ಬೀದರ್: ಇಲ್ಲಿಯ ನೌಬಾದ್ನ ವಿಶ್ವಾಸ್ ವಿಶೇಷಚೇತನ ಮಕ್ಕಳ ಶಾಲೆಯ ಮುಖ್ಯಶಿಕ್ಷಕ ಅರವಿಂದ ಸಂಗಪ್ಪ ಶೆಂಬಾಳೆ ಅವರಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 2024ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
ವಿಕಲಚೇತನರ ಕ್ಷೇತ್ರಕ್ಕೆ ನೀಡಿದ ವಿಶೇಷ ಕೊಡುಗೆಗಾಗಿ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.
ನಗರದ ಗುಮ್ಮೆ ಕಾಲೊನಿಯ ನಿವಾಸಿಯಾಗಿರುವ 42 ವರ್ಷದ ಅರವಿಂದ, ಬಿ.ಎ., ಡಿ.ಎಡ್.ಎಸ್.ಇ. (ಎಂ.ಆರ್) ಪದವೀಧರರಾಗಿದ್ದಾರೆ.
15 ವರ್ಷಗಳಿಂದ ಅಕ್ಷರ ದಾಸೋಹ, ಸಾಧನ, ಸಲಕರಣೆ ಕೊಡಿಸುವುದು ಸೇರಿದಂತೆ ವಿಕಲಚೇತನರ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರವಿಂದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಇದ್ದರು.
ಅರವಿಂದ ಶೆಂಬಾಳೆ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದ್ದಕ್ಕೆ ಶ್ರೀ ವೈಷ್ಣೋದೇವಿ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಸೇರಿದಂತೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.