ಮೂಡಲಗಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಅಕ್ಷರದಾಸೋಹ ಮತ್ತು ಕ್ಷೀರ ಭಾಗ್ಯ ಯೋಜನೆಗಳು ಬಡಮಕ್ಕಳಿಗೆ ವರದಾನವಾಗಿವೆ ಎಂದು ಗೋಕಾಕ ತಾಲೂಕಾ ಅಕ್ಷರದಾಸೋಹ ಯೋಜನೆ ನಿರ್ದೇಶಕರಾದ ಅಶೋಕ ಮಲಬಣ್ಣವರ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ವಿತರಿಸಿ ಮಾತನಾಡಿ, ಕೋವಿಡ್-19ರ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಅಕ್ಷರದಾಸೋಹ ಇವತ್ತು ಸರಕಾರದ ಆದೇಶದ ಹಿನ್ನೆಲೆಯಲ್ಲಿ 6 ರಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ರಮಗಳೊಂದಿಗೆ ಪ್ರಾರಂಭಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹೆಚ್ಚು ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. ಈ ಬಿಸಿಯೂಟದ ಜೊತೆಗೆ ಪೌಷ್ಠಿಕಾಂಶದ ಮಾತ್ರೆಗಳನ್ನು ಕೂಡ ಕೊಡಲಾಗುತ್ತಿದೆ ಅದರಲ್ಲೂ ತುಕ್ಕಾನಟ್ಟಿಯ ಸರಕಾರಿ ಶಾಲೆ ಅಕ್ಷರದಾಸೋಹವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಕಲ್ಲೋಳಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಿ.ಕೆ.ಉಪ್ಪಾರ ಮಾತನಾಡಿ, ಅಕ್ಷರದಾಸೋಹ ಯೋಜನೆಯಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಾಗುವುದಲ್ಲದೆ ಎಷ್ಟೋ ಬಡಮಕ್ಕಳ ಕುಟುಂಬಗಳ ಹಸಿವನ್ನು ನೀಗಿಸಿ ಕಲಿಕೆಗೆ ಆಸರೆಯಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ ಮಾತನಾಡಿ, ಗುಣಮಟ್ಟದ ಶಿಕ್ಷಣದೊಂದಿಗೆ ಅಕ್ಷಸದಾಸೋಹವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವುದು ಮಕ್ಕಳ ಹೆಚ್ಚಿನ ದಾಖಲಾತಿಗೆ ಕಾರಣವಾಗಿದೆ. ಅಲ್ಲದೆ ಉತ್ತಮ ಗುಣಮಟ್ಟದ ಅಡುಗೆಯನ್ನು ತಯಾರಿಸುವಲ್ಲಿ ಅಕ್ಷರದಾಸೋಹದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾದದ್ದು ಎಂದರು. ಈ ದಿನ 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಸುಮಾರು 300 ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ತುಪ್ಪದಲ್ಲಿ ತಯಾರಿಸಿದ ರವೆಲಾಡುಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಾದೇವ ಗೋಮಾಡಿ, ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಶಂಕರ ಲಮಾಣಿ, ಶೀಲಾ ಕುಲಕರ್ಣಿ, ಕೆ.ಆರ.ಭಜಂತ್ರಿ, ಸಂಗೀತಾ ತಳವಾರ, ಎಮ್.ಕೆ.ಕಮ್ಮಾರ, ಎಮ್.ಡಿ. ಗೋಮಾಡಿ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಪಾಲ್ಗೊಂಡಿದ್ದರು.