ಮುಖ್ಯ ಕಾರ್ಯದರ್ಶಿ, ಚುನಾವಣಾಧಿಕಾರಿಗಳಿಗೆ ಗಡಾದ ದೂರು
ಮೂಡಲಗಿ – ಅರಭಾವಿ ಕ್ಷೇತ್ರದಲ್ಲಿನ ಸರ್ಕಾರಿ ಆಸ್ತಿಗಳ ಮೇಲೆ BLJ ಎಂದು ತಮ್ಮ ಹೆಸರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಬರೆಸುತ್ತಿದ್ದು ಇದನ್ನು ಕಂಡೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆರೋಪಿಸಿದ್ದಾರೆ.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದನ್ನೆಲ್ಲ ನೋಡುತ್ತಿದ್ದರೂ ನಿಷ್ಕ್ರಿಯರಾಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದರು.
ಅರಭಾವಿ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳು, ಜಲಕುಂಭಗಳು, ಬಸ್ ತಂಗುದಾಣ, ಮೂತ್ರಾಲಯಗಳು, ಬಸ್ ನಿಲ್ದಾಣಗಳು, ಸಮುದಾಯ ಭವನಗಳು, ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ಕಟ್ಟಡಗಳ ಮೇಲೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಹೆಸರು BLJ ಎಂದು ಬರೆಯಲಾಗಿದೆ. ಸರ್ಕಾರಿ ಕಟ್ಟಡಗಳ ಮೇಲೆ ಈ ರೀತಿ ಹೆಸರು ಬರೆಸುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಗಡಾದ ಹೇಳಿದರು.
೨೦೦೪ ರಿಂದ ಚುನಾವಣೆಗೆ ನಿಲ್ಲುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಈ ಸಲವೂ ಚುನಾವಣೆಗೆ ಸ್ಪರ್ಧಿಸಲಿದ್ದು ಮತದಾರರ ಮೇಲೆ ಪ್ರಭಾವ ಬೀರಲು ಈ ರೀತಿ ಹೆಸರು ಬರೆಸುತ್ತಿದ್ದಾರೆ ಇದನ್ನೆಲ್ಲ ನೋಡಿಯೂ ಸುಮ್ಮನೆ ಇರುವ ಕ್ಷೇತ್ರದ ಅಧಿಕಾರಿಗಳು ಅವರ ಗುಲಾಮರಂತಾಗಿದ್ದಾರೆ. ಇದು ನಿಲ್ಲಬೇಕು. ಶಾಸಕರ ಈ ಕ್ರಮವನ್ನು ಖಂಡಿಸುವುದಾಗಿ ಹೇಳಿದ ಅವರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾಗಿ ಹೇಳಿದರು.