ಕಪ್ಪು ಬಿಳುಪು ಚಲನಚಿತ್ರರಂಗದ ಅಭಿನಯ ಸಾಮ್ರಾಜ್ಞಿಯಾಗಿದ್ದ ನಟಿ, ‘ ಅಭಿನಯ ಶಾರದೆ ‘ ಬಿರುದಾಂಕಿತ ಜಯಂತಿ ತಮ್ಮ ೭೬ ವಯಸ್ಸಿನಲ್ಲಿ ಇಂದು ನಿಧನರಾಗಿದ್ದಾರೆ.
ಸುಮಾರು ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿಯವರು ರಾತ್ರಿ ಊಟ ಮಾಡಿ ಮಲಗಿದ್ದರಾದರೂ ಬೆಳಿಗ್ಗೆ ಏಳಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಜಯಂತಿಯವರ ಪುತ್ರ ಕೃಷ್ಣಕಾಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
೧೯೬೮ ವೈ ಆರ್ ಸ್ವಾಮಿ ನಿರ್ದೇಶನದ ಜೇನುಗೂಡು ಜಯಂತಿಯವರ ಪ್ರಥಮ ಚಿತ್ರ. ಅದಕ್ಕಿಂತ ಮೊದಲು ಒಂದು ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರಾದರೂ ಪೂರ್ಣ ಪ್ರಮಾಣದ ಚಿತ್ರ ಜೇನುಗೂಡು.
ಜಯಂತಿಯವರ ಅನೇಕ ಚಿತ್ರಗಳು ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಾಗಿವೆ.
ಪರೋಪಕಾರಿ, ಜೇಡರ ಬಲೆ, ಒಣಕೆ ಓಬವ್ವ, ಶ್ರೀನಿವಾಸ ಕಲ್ಯಾಣ,ಬಹದ್ದೂರ ಗಂಡು, ಕಸ್ತೂರಿ ನಿವಾಸ, ಪ್ರತಿಜ್ಞೆ, ಮಂತ್ರಾಲಯ ಮಹಾತ್ಮೆ, ಎಡಕಲ್ಲು ಗುಡ್ಡದ ಮೇಲೆ, ಮುದ್ದು ಮೀನ, ಕೆರಳಿದ ಹೆಣ್ಣು, ಮಮತೆಯ ಬಂಧನ, ದೇವರು ಕೊಟ್ಟ ತಂಗಿ, ಶ್ರೀಮಂತನ ಮಗಳು, ಪುನರ್ಜನ್ಮ, ಬಾಳಬಂಧನ…. ಹೀಗೆ ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯ ಮಾಡಿದ್ದರು.
೧೯೬೫ ರ ಮಿಸ್ ಲೀಲಾವತಿ ಚಿತ್ರಕ್ಕೆ ಜಯಂತಿಯವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಐದು ಸಲ ಇವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ.
ಆಗಿನ ಕಾಲದಲ್ಲಿ ತುಂಬಾ ಬೇಡಿಕೆಯ ನಟಿಯಾಗಿದ್ದ ಕಮಲಾಕುಮಾರಿ, ಜಯಂತಿಯಾಗಿ ಹೆಸರುವಾಸಿಯಾದರು. ಆರು ಭಾಷೆಗಳಲ್ಲಿ ನಟನೆ ಮಾಡಿದ್ದರು.
ಜಯಂತಿಯವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ಧರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟಿ ಉಮಾಶ್ರಿಯವರು ಕಣ್ಣೀರು ಹಾಕಿ, ಜಯಂತಿಯವರಂಥ ನಟಿಯನ್ನು ಕಳೆದುಕೊಂಡ ಚಿತ್ರರಂಗ ನಿಜವಾಗಲೂ ಬಡವಾಗಿದೆ ಎಂದರು. ಹಿರಿಯ ನಟ ದೊಡ್ಡಣ್ಣ, ಮಾಳವಿಕ ಅವಿನಾಶ್ ಅಲ್ಲದೆ ಅನೇಕ ನಟ ನಟಿಯರು ಜಯಂತಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.