೋಗ ಬಾರದಂತೆ ಜಾನುವಾರುಗಳನ್ನು ಸಂರಕ್ಷಣೆ ಮಾಡಬೇಕು. ಲಸಿಕಾ ಅಭಿಯಾನದ ವೇಳೆ ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಸಹಾಯವಾಣಿ 8277100200 ಅಥವಾ 1962 ಸಹಾಯವಾಣಿಗೆ ಸಂಪರ್ಕಿಸಬಹುದು ಎಂದರು.
ಇದೇ ವೇಳೆ ಪಶು ವೈದ್ಯಾಧಿಕಾರಿ ಡಾ. ಮಾರುತಿ ತಡ್ಲಗಿ ಸೇರಿದಂತೆ ಪಶು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.