ಸಿಂದಗಿ; ಡಾ. ಅಂಬೇಡ್ಕರರು ನಿತ್ಯ ಹೋರಾಟದ ಮೂಲಕ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಇಂತವರ ಹೆಸರು ಬಹುರಾಷ್ಟ್ರಗಳಲ್ಲಿ ಪ್ರಸಾರಮಾಡುವಲ್ಲಿ ಭಾರತದಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸ ಶಶಿಧರ ಅವಟಿ ಹೇಳಿದರು.
ಪಟ್ಟಣದ ಡಾ ಅಂಬೇಡ್ಕರ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್. ಅಂಬೇಡ್ಕರರ ೧೩೪ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ದೇಶದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಹಕ್ಕನ್ನು ಕೊಟ್ಟು ಎಲ್ಲ ಭಾರತೀಯರಿಗೆ ಮತದಾನ ಹಕ್ಕನ್ನು ಒದಗಿಸಿಕೊಟ್ಟವರು ೩೫ ಕೋಟಿ ಜನರಲ್ಲಿ ಡಾ ಅಂಬೇಡ್ಕರರು ಅಗ್ರಗಣ್ಯರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಶಿಕ್ಷಣ ಕ್ರಾಂತಿಯನ್ನು ಹೊತ್ತಿಸಲು ಸಾಧನೆ ಮಾಡಬೇಕೆನ್ನುವ ಛಲತೊಟ್ಟವರು ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರವರ ಜಯಂತಿಯನ್ನು ಪಕ್ಷಾತೀತವಾಗಿ ಎಲ್ಲರು ಆಚರಣೆ ಮಾಡಿದ್ದು ಸ್ವಾಗತಾರ್ಹ. ಅಂದಿನ ವರ್ತಮಾನದಲ್ಲಿ ವಿದ್ಯುತ್ ಇಲ್ಲದ ೧೭ಸಾವಿರ ಹಳ್ಳಿಗಳಿಗೆ ಬೆಳಕನ್ನು ಕೊಟ್ಟು ಕುಡಿಯುವ ನೀರಿನ ಹಾಹಾಕಾರವನ್ನು ತಪ್ಪಿಸಲು ಕಾನೂನು ಮೂಲಕ ಹೋರಾಟ ನಡೆಸಿದಂತವರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳನ್ನು ಹೇಗೆ ನಡೆಸಬೇಕೆನ್ನುವ ಪರಿಕಲ್ಪನೆ ಕೊಟ್ಟವರು ಇಂತಹ ಮಹಾನ ವ್ಯಕ್ತಿಯ ಪಟ್ಟಣದಲ್ಲಿರುವ ಅಂಬೇಡ್ಕರ ಭವನದ ನವೀಕರಣಕ್ಕೆ ರೂ ೨ ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅಲ್ಲದೆ ಸ್ಥಾಪನೆಗೊಳ್ಳುತ್ತಿರುವ ಬುದ್ಧ ವಿಹಾರಕ್ಕೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಪಂ ಕಾರ್ಯನಿರ್ವಾಹಕ ಅದಿಕಾರಿ ರಾಮು ಅಗ್ನಿ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ಸಿಪಿಐ ನಾನಾಗೌಡ ಪೊಲೀಸಪಾಟೀಲ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ವೇದಿಕೆ ಮೇಲಿದ್ದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರು ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಸಮಾಜ ಕಲ್ಯಾಣ ಸಹಾಯಕ ಅಧಿಕಾರಿ ಆರ್.ಎಸ್.ಬನ್ನೆಟ್ಟಿ ಸ್ವಾಗತಿಸಿದರು. ರಾಗರಂಜನಿ ಮೇಲ್ಲೋಡಿಸ್ನ ಡಾ.ಪ್ರಕಾಶ ಕ್ರಾಂತಿಗೀತೆ ಹಾಡಿದರು. ಶಿಕ್ಷಕ ಬಸವರಾಜ ಸೋಂಪುರ ನಿರೂಪಿಸಿದರು. ಶಿಕ್ಷಣ ಸಂಯೋಜಕ ಡಿ.ಎಂ.ಮಾವೂರ ವಂದಿಸಿದರು.