ಹೌದು, “ನನ್ನ ಲೋಕದರ್ಶನ” ಎಂದೆ. ಇದರ ಮಾಲಕ ನಾನಲ್ಲ. ಆದರೆ ಈ ಪತ್ರಿಕೆ ನನ್ನ ಬದುಕಿನ ಒಂದು ಅವಿಭಾಜ್ಯ ಅಂಗ. ಅದು ಯಾವತ್ತಿದ್ದರೂ ನನ್ನದೇ. ಸುಮಾರು ನಾಲ್ವತ್ತು ವರ್ಷಗಳ ನಂಟು. ವಯಸ್ಸಿನ ಲೆಕ್ಕದಲ್ಲಿ ನಿವೃತ್ತನಾದರೂ ಲೋಕದರ್ಶನದ ಕೆಲಸದಿಂದ ನಿವೃತ್ತನಾಗಿಲ್ಲ. ಕಳೆದ ನಲ್ವತ್ತು ವರ್ಷಗಳಿಂದಲೂ ಈ ಪತ್ರಿಕೆಗೆ ಸಂಪಾದಕೀಯ ಬರೆಯುತ್ತಲಿದ್ದೇನೆ. ( ಆ ಸಂಖ್ಯೆ ಹತ್ತು ಹನ್ನೆರಡು ಸಾವಿರದಷ್ಟಾಗಿರಬಹುದು)
ಬೆಳಗಾವಿಗೆ ಬಂದ ನಂತರವೇ ನನ್ನ ಅನಿಶ್ಚಿತ ಅಲೆಮಾರಿ ಬದುಕಿಗೆ ಸ್ಥಿರತೆ ಬಂದಿದ್ದು. ಲೋಕದರ್ಶನ ದಿನಪತ್ರಿಕೆ ಸೇರಿದ ನಂತರ ನಾನು ಅದರೊಡನೆ ಒಂದಾಗಿಹೋದೆ. ಅಲ್ಲಿ ನನಗೆ ಅಷ್ಟೇ ಸ್ವಾತಂತ್ರ್ಯವೂ ಇತ್ತು. ದೈನಂದಿನ ಸುದ್ದಿಗಳ ಹೊರತಾಗಿ ರವಿವಾರದ ಸಾಪ್ತಾಹಿಕ ಪುರವಣಿ , ದೀಪಾವಳಿ ವಿಶೇಷಾಂಕ, ಸಿನಿಮಾ ಪುಟ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೆ. ಆಗೆಲ್ಲ ಪಿಟಿಐ, ಯುಎನ್ ಐ ಟೆಲೆಪ್ರಿಂಟರ್ ಇಂಗ್ಲಿಷ್ ಸುದ್ದಿಗಳನ್ನು ಅನುವಾದಿಸಿ ಕೊಡಬೇಕಿತ್ತು. ಈಗಿನವರಿಗೆ ಆ ತೊಂದರೆ ಇಲ್ಲ.
ಅಂದು ನಾವು ಕೇವಲ ಸಂಬಳಕ್ಕಾಗಿ ದುಡಿಯುವ ನೌಕರರೆಂದುಕೊಂಡಿರಲಿಲ್ಲ. ಪತ್ರಿಕಾ ಕೆಲಸವೆಂದರೆ ಬಹಳ ಪ್ರೀತಿಯಿಂದ, ನಿಷ್ಠೆಯಿಂದ ಮಾಡುತ್ತಿದ್ದೆವು. ಸಮಯ ನೋಡುವ ಅಭ್ಯಾಸ ಇರಲಿಲ್ಲ. ಆಗ ಸಿಗುತ್ತಿದ್ದ ಸಂಬಳವೂ ರಾಯರ ಶಾಲಿನ ಹಾಗೆ. ಆದರೂ ಕೆಲಸದ ಶ್ರದ್ಧೆ ಹೋಗಲಿಲ್ಲ. ಲೋಕ ದರ್ಶನದಲ್ಲಿ ನನಗೆ ದೊರಕಿದ ಸ್ವಾತಂತ್ರ್ಯದ ಪ್ರಯೋಜನವನ್ನು ನಾನು ಕೇವಲ ನನ್ನ ವೈಯಕ್ತಿಕ ಲಾಭಕ್ಕಾಗಿ ಬಳಸಲಿಲ್ಲ. ಬೆಳಗಾವಿ ಜಿಲ್ಲೆಯ ಬರಹಗಾರರಿಗೆ ನಮ್ಮ ಪತ್ರಿಕೆ ಒಂದು ವೇದಿಕೆಯಾಗುವಂತೆ ಮಾಡಿದೆ.
ನಮ್ಮ ರವಿವಾರ ಪುರವಣಿ ಬಹಳ ಪ್ರಸಿದ್ಧಿ ಪಡೆದಿತ್ತು. ರಾಜ್ಯ ಮಟ್ಟದ ಪತ್ರಿಕೆಗಳಿಗೇನೂ ಕಡಿಮೆಯಿರಲಿಲ್ಲ. ಅನೇಕ ಹೊಸ ಬರಹಗಾರರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದೆ. ದೀಪಾವಳಿ ವಿಶೇಷಾಂಕಕ್ಕೆ ನಾಡಿನ ಪ್ರಸಿದ್ಧ ಸಾಹಿತಿಗಳ ಬರೆಹ ತರಿಸಿಕೊಂಡು ಉತ್ತಮ ಗುಣಮಟ್ಟದಲ್ಲಿ ಹೊರತರಲಾಗುತ್ತಿತ್ತು. ಲೇಖನಗಳಿಗೆ ಅಲ್ಪ ಗೌರವಧನವನ್ನೂ ನೀಡಲಾಗುತ್ತಿತ್ತು.
ಲೋಕದರ್ಶನದಲ್ಲಿ ಅಂದು ನನ್ನೊಡನೆ ಕೆಲಸ ಕಿರಿಯ ಪತ್ರಕರ್ತರು ಇಂದು ರಾಜ್ಯದ ಬೇರೆ ಬೇರೆ ದೊಡ್ಡ ದಿನಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. . ಹಲವರು ನನ್ನನ್ನು ತಮ್ಮ ಗುರುವೆಂದೇ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅದು ನನಗೆ ಹೆಮ್ಮೆಯ ವಿಷಯ.
ಪತ್ರಿಕೆಯ ಸಂಸ್ಥಾಪಕರಾದ ಎಂ. ಬಿ. ದೇಸಾಯಿಯವರೂ ಅವರ ಪುತ್ರ ಈಗಿನ ಸಂಪಾದಕ ಶರತ್ ಚಂದ್ರ ದೇಸಾಯಿಯವರೂ ನನ್ನನ್ನು ಒಬ್ಬ ಕೆಲಸಗಾರನಂತೆ ನೋಡಲಿಲ್ಲ. ತಮ್ಮವನೆಂಬಂತೆ ಪ್ರೀತಿಯಿಂದ ನೋಡಿಕೊಂಡರು. ಈಗ ಈ ಪತ್ರಿಕೆ ೬೨ ವರ್ಷ ಮುಗಿಸಿ ೬೩ ನೆಯ ವರ್ಷಕ್ಕೆ ಕಾಲಿಟ್ಟಿದೆ. ಅಕ್ಷಯ ತೃತೀಯೆಯಂದೇ ಜನಿಸಿದ ದಿನಪತ್ರಿಕೆ ಮೊದಲು ಆರು ವರ್ಷ ದರ್ಶನ ಎಂದು ವಾರಪತ್ರಿಕೆಯಾಗಿತ್ತು.
ಬೆಳಗಾವಿಯ ಗಡಿಭಾಷಾ ವಿವಾದ ಬಿಸಿಯಲ್ಲಿ ಬಹಳ ಕಷ್ಟಪಟ್ಟು ಪತ್ರಿಕೆಯನ್ನು ಉಳಿಸಿ ಬೆಳೆಸಿಕೊಂಡು ಬರಲಾಗಿದೆ. ದೀರ್ಘಕಾಲ ಮುನ್ನಡೆಯಲಿ ಎಂದು ಹಾರೈಸುತ್ತೇನೆ. ಪತ್ರಿಕೆಗೆ ಹುಟ್ಟುಹಬ್ಬದ ಶುಭಾಶಯಗಳು.
– ಎಲ್. ಎಸ್. ಶಾಸ್ತ್ರಿ