spot_img
spot_img

ಜನಮಾನಸದಲ್ಲಿ ಸದಾ ಸ್ಮರಣೀಯ ಸಚಿವ ಮನಗೂಳಿ: ಪಂಡಿತ ಯಂಪೂರೆ

Must Read

- Advertisement -

(28-01-2022ರಂದು ಮಾಜಿ ಸಚಿವರಾದ ದಿವಂಗತ ಶ್ರೀ ಎಮ್.ಸಿ.ಮನಗೂಳಿಯವರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ಲೇಖನ)

ಸಿಂದಗಿ: “ಶಕ್ತಿ ಇದ್ದಾಗ ದುಡಿಯಬೇಕು, ರೊಕ್ಕ ಇದ್ದಾಗ ದಾನ-ಧರ್ಮ ಮಾಡಬೇಕು, ಅಧಿಕಾರ ಇದ್ದಾಗ ಕೆಲಸ ಮಾಡಬೇಕು”. ಎಂದು ಆಗಾಗ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದ ಮಾಜಿ ಸಚಿವ ಆಧುನಿಕ ಭಗೀರಥ, ಸರಳ ಸಜ್ಜನಿಕೆಯ ರಾಜಕಾರಣಿ ದಿವಂಗತ ಎಮ್.ಸಿ. ಮನಗೂಳಿಯವರು ನಮ್ಮನ್ನಗಲಿ ಇಂದಿಗೆ ಒಂದು ವರ್ಷವಾಯಿತು ಆದರೂ ಅವರು ಮಾಡಿದ ಸೇವೆ, ಕೆಲಸ-ಕಾರ್ಯಗಳಿಂದಾಗಿ ಜನಮಾನಸದಲ್ಲಿ ಅವರ ನೆನಪು ಸದಾ ಹಚ್ಚ ಹಸಿರಾಗಿದೆ.

ಆದರ್ಶವಾಗಿ ಬಾಳಿ ಬದುಕಿ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರಯತ್ನಗಳಿಂದ ಶೂನ್ಯದಿಂದ ಶಿಖರಕ್ಕೇರಿದ ಮನಗೂಳಿಯವರ ಜೀವನ ಯುವ ಜನಾಂಗಕ್ಕೆ ಸ್ಪೂರ್ತಿಯಾಗಬಲ್ಲದು. ಕಾಡುವ ಕೆಟ್ಟ ಬಡತನ ಮತ್ತು ದಟ್ಟದಾರಿದ್ರ್ಯಗಳನ್ನು ಮೆಟ್ಟಿನಿಂತು ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದ ಅವರ ಜೀವನವೇ ಒಂದು ಸಂದೇಶವಾಗಿದೆ. ಶ್ರಮ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡ ಅವರ ಮಾನವೀಯ ಅನುಕಂಪ, ಸಾಮಾಜಿಕ ಕಳಕಳಿ, ರೈತಪರ ಕಾಳಜಿ, ಧೈರ್ಯ, ಸಾಹಸ, ಆತ್ಮವಿಶ್ವಾಸ, ಪರಿಶ್ರಮಗಳು, ಗಟ್ಟಿಬಾಳಿನ ದಿಟ್ಟವ್ಯಕ್ತಿತ್ವ ನಮ್ಮೆಲ್ಲರಿಗೆ ಆದರ್ಶ ಮತ್ತು ಅನುಕರಣೀಯ ಹೋರಾಟವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಮನಗೂಳಿಯವರು ಗ್ರಾಮ ಸೇವಕನಿಂದ ಗ್ರಾಮೀಣಾಭಿವೃದ್ಧಿ ಸಚಿವರಾದದ್ದು ಸಾಮಾನ್ಯ ಸಾಧನೆಯೇನಲ್ಲ! ಪಾದರಸದಂತೆ ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದ ಅವರದು ಮೃದುಮಾತು, ತೀಕ್ಷ್ಣಮತಿ, ತ್ವರಿತ ನಿರ್ಧಾರಗಳೇ ಅವರ ಯಶಸ್ಸಿನ ಗುಟ್ಟು.

- Advertisement -

ಮನಗೂಳಿಯವರು ಸಮಾಜ ಸೇವಕರಾಗಿ, ಶಿಕ್ಷಣ ಪ್ರೇಮಿಯಾಗಿ, ಸಹಕಾರಿ ಧುರೀಣರಾಗಿ, ಕ್ರಿಯಾಶೀಲ, ರಾಜಕಾರಣಿಯಾಗಿ ಮಾಡಿದ ಅನುಪಮ ಸೇವೆ ಮತ್ತು ಅವರ ಬಹುಮುಖ ವ್ಯಕ್ತಿತ್ವ ಯುವ ಜನಾಂಗಕ್ಕೆ ಪ್ರೇರಕವಾಗಿದೆ. ಹಲವಾರು ಗುಣಗಳ ಗ(ಧ)ಣಿಯಾಗಿದ್ದ ಮನಗೂಳಿಯವರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ಯ ಪ್ರಸ್ತುತ ಲೇಖನ.

ಒಬ್ಬ ವ್ಯಕ್ತಿ ತನ್ನ ಸ್ವಸಾಮರ್ಥ್ಯದಿಂದ ಏರಬಹುದುದಾದ ಎತ್ತರಕ್ಕೆ ಏರಿಯೂ ತನ್ನ ಸಹಜ ಗುಣಗಳನ್ನು ಉಳಿಸಿಕೊಂಡು ಸರಳವಾಗಿ ಬದುಕಬಹುದೆಂಬಕ್ಕೆ ಎಮ್.ಸಿ.ಮನಗೂಳಿಯವರ ಜೀವನವೇ ನಿದರ್ಶನ. ಹಸಿವು-ಬಡತನ ಮತ್ತು ಅವಮಾನಗಳು ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯವೂ ಕಲಿಸಲಾರದು ಎಂಬಂತೆ ಮನಗೂಳಿಯವರ ಬಡತನವೇ ಅವರನ್ನು ಪ್ರಯತ್ನ ಮತ್ತು ಪರಿಶ್ರಮ ಪಡಲು ಹಚ್ಚಿ ಸಾಧನೆಗೆ ನಾಂದಿಯಾಯಿತು. ಮನಗೂಳಿಯವರು ಬಡತನದಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆದು ಎಸ್.ಎಸ್.ಎಲ್.ಸಿ ಪಾಸಾದರು.

ಬಡತನದ ಕಾರಣಕ್ಕಾಗಿ ಕಾಲೇಜು ಕಲಿಯುವ ಕನಸು ನನಸಾಗಲಿಲ್ಲ. ಉಪ ಜೀವನಕ್ಕಾಗಿ ಸಿಂದಗಿಯ ಕುಲಕರ್ಣಿಯವರ ಬಟ್ಟೆ ಅಂಗಡಿಯಲ್ಲಿ ಗುಮಾಸ್ತನಾಗಿ ಕಾರ್ಯಾರಂಭ ಮಾಡಿದರು. ಮಹತ್ವಾಕಾಂಕ್ಷಿಯಾದ ಮನಗೂಳಿಯವರು ಸಾಧನೆಯ ಮೆಟ್ಟಿಲುಗಳನ್ನು ಸಾವಧಾನವಾಗಿಯೇ ಏರುತ್ತ ಒಬ್ಬ ಮಹಾನ್ ಸಾಧಕರಾದರು. ಗ್ರಾಮ ಸೇವಕ ಹುದ್ದೆಗೆ ಅರ್ಜಿ ಹಾಕಿದ ಮನಗೂಳಿಯವರಿಗೆ ಕೆಲವೇ ದಿನಗಳಲ್ಲಿ ತರಬೇತಿಗೆ ಹಾಜರಾಗುವಂತೆ ಆದೇಶ ಬಂದು ಕೈಸೇರಿತು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿತು.

- Advertisement -

ಇಂಟರ್ನ್ ಶಿಪ್ ತರಬೇತಿ ಪಡೆದು ಕಲಬುರ್ಗಿ ಜಿಲ್ಲೆಯ ಯಾದಗಿರಿ ಬ್ಲಾಕ್‍ಗೆ ಗ್ರಾಮಸೇವಕರಾಗಿ ನೌಕರಿ ಆರಂಭಿಸಿದರು. ಎರಡೇ ವರ್ಷಗಳಲ್ಲಿ ಉತ್ತಮ ಸೇವೆಗೈದು ಜಿಲ್ಲಾ ಅತ್ಯುತ್ತಮ ಗ್ರಾಮಸೇವಕ ಪ್ರಶಸ್ತಿಗೆ ಭಾಜನರಾದರು. ನಂತರ ಯಡ್ರಾಮಿ ಸರ್ಕಲ್‍ಗೆ ಅನಂತರ ವಿಜಯಪುರ ಜಿಲ್ಲೆಯ ಕನ್ನೂರಿನಲ್ಲಿ ಗ್ರಾಮ ಸೇವಕರಾಗಿ ಜನಾನುರಾಗಿಯಾದರು. ಕನ್ನೂರಿನಲ್ಲಿ ಸಲ್ಲಿಸಿದ ಸೇವೆ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಗ್ರಾಮಸೇವಕ ಪ್ರಶಸ್ತಿ ತಂದು ಕೊಟ್ಟಿತು.

ಪ್ರತಿಯೊಬ್ಬ ಪುರುಷ ಸಾಧಕನ ಹಿಂದೆ ಒರ್ವ ಸ್ತ್ರೀ ಇರುತ್ತಾಳೆ ಎಂಬಂತೆ ಮನಗೂಳಿಯವರ ಸಾಧನೆಯ ಹಿಂದಿನ ಶಕ್ತಿ ಅವರ ಧರ್ಮ ಪತ್ನಿ ಶ್ರೀಮತಿ ಸಿದ್ದಮ್ಮಗೌಡ್ತಿಯೆಂದರೆ ತಪ್ಪಾಗಲಾರದು. ಧಾರ್ಮಿಕ ಮನೋಭಾವದ ಸಿದ್ದಮ್ಮಗೌಡ್ತಿ ಸದಾಭಕ್ತಿಯಿಂದ ಪೂಜೆ ಪುನಸ್ಕಾರಗಳಲ್ಲೇ ತಮ್ಮನ್ನು ತೊಡಗಿಸಿಕೊಂಡು ಪತಿಗೆ ಯಾವುದೇ ತೊಂದರೆಯಾಗದಂತೆ ಸದಾ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದರು. ಬಡತನವಿದ್ದಾಗ ಕುಗ್ಗದೇ ಸಿರಿತನ ಬಂದಾಗ ಹಿಗ್ಗದೇ ಸದಾ ಶಿವಧ್ಯಾನದಲ್ಲಿರುತ್ತಿದ್ದರು. ಮನಗೂಳಿಯವರದು ನಾಲ್ಕು ಜನ ಗಂಡು ಮಕ್ಕಳು ಒರ್ವ ಹೆಣ್ಣು ಮಗಳನ್ನು ಹೊಂದಿದ ಸಂತೃಪ್ತ ಕುಟುಂಬ. ಅವರು ನೌಕರಿಯೊಂದಿಗೆ ವ್ಯಾಪಾರೊದ್ಯೋಗ ಮಾಡಿ ರೈತರ ಅಭಿವೃದ್ಧಿಗೆ ಶ್ರಮಿಸಿದರು.

ಸಿಂದಗಿ ತಾಲೂಕಿನ ಕನ್ನೊಳ್ಳಿ ಮತ್ತು ಚಾಂದಕವಠೆ ಗ್ರಾಮಗಳಲ್ಲಿಯೂ ಗ್ರಾಮ ಸೇವಕರಾಗಿ ಜನಮನ್ನಣೆಗಳಿಸಿದರು. ವ್ಯಾಪಾರ ಮತ್ತು ನೌಕರಿಗಳಿಂದಾಗಿ ಮನಗೂಳಿಯವರು ಆರ್ಥಿಕವಾಗಿ ಸಬಲರಾದರು. ಸಿಂದಗಿಯಲ್ಲಿ ಆನಂದ ಚಿತ್ರಮಂದಿರ ಮತ್ತು ವಿನಾಯಕ ಚಿತ್ರಮಂದಿರಗಳನ್ನು ನಿರ್ಮಿಸಿ ಜನಪ್ರಿಯರಾದರು. ಮಾಜಿ ಸಂಸದರಾದ ದಿವಂಗತ ಬಿ.ಕೆ. ಗುಡಿದಿನ್ನಿಯವರ ಪರಮ ಶಿಷ್ಯರಾದ ಮನಗೂಳಿಯವರು ಅವರ ಸಲಹೆಮೇರೆಗೆ ಗಾಂಧಿ ಜಯಂತಿಯಂದು ತಮ್ಮ ನೌಕರಿಗೆ ರಾಜೀನಾಮೆ ನೀಡಿ ಪೂರ್ಣಾವಧಿ ಜನಸೇವಕರಾದರು.

ಶಿಕ್ಷಣದಿಂದ ಮಾತ್ರ ಗ್ರಾಮೀಣ ಜನರು ಉದ್ಧಾರವಾಗಲು ಸಾಧ್ಯವೆಂದು ಭಾವಿಸಿದ್ದ ಮನಗೂಳಿಯವರು ಕನ್ನೊಳ್ಳಿ, ಬಗಲೂರ, ಜಾಲವಾದ, ಕೋರವಾರ, ಕೊರಳ್ಳಿ, ನಾಗಾವಿ, ಗಬಸಾವಳಗಿಯಲ್ಲಿ ಪ್ರೌಢಶಾಲೆಗಳನ್ನು ಆರಂಭಿಸಿ ಅಲ್ಲಿನ ಶೈಕ್ಷಣಿಕ ಅವಶ್ಯಕತೆಯನ್ನು ಪೂರೈಸಿದರು. 1976ರಲ್ಲಿ ಸಿಂದಗಿಯ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ನಿರ್ದೇಶಕರಾದರು. ನಂತರ ಅದೇ ಸಂಸ್ಥೆಯ ಚೇರಮನ್ನರಾಗಿ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯನ್ನು ಹೆಮ್ಮರವಾಗಿ ಬೆಳೆಸಿದ ಅವರು ಒಬ್ಬ ಶಿಕ್ಷಣ ಪ್ರೇಮಿ ಎಂದರೆ ತಪ್ಪಾಗಲಾರದು. ಅವರ ಅವಿಶ್ರಾಂತ ದುಡಿಮೆಯಿಂದಾಗಿ ಇಂದು ಸಂಸ್ಥೆಯು ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಹೆಮ್ಮರವಾಗಿ ಬೆಳೆದಿದೆ. ಸಾವಿರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿ ತಮ್ಮ ಬಾಳನ್ನು ಉಜ್ವಲಗೊಳಿಸಿಕೊಳ್ಳುತ್ತಿದ್ದಾರೆ ಹಾಗೆಯೇ ನೂರಾರು ಜನ ವಿದ್ಯಾವಂತರಿಗೆ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು ಲಭ್ಯವಾಗಿ ಅವರ ಕುಟುಂಬಗಳು ಸಂತೃಪ್ತ ಬಾಳನ್ನು ನಡೆಸುತ್ತಿವೆ.

ಪಿ.ಎಲ್.ಡಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧಿಸಿ ಅದರ ಅಧ್ಯಕ್ಷರಾಗುವುದರ ಮೂಲಕ ಮನಗೂಳಿಯವರ ರಾಜಕೀಯ ಹೆಜ್ಜೆ ಆರಂಭವಾಯಿತು. ಸಣ್ಣ ಗುರಿ ಅಪರಾಧ ಎಂಬಂತೆ ಮನಗೂಳಿಯವರದು ಸದಾ ದೊಡ್ಡ ಗುರಿ.

ಮಹತ್ವಕಾಂಕ್ಷಿಯಾಗಿದ್ದ ಅವರ ಚಿತ್ತ ವಿಧಾನಸೌಧದತ್ತ ಇತ್ತು. ಅವರು ತಮ್ಮ ಆ ಕನಸನ್ನು ನಿರಂತರ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ನನಸಾಗಿಸಿಕೊಂಡರು. 1989ರಲ್ಲಿ ವಿಧಾನಸಭೆಯ ಚುನಾವಣೆಗೆ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸಿ ಸೋತರು.

ಸೋಲು ಗೆಲುವಿನ ಸೋಪಾನ ಎಂದು ತಿಳಿದ ಅವರು 1994ರಲ್ಲಿ ಪುನಃ ವಿಧಾನಸಭೆಗೆ ಸ್ಪರ್ಧಿಸಿ ಪ್ರಚಂಡ ಬಹುಮತದೊಂದಿಗೆ ಗೆದ್ದು ಮೊದಲ ಬಾರಿಗೆ ಶಾಸಕರಾದರು. ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದದಂತೆ ಶಾಸಕರಾಗಿ ಸಿಂದಗಿ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಿ ಕೆರೆ ನಿರ್ಮಾಣ ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳ ಅನುಷ್ಠಾನಗೊಳ್ಳುವವರೆಗೆ ಬರಿಗಾಲಿನಿಂದ ನಡೆದು ಬರದ ನಾಡಿಗೆ ನೀರು ಹರಿಸಿ ಆಧುನಿಕ ಭಗೀರಥರೆಂಬ ಅಭಿದಾನಕ್ಕೆ ಪಾತ್ರರಾದರು. ಶಾಸಕ ಮನಗೂಳಿಯವರ ಕ್ರಿಯಾಶೀಲ ವ್ಯಕ್ತಿತ್ವ ಜನಪರ ರೈತಪರ ಕಾಳಜಿಯ ಫಲವಾಗಿ ಅವರಿಗೆ ಸಚಿವ ಸ್ಥಾನ ಒಲಿದು ಬಂದಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ ಸಚಿವರಾಗಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. 1999 ರಿಂದ 2018ರವರೆಗೆ ಮನಗೂಳಿಯವರು ರಾಜಕೀಯ ಅಜ್ಞಾತವಾಸ ಅನುಭವಿಸಿದರು. ಆದರೂ ನಿರಾಸೆಗೊಳ್ಳದ ಅವರು ಜನಸೇವೆಯೇ ಜನಾರ್ಧನ ಸೇವೆಯೆಂದು ತಿಳಿದು ಸದಾ ಜನಸೇವೆಯಲ್ಲಿ ತೊಡಗಿದರು.

2018ರಲ್ಲಿ ವಿಧಾನಸಭಾ ಚುನವಾಣೆಗೆ ಜೆ.ಡಿ.ಎಸ್ ಪಕ್ಷದಿಂದ ಸ್ಪರ್ಧಿಸಿ “ಇದು ನನ್ನ ಕೊನೆಯ ಚುನಾವಣೆ, ಮನಗೂಳಿ ಬಿದ್ದ ಸತ್ತ ಅನಿಸಬ್ಯಾಡರಿ. ಗೆದ್ದ ಸತ್ತ ಅಂತ ಅನಸಿರಿ. ಸತ್ತ ಮ್ಯಾಲ ಹಾರ ಹಾಕುವುದಕ್ಕಿಂತ ಗೆಲ್ಲಿಸಿ ಹಾರ ಹಾಕರಿ” ಎಂದು ಮತದಾರ ಪ್ರಭುವಿನಲ್ಲಿ ವಿನಂತಿಸಿದಾಗ ಸಿಂದಗಿಯ ಮತಕ್ಷೇತ್ರದ ಮತದಾರರು ಜಾತ್ಯತೀತವಾಗಿ ಬೆಂಬಲಿಸಿ ಮತ್ತೊಮ್ಮೆ ಶಾಸಕರನ್ನಾಗಿಸಿದರು. ಶಾಸಕರಾದ ಮನಗೂಳಿಯವರು ಸಮ್ಮಿಶ್ರ ಸರಕಾರದಲ್ಲಿ ಎರಡನೇ ಬಾರಿಗೆ ತೋಟಗಾರಿಕಾ ಸಚಿವರಾದರು. ಹಾಗೆಯೇ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿದರು. ಸಚಿವರಾಗಿ ಆಲಮೇಲನ್ನು ತಾಲೂಕಾ ಕೇಂದ್ರವಾಗಿಸಿದರು. ಆಲಮೇಲಕ್ಕೆ ತೋಟಗಾರಿಕಾ ಕಾಲೇಜನ್ನು ಮಂಜೂರು ಮಾಡಿಸಿದರು. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸಿದರು. ಸಿಂದಗಿ ಪಟ್ಟಣದ ಒಳಚರಂಡಿ ಕಾಮಗಾರಿಗಾಗಿ ರೂ. 98 ಕೋಟಿ ಹಣ ಬಿಡುಗಡೆಗೊಳಿಸಿದರು. ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ರೂ. 9.10 ಕೋಟಿ ಹಣ ಬಿಡುಗಡೆ ಮಾಡಿಸಿದರು. ಸಿಂದಗಿ ಪಟ್ಟಣದ ಪ್ರತಿ ವಾರ್ಡಿಗೆ ಒಂದು ಕೋಟಿ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಪಡಿಸಿದರು. ರಸ್ತೆಗಳ ಅಗಲೀಕರಣ ಮತ್ತು ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿದರು. ಕಡಣಿ ಬ್ಯಾರೇಜ ನಿರ್ಮಿಸಿದರು. ಇನ್ನು ಅನೇಕ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ ಮನಗೂಳಿಯವರು ಅಕಾಲಿಕವಾಗಿ ನಮ್ಮನ್ನು ಅಗಲಿದರೂ ಸಹ ಅವರ ಅಭಿವೃದ್ಧಿ ಕೆಲಸಗಳ ಮೂಲಕ ಸದಾ ನೆನಪಿನಲ್ಲಿದ್ದಾರೆ.

ಜಾತ್ಯತೀತ ಮನೋಭಾವ ಹೊಂದಿದ ಮನಗೂಳಿಯವರು ಜಾತಿಗಿಂತ ನೀತಿಯೇ ಮುಖ್ಯ ಎನ್ನುತ್ತಿದ್ದರು. ಅವರು ಎಲ್ಲ ಜನರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯ ಭಾವನೆ ಹೊಂದಿದ್ದರು. ಧಾರ್ಮಿಕ ಸೇವಾ ಮನೋಭಾವ ಹೊಂದಿದ್ದ ಅವರು ಪೂಜ್ಯಶ್ರೀ ಕಾಶಿ ಜಗದ್ಗುರುಗಳ ನೇತೃತ್ವದಲ್ಲಿ ತಮ್ಮ ಸ್ವಂತ ಖರ್ಚಿನಿಂದ 21 ಜೋಡಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿ ಜನಮೆಚ್ಚುಗೆ ಪಡೆದರು. ಮನಗೂಳಿಯವರು ಜೆ.ಡಿ.ಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರೊಬ್ಬ ಚತುರ ಮುತ್ಸದ್ಧಿ ರಾಜಕಾರಣಿ. ರಾಜಕೀಯವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದ ಅವರು ರಾಜಕೀಯ ಏಳುಬೀಳುಗಳಲ್ಲಿ ಎದ್ದು ಬಿದ್ದು ಗೆದ್ದು ಎಲ್ಲ ವರಸೆಗಳನ್ನು ಕರತಲಾಮಲಕ ಮಾಡಿಕೊಂಡವರು ಶಾಸಕರಾಗಿ, ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದವರು.

ಮನಗೂಳಿಯವರದು ಆಕರ್ಷಕ ವ್ಯಕ್ತಿತ್ವ. ಹಸನ್ಮುಖಿ ಸದಾ ಸುಖಿ ಎಂಬಂತೆ ಅವರು ನಗುನಗುತ್ತಲೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತಿದ್ದರು. ಗ್ರಾಮೀಣ ಸೊಗಡು ದೇಸಿಯ ಸಂಸ್ಕೃತಿಯ ಪ್ರತೀಕ ಅವರ ವ್ಯಕ್ತಿತ್ವ. ಧಣಿಯವರೆಯದ ದುಡಿಮೆಗಾರ, ಜನಪರ ಕಾಳಜಿಯ ನಾಯಕ, ಬರದ ನಾಡಿನ ಭಗೀರಥ, ಛಲದಂಕ ಮಲ್ಲ, ರೈತ ಮಿತ್ರ. ಹುಟ್ಟು ಹೋರಾಟಗಾರ, ಬಹುಮುಖ ವ್ಯಕ್ತಿತ್ವದ ಸರಳ ಸಜ್ಜನಿಕೆಯ ರಾಜಕಾರಣಿ ದಿವಂಗತ ಎಮ್.ಸಿ. ಮನಗೂಳಿಯವರು ಇಂದಿಗೆ ನಮ್ಮನ್ನಗಲಿ ಒಂದು ವರ್ಷವಾಯಿತು. ಇಂದು ಅವರ ಪ್ರಥಮ ಪುಣ್ಯಸ್ಮರಣೆಯನ್ನು ಆಚರಿಸುತ್ತಿದ್ದೇವೆ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ ಸಿಂದಗಿ ಮತಕ್ಷೇತ್ರಕ್ಕೆ ಅವರು ಮಾಡಿದ ಜನಪರ ಸೇವಾಕಾರ್ಯಗಳ ಮೂಲಕ ಜನಮಾನಸದಲ್ಲಿ ಅವರ ನೆನಪು ಸದಾ ಹಚ್ಚಹಸಿರಾಗಿದೆ. ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ಅವರು ಅನನ್ಯ ಕೊಡುಗೆ ನೀಡಿದ್ದಾರೆ. ಅವರೊಬ್ಬ ನಾಡು ಕಂಡ ಅಪರೂಪದ ರಾಜಕಾರಣಿ. ಸಿಂದಗಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದ ಕನಸುಗಾರ ಮನಗೂಳಿಯವರ ಅಕಾಲಿಕ ಅಗಲಿಕೆಯಿಂದಾಗಿ ಸಿಂದಗಿ ಮತಕ್ಷೇತ್ರ ಮತಬಾಂಧವರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ಮುಂದಿನ ಜನ್ಮದಲ್ಲಿ “ನಾನು ಸಿಂದಗಿಯ ನೆಲದಲ್ಲಿಯೇ ರೈತ ಮಗನಾಗಿ ಹುಟ್ಟಿ ರೈತರ ಸೇವೆಗೈಯುತ್ತೇನೆಂದು” ಅವರು ತಮ್ಮ ಆಪ್ತರಲ್ಲಿ ಆಗಾಗ ಹೇಳಿಕೊಳ್ಳುತ್ತಿದ್ದರು. ಅವರ ಇಚ್ಛೆ ಭಗವಂತ ಬೇಗ ಪೂರೈಸಲಿ ಎಂಬುದು ಕ್ಷೇತ್ರದ ಜನತೆ ಸದಾಶಯ.

- Advertisement -
- Advertisement -

Latest News

ಗ್ಯಾರಂಟಿಗಳಿಂದ ಕಾಂಗ್ರೆಸ್ ಜನರ ದಾರಿ ತಪ್ಪಿಸಿದೆ – ವಿಜುಗೌಡ ಪಾಟೀಲ

ಸಿಂದಗಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರೆಂಟಿಗಳನ್ನು ಕೊಟ್ಟು ಜನರ ದಾರಿ ತಪ್ಪಿಸಿದೆ. ಈ ಗ್ಯಾರೆಂಟಿಗಳಿಂದ ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕುಂಠಿತ ವಾಗಿದೆ ಅಲ್ಲದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group