ಬೀದರ – ಯುವತಿಯೊಂದಿಗಿನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಹೊಸ ಪ್ರಿಯಕರನೊಂದಿಗೆ ಸೇರಿ ಹಳೆ ಪ್ರಿಯಕರನ ಕೊಲೆ ನಡೆಸಿದ ಘಟನೆ ತಾಲೂಕಿನ ಪ್ರೇಮಸಿಂಗ್ ಬಂಜಾರಾ ತಾಂಡಾದಲ್ಲಿ ಜರುಗಿದೆ.
ಅದೆ ತಾಂಡಾದ ನಿವಾಸಿ ಮಾರುತಿ ಖೂಬಾ ಚಿನ್ನಿರಾಥೋಡ್ (21) ಕೊಲೆಯಾದ ಯುವಕ.
ತಾಂಡಾದ ಯುವತಿಯೊಬ್ಬಳ ಜೊತೆ ಈ ಹಿಂದೆ ಪ್ರೇಮಪಾಶದಲ್ಲಿ ಬಿದ್ದಿದ್ದ ಯುವಕ ಮಾರುತಿಗೆ ಕಳೆದ ಕೆಲ ತಿಂಗಳ ಹಿಂದೆ ಮದುವೆಯಾಗಿತ್ತು. ಹೀಗಾಗಿ ಈತನಿಂದ ದೂರವಾದ ಯುವತಿ ಹಿರನಾಗಾಂವ ಗ್ರಾಮದ ಸುಭಾಷ್ ನಾಗೂರೆ ಅನ್ನುವಾತನೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದಳು. ಮದುವೆ ನಂತರ ಕೆಲ ದಿನಗಳ ಕಾಲ ದೂರವಾಗಿದ್ದ ಹಳೆ ಪ್ರೇಮಿ ಮಾರುತಿ ಮತ್ತೆ ಯುವತಿಯೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದ.
ಇದನ್ನು ಕಂಡ ಸುಭಾಷ್ ಹಾಗೂ ಯುವತಿಯ ಕುಟುಂಬದ 5 ಜನ ಸದಸ್ಯರು ಕೂಡಿಕೊಂಡು ಬುಧವಾರ ಸಂಜೆ ಯುವತಿ ಮನೆಗೆ ಆಗಮಿಸಿ ಮಾರುತಿ ಎನ್ನುವಾತ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಯುವಕ ಕೊಲೆ ವಿಷಯ ಗೊತ್ತಾಗುತಿದ್ದಂತೆ ರೊಚ್ಚಿಗೆದ್ದ ತಾಂಡಾದ ಸುಮಾರು 25ರಿಂದ 30ಜನರನ್ನೊಳಗೊಂಡ ಜನರ ಗುಂಪು ಆರೋಪಿಗಳ ಮೇಲೆ ದಾಳಿ ನಡೆಸಿ ಮನ ಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಆರೋಪಿಗಳಾದ ಸುಭಾಷ್, ಸೇವಂತಾಬಾಯಿ ಹಾಗೂ ರೇಖಾ ಎನ್ನುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರೀತಿ ಪ್ರೇಮದ ಜಾಲದಲ್ಲಿ ಸಿಲುಕಿ ಎರಡು ಕಡೆ ಕುಟುಂಬಸ್ಥರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಯ ಸುದ್ದಿ ತಿಳಿದ ಮಂಠಾಳ ಸಿಪಿಐ ರಘುವೀರಸಿಂಗ್ ಠಾಕೂರ, ಪಿಎಸ್ಐ ಬಸಲಿಂಗಪ್ಪ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ನಂತರ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ವರದಿ: ನಂದಕುಮಾರ ಕರಂಜೆ, ಬೀದರ