ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಹಾಲಕ್ಕಿಗೌಡರದು ವಿಶಿಷ್ಟ ಪರಂಪರೆ ಆಚಾರ-ವಿಚಾರಗಳಲ್ಲಿ ಬಯಲು ಸೀಮೆಯ ಒಕ್ಕಲಿಗರಿಗಿಂತ ಭಿನ್ನ ಲಕ್ಷಣಗಳನ್ನು ಹೊಂದಿದವರು.ಈ ಒಕ್ಕಲ ಮಕ್ಕಳಿಗೆ ಹೊಲದ ದುಡಿಮೆಯೇ ಜೀವನ. ಇವರ ಜೀವನ ಕ್ರಮವಂತು ಬುಡಕಟ್ಟು ಜನಾಂಗದಂತೆ ಹೋಲುವುದು.
ಮೀನು ಹಿಡಿಯುವುದು, ತರಕಾರಿ ಬೆಳೆದು ವ್ಯಾಪಾರಮಾಡುವುದು, ಭೂರಹಿತರಂತು ಕೃಷಿ ಕಾರ್ಮಿಕರಾಗಿ, ಜೀತದಾಳಾಗಿ ದುಡಿಯುವರು. ಮನೆ ಯಜಮಾನಿಕೆಯಂತು ಗೌಡತಿಯರದೇ.
ಇಂತಹ ಒಕ್ಕಲಿಗ ಸ್ವಾದಿಮಣಿಯರಾಗಿ ಲೋಕವಿಖ್ಯಾತಿಗಳಿಸಿದ, ಪದ್ಮಪ್ರಶಸ್ತಿ ಪಡೆದ ಇಬ್ಬರೂ ಹಿರಿಯಜ್ಜಿಯರು ಸುಖ್ರಿ ಬೊಮ್ಮಗೌಡ, ತುಳಸಿಗೌಡ. ಇವರನ್ನು ಜನಾಂಗದ ಅಶ್ವಿನಿ ದೇವತೆಯರು ಎನ್ನಬಹುದು.
ಮೇಲಿನ ವೇಷಭೂಷಣಗಳಿಂದ ಅವರ ಯಾರೆಂದು ಗುರುತಿಸಲು ಶಕ್ಯ. ಈ ಭಿನ್ನ ಸಂಪ್ರದಾಯಸ್ಥ ಜನ ತೀರ ಮುಗ್ಧರು. ಇವರ ಕೇರಿಗಳಂತೂ ಕುಡಿತ, ಜೂಜು, ಕಳವು ಅನೈತಿಕ ವ್ಯವಹಾರಗಳಿಂದ ಮುಕ್ತವೆಂದರೆ ಯಾರೂ ನಂಬರು. ಎಲ್ಲಾ ಹಬ್ಬಗಳಿಗಿಂತಲೂ ಅವರಿಗೆ ಸುಗ್ಗಿ ಹಬ್ಬ ವೈಭವದ್ದು. 3 ತಿಂಗಳ ಮೊದಲೇ ಹಬ್ಬಕ್ಕೆ ಸಿದ್ಧತೆ ನಡೆಸುವರು.
ಕೊಡಗಿನ ಹುತ್ತರಿ ಹಬ್ಬದಂತೆ ಇದು ಕೂಡ.ತುರಾಯಿ ಧರಿಸಿದ ಗೌಡರು ‘ಗುಮಟೆ’ (ಇದೊಂದು ತಮಟೆ ರೀತಿಯ ವಾದ್ಯ) ಬಾರಿಸಿಕೊಂಡು ಹಾಡುತ್ತಾ, ಕೋಲಾಟ ಆಡುವುದು ನೋಡುಗರಿಗೆ ಚಂದ ಎನಿಸುವುದು. ಹಾಲಕ್ಕಿ ಗೌಡರ ಜೀವನದಲ್ಲಿ ಜಾನಪದ ಗೀತೆಗಳು ಒಂದಾಗಿಬಿಟ್ಟಿವೆ.
ಆಧುನಿಕತೆಯ ಬೆನ್ನು ಹತ್ತಿ ಹಣ ಸಂಪಾದನೆಯೇ ಪರಮ ಗುರಿಯೆಂದು ತಿಳಿದು ಅಸಂತುಷ್ಟರಾಗಿ ಬಾಳುವ ನಾವು ಅಂದರೆ ಇತರೇ ಒಕ್ಕಲಿಗ ಜನಾಂಗದವರು ಇದ್ದುದರಲ್ಲಿಯೇ ಸಂತೃಪ್ತಿ ಪಡೆದು,ಸಂಪ್ರದಾಯಬದ್ದ ಸುಖದ ಸಹ ಬಾಳ್ವೆ ನಡೆಸಲು ಇವರಿಂದ ಕಲಿಯಬೇಕಿದೆ.
ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಬಂದ ಈ ಇವರೀವ೯ರ ಸಮಾಗಮದ ದೃಶ್ಯವೂ ಆನಂದದಾಯಕವೂ, ಸ್ಮರಣೀಯವಾಗಿದೆ. ಜನಾಂಗದ ಎಲ್ಲಾ ಹಿರಿಯಜ್ಜಿಯರು ಇವರಂತೆ ನಮಗೆ ಆದಶ೯ಪ್ರಾಯರೆಂದು ಭಾವಿಸಿ ಗೌರವಿಸೋಣ.
ಒಕ್ಕಲಿಗ ಜನಾಂಗದ ಎರಡು ಅನನ್ಯಚೇತನಗಳಿಗೆ ರಾಜ್ಯೋತ್ಸವ, ಪದ್ಮ ಪ್ರಶಸ್ತಿಗಳು ಬಂದಿರುವುದು ಒಕ್ಕಲಿಗರ ಗೌರವ ಹೆಚ್ಚಿಸಿದೆ. ಪ್ರ.ವಾಣಿ ಅಂಕಣದಲ್ಲಿ ತುಳಸಿಗೌಡರ ಬಗ್ಗೆ ಲೇಖನ ಓದಿದ ಕ್ಷಣವೂ ಹೃದ್ಯವಾದದ್ದು. ನಮ್ಮನಾಡಿನವರೇ ಆದ ಹಿರಿಯ ಚೇತನಗಳಾದ ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮನವರ ಸಾಲಿಗೆ ಮೇಲಿನವರು ಸೇರಿದಂತಾಗಿದೆ.ಹಾಲಕ್ಕಿ ಸಮಾಜದ ಇನ್ನೊಬ್ಬ ಸಾಧಕಿ ಸುಕ್ರಿಬೊಮ್ಮಗೌಡರೊಂದಿಗೆ ಮದ್ಯಪಾನ ವಿರೋದಿ, ಪರಿಸರ ಚಳವಳಿಗಳಲ್ಲಿ ತುಳಸಿಗೌಡರೂ ಪಾಲ್ಗೊಳ್ಳುತ್ತಾರೆಂಬುದು ಸೋದರತ್ವದ ಬೆಸುಗೆಯ ಸಂಕೇತ.
ಕೆ.ಎನ್.ಶಿವಶಂಕರ್.