Homeಸುದ್ದಿಗಳುಅನುಪಮ ಸೇವಾರತ್ನ ಪ್ರಶಸ್ತಿ ಪ್ರದಾನ ಮತ್ತು ಸಾಹಿತಿ ನಾಗೇಶ ನಾಯಕ ರವರ ಕೃತಿ ಬಿಡುಗಡೆ

ಅನುಪಮ ಸೇವಾರತ್ನ ಪ್ರಶಸ್ತಿ ಪ್ರದಾನ ಮತ್ತು ಸಾಹಿತಿ ನಾಗೇಶ ನಾಯಕ ರವರ ಕೃತಿ ಬಿಡುಗಡೆ

ಬೆಳಗಾವಿ – ಇದೇ ದಿ. 23ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿಯ ‘ಪೃಥ್ವಿ ಫೌಂಡೇಶನ್’ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಹಿತಿ ನಾಗೇಶ ನಾಯಕ ಅವರು ರಚಿಸಿದ ಕೃತಿ ಬಿಡುಗಡೆ ಸಮಾರಂಭ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ‘ಪೃಥ್ವಿ ಫೌಂಡೇಶನ್ ಬೆಳಗಾವಿ’ಯ ಅಧ್ಯಕ್ಷರಾದ ಡಾ. ಹೇಮಾವತಿ ಸೊನೋಳ್ಳಿ ಮಾತನಾಡಿ, ಪೃಥ್ವಿ ಫೌಂಡೇಶನ್ ತನ್ನ ಸದಸ್ಯರಿಂದಲೇ ದೇಣಿಗೆ ಸಂಗ್ರಹಿಸಿ ವಿವಿಧ ಸಮಾಜಪರ ಕೆಲಸಗಳನ್ನು ಮಾಡುತ್ತಿದೆ. ದಾನಿಗಳಿಂದ ಬಂದ ಹಣವನ್ನು ಸಹ ನಿಸ್ವಾರ್ಥದಿಂದ ಸೇವೆಗಾಗಿಯೇ ಬಳಸುತ್ತಿದೆ ಎಂದರು.

ಫೌಂಡೇಶನ್ ನ ಸಹ ಕಾರ್ಯದರ್ಶಿ ರಶ್ಮಿ ಪಾಟೀಲ ರವರು ಪೃಥ್ವಿ ಫೌಂಡೇಶನ್ ಆರು ವರ್ಷಗಳಲ್ಲಿ ನಡೆದು ಬಂದ ದಾರಿಯನ್ನು ವರದಿಯ ರೂಪದಲ್ಲಿ ವಾಚಿಸಿದರು. ಸಾಹಿತಿ ಇಂದಿರಾ ಮೋಟೆಬೆನ್ನೂರು ಸಾಧಕರನ್ನು ಪರಿಚಯಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ನಾಗೇಶ ನಾಯಕ ಅವರು ಬರೆದ ‘ಆತ್ಮ ಧ್ಯಾನದ ಬುತ್ತಿ ‘ಗಜಲ್ ಗಳ ಸಂಕಲನವನ್ನು ಸಾಹಿತಿ ಡಾ. ಪಿ ಜೆ. ಕೆಂಪನ್ನವರ ಬಿಡುಗಡೆಗೊಳಿಸಿ ಮಾತನಾಡಿ, ಗಜಲ್ಗಳು ಮನಸ್ಸನ್ನು ಮೋಹಿಸುವ ಮತ್ತು ಅರಳಿಸುವ ಸಾಹಿತ್ಯದ ಪ್ರಕಾರವಾಗಿದೆ. ಧ್ಯಾನ ಮಾಡಿದರೆ ಜ್ಞಾನ ತಾನಾಗಿಯೇ ಬೆಳೆಯುತ್ತೆ ಎಂಬ ನೀತಿಯನ್ನು ಹೇಳುವ ಗಜಲ್ಗಳು ನಿಜಕ್ಕೂ ನಮ್ಮ ಜೀವನಕ್ಕೆ ಸಹಕಾರಿಯಾಗಿವೆ ಮತ್ತು ವಿಶೇಷವಾಗಿವೆ ಎಂದರು.

ಕೃತಿ ಪರಿಚಯಿಸುತ್ತ ಮಾತನಾಡಿದ ಸಾಹಿತಿ ಡಾ. ನಿರ್ಮಲಾ ಬಟ್ಟಲ, ನಮ್ಮಲ್ಲಿನ ಆತ್ಮದ ಚಿಂತನೆ ಮಾಡುತ್ತಾ ಧ್ಯಾನದಿಂದ ನಾವು ಪರಿಶುದ್ಧರಾಗೋಣ, ನಾವು ಅಸಹಾಯಕರಿಗೆ ಸಹಾಯ ಮಾಡಿದರೆ ನಾವೇ ದೇವರಾಗಬಹುದು. ಆ ನಿಟ್ಟಿನಲ್ಲಿ ಹಸಿವು, ಮನುಷ್ಯತ್ವ ಮರೆತವರು,ಜಾತೀಯತೆ ದ್ವೇಷ ಕಾರುವವರಿಗೂ ಪ್ರೀತಿ ಬಿತ್ತುವ ತುಡಿತದ ಗಜಲ್ ಗಳು ನಮ್ಮಲ್ಲಿ ಪರಿವರ್ತನೆ ಮಾಡುವ ರೀತಿಯಲ್ಲಿ ಮೂಡಿಬಂದಿವೆ. ಜೀವನೋತ್ಸಾಹ ಹೆಚ್ಚಿಸುವ ಆತ್ಮವನ್ನು ಶುದ್ದಿಸುವ ಗಜಲ್ ಗಳು ಈ ಕೃತಿಯಲ್ಲಿ ಅಡಗಿವೆ ಎಂದು ಪರಿಚಯಿಸಿದರು.

ಕೃತಿ ಬರೆದ ನಾಗೇಶ ನಾಯಕ ಮಾತನಾಡಿ, ಇತ್ತೀಚೆಗೆ ಕೃತಿಗಳು ಬಿಡುಗಡೆಯಾದ ಜಿಲ್ಲೆಯಲ್ಲಿ ಮಾತ್ರ ಪ್ರಚಾರ ಪಡೆಯುತ್ತಿರುವುದರಿಂದ ಕೃತಿಕಾರರ ಪರಿಚಯ ನಾಡಿಗೆ ಆಗುತ್ತಿಲ್ಲ.ಅದಕ್ಕೆ ವಿವಿಧ ಜಿಲ್ಲೆಗಳಲ್ಲಿ ಕೃತಿಯನ್ನು ಬಿಡುಗಡೆ ಮಾಡುತ್ತಿದ್ದೇನೆ. ಅನೇಕರ ಪ್ರೇರಣೆ ನನಗೆ ಕೃತಿಗಳನ್ನು ಬರೆಯಲು ಸಹಕಾರಿಯಾಗಿದೆ ಎಂದರು .

ಇದೇ ಸಂದರ್ಭದಲ್ಲಿ ‘ಪೃಥ್ವಿ ಫೌಂಡೇಶನ್’ ವತಿಯಿಂದ ಸಮಾಜದ ವಿವಿಧ ಸ್ತರಗಳಲ್ಲಿ ಸೇವೆಯನ್ನು ಸಲ್ಲಿಸಿದ ಶಾಂತಾ ಮಸೂತಿ, ಸುಧಾ ಪಾಟೀಲ, ಡಾ. ಶೈಲಜಾ ಕುಲಕರ್ಣಿಯವರಿಗೆ ‘ಅನುಪಮಾ ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಿ ಅವರ ಅನುಪಮ ಸಾಧನೆಯನ್ನು ನೆನೆದು ಗೌರವಿಸಲಾಯಿತು. ಬೆಂಗಳೂರಿನ ‘ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ’ ರವರ ವತಿಯಿಂದ ಉತ್ತರ ಕರ್ನಾಟಕ ಸಂಪರ್ಕ ಪ್ರತಿನಿಧಿಯಾದ ಶಶಿಧರ ಹಿರೇಮಠ ರವರು ಉತ್ತರ ಕರ್ನಾಟಕ ಭಾಗದ ಸಾಧಕಿಯರಾದ ಡಾ. ಹೇಮಾವತಿ ಸೊನೋಳ್ಳಿ, ಶಾಂತಾ ಮಸೂತಿ, ಮತ್ತು ಶಶಿಕಲಾ ಯಲಿಗಾರ ರವರಿಗೆ ‘ಆತ್ಮಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಜಿ ರಾಮಯ್ಯ,ಹಿರಿಯ ಸಾಹಿತಿಗಳಾದ ಹಮೀದಾ ಬೇಗಮ್ ದೇಸಾಯಿ , ಸುರೇಖಾ ಮಾನ್ವಿ, ಜ್ಯೋತಿ ಬದಾಮಿ, ಶೈಲಜಾ ಭಿಂಗೆ, ಜ್ಯೋತಿ ಮಾಳಿ, ಶೋಭಾ ತೆಲಸಂಗ,ಮಹಾನಂದ ಪಾರು ಶೆಟ್ಟಿ,ಜಯಶ್ರೀ ನಿರಾಹಾರಿ, ಶೈಲಜಾ ಹಿರೇಮಠ, ಮಹಾದೇವಿ ಹಿರೇಮಠ, ರಶ್ಮಿ ಪಾಟೀಲ, ಲಲಿತಾ ಪರ್ವತ ರಾವ, ಶ್ರೀರಂಗ ಜೋಶಿ, ಎಂ.ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ, ಮಧುಕರ ಗುಂಡೇನಟ್ಟಿ ಸೇರಿದಂತೆ ಪೃಥ್ವಿ ಫೌಂಡೇಶನ್ ನ ಸರ್ವ ಸದಸ್ಯರು ಮತ್ತು ಸಾಹಿತ್ಯಾಸಕ್ತರು ಹಾಜರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಹೇಮಾ ಬರಬರಿ ಪ್ರಾರ್ಥಿಸಿದರು. ಶೈಲಜಾ ಹಿರೇಮಠ ಸ್ವಾಗತಿಸಿದರು. ಆಶಾ ಯಮಕನಮರಡಿ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಕೊನೆಯಲ್ಲಿ ಭುವನೇಶ್ವರಿ ಪೂಜೇರಿ ವಂದಿಸಿದರು.

RELATED ARTICLES

Most Popular

close
error: Content is protected !!
Join WhatsApp Group