ಮೂಡಲಗಿ: ಜನಗಣತಿಯ ರೀತಿಯಲ್ಲಿಯೇ ಜಾನುವಾರುಗಳ ಗಣತಿಯೊಂದಿಗೆ ಅವುಗಳ ಸಂಪೂರ್ಣ ಮಾಹಿತಿ ನೀಡುವಂತ ಆ್ಯಪ್ವೊಂದನ್ನು ಬೆಳಗಾವಿಯ ಆಡೀಸ್ದವರು ಅಭಿವೃದ್ದಿಪಡಿಸಿದ್ದು ಅದನ್ನು ಅನುಷ್ಠಾನಗೊಳಿಸುವುದಕ್ಕಾಗಿ ಸರ್ಕಾರಕ್ಕೆ ತಾವು ಶಿಫಾರಸು ಮಾಡುವುದಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸ್ಥಳೀಯ ಮಹಾಲಕ್ಷ್ಮಿ ಕೋ ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಜಾನುವಾರುಗಳೇ ಆಸರೆಯಾಗಿರುತ್ತವೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್ ಹೊಂದಿರುತ್ತದೆ. ಜಾನುವಾರು ವಿಮೆ ಆರೋಗ್ಯ, ಯೋಗಕ್ಷೇಮ, ಅವುಗಳ ರಕ್ಷಣೆ, ಕಳುವಾದಲ್ಲಿ ಕಂಡು ಹಿಡಿಯುವ ಬಗೆ, ಅವುಗಳಿಗೆ ಕಾಯಿಲೆಗಳು ಬಾಧಿಸಿದರೆ ಅಂಥ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ ಮೊಬೈಲ್ ನಲ್ಲಿಯೇ ಸರಳವಾಗಿ ನಿಭಾಯಿಸುವಂತೆ ‘ಆಡೀಸ್ ಆ್ಯಪ್’ ಒಳಗೊಂಡಿದೆ. ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದರು.
ಜಾನುವಾರುಗಳ ಕಳ್ಳ ಸಾಗಾಣಿಕೆಯನ್ನು ನಿಯಂತ್ರಿಸಲು ಕೂಡ ಇದರಿಂದ ಅನುಕೂಲವಾಗಲಿದೆ. ಜಾನುವಾರುಗಳಿಗೆ ಲಸಿಕೆ ಹಾಕುವುದು ಸೇರಿದಂತೆ ಅವುಗಳ ಆರೋಗ್ಯ ಚಿಕಿತ್ಸೆ ಬಗ್ಗೆ ಕಾಳಜಿ ಮಾಡುವಲ್ಲಿ ಆ್ಯಪ್ ಉಪಯೋಗವಾಗಲಿದೆ ಎಂದರು.
ಜಾನುವಾರದ ಫೋಟೋ ತೆಗೆದು ಆ್ಯಪ್ದಲ್ಲಿ ಸೇರಿಸಿ, ದನದ ಎಲ್ಲ ವಿವರವನ್ನು ನೀಡಬೇಕು. ಇದರಿಂದ ಗ್ರಾಮ ಪಂಚಾಯ್ತಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಜಾನುವಾರುಗಳ ಸಂಪೂರ್ಣ ಮಾಹಿತಿಯು ಕ್ಷಣಾರ್ಧದಲ್ಲಿ ದೊರೆಯುವಂತಿದೆ ಎಂದರು.
ಕಲ್ಲೋಳಿಯಲ್ಲಿ ನನಗೆ ಸಂಬಂಧಿಸಿದ ಜಾನುವಾರಗಳ ಮಾಹಿತಿಯನ್ನು ಆ್ಯಪ್ದಲ್ಲಿ ಅಳವಡಿಸಿದ್ದು. ಇನ್ನಷ್ಟು ಅದರ ಪ್ರಾತ್ಯಕ್ಷಿಕೆಯನ್ನು ಮಾಡಿ ಅದರ ಸಾಧಕ ಬಾಧಕಗಳನ್ನು ಪರಿಗಣಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಯೋಚನೆ ಇದೆ ಎಂದರು.
ಈ ಆಪ್ವನ್ನು ಬಳಸಿಕೊಂಡು ಸರ್ಕಾರದ ಪಶುಸಂಗೋಪನಾ ಇಲಾಖೆಯ ಸೌಲಭ್ಯ ಸೇರಿದಂತೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಗೆ ಸುಲಭವಾಗುವುದು ಎಂದರು.
ಬೆಳಗಾವಿ ಆಡೀಸ್ನ ಸಂಸ್ಥಾಪಕ ನಿರ್ದೇಶಕ ಸುಜೀತ ಹುಕ್ಕೇರಿಕರ ಆ್ಯಪ್ ಬಗ್ಗೆ ವಿವರಣೆ ನೀಡಿ ರೈತರು ಇದನ್ನು ಉಚಿತವಾಗಿ ಬಳಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಚೂನಪ್ಪ ಪೂಜೇರಿ, ರಾಜೇಂದ್ರ ನಾಯ್ಕ, ಮನ್ನೂರ, ಈರಣ್ಣ ಸಸಾಲಟ್ಟಿ ಮತ್ತಿತರರು ಇದ್ದರು.