Homeಲೇಖನಕೃಷಿ ಮತ್ತು ವಾಣಿಜ್ಯ ಕಾಯಕಗಳ ಸಾಕಾರ ಮೂರ್ತಿ ಬಸರೀಗಿಡದ ವೀರಪ್ಪನವರು

ಕೃಷಿ ಮತ್ತು ವಾಣಿಜ್ಯ ಕಾಯಕಗಳ ಸಾಕಾರ ಮೂರ್ತಿ ಬಸರೀಗಿಡದ ವೀರಪ್ಪನವರು

1946 ರ ಆಗಸ್ಟ 10 ಮತ್ತು 11 ರಂದು ಆದವಾನಿಯಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.ಆಗ ಗುತ್ತಿಯಲ್ಲಿ ಜಿಲ್ಲಾ ಮುನಿಸೀಫ್ ಆಗಿದ್ದ ಟಿ.ಎಚ್.ಎಂ.ಸದಾಶಿವಯ್ಯನವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ನಂತರ ಅವರು 1949 ರಲ್ಲಿ ಕರ್ನಾಟಕದ ಗಡಿ ಗೆರೆಗಳು(ಪೂರ್ವಾರ್ಧ) ಎಂಬ ಕೃತಿಯ ಮೂಲಕ ಕರ್ನಾಟಕದ ಗಡಿಗಳನ್ನು ನಿರ್ಣಯಿಸುವ ಸಾರ್ಥಕ ಪ್ರಯತ್ನ ಮಾಡಿದ್ದರು. ಶಿವಸುತ ಎಂಬ ಹೆಸರಿನಲ್ಲಿ ರಚಿತವಾದ ಕೃತಿಯ ಸಂಪಾದಕರು ತಲ್ಲೂರ ರಾಯನಗೌಡರು. ಈ ಕೃತಿಗೆ ಮುನ್ನುಡಿ ಬರೆದವರು ಹಾಲಬಾವಿ ವೀರಭದ್ರಪ್ಪನವರು.ಕೃತಿಯ ಪ್ರಕಟಣೆಗೆ ನೆರವಾದವರು ಬಸರೀಗಿಡದ ವೀರಪ್ಪನವರು.

ವಿವಿಧ ಆಡಳಿತಗಳಲ್ಲಿ ಹರಿದು ಹಂಚಿಹೋಗಿರುವ ಕರ್ನಾಟಕವನ್ನು ಆಕ್ರಮಿಸಲು ಬೇರೆ ಭಾಷಿಕರು ಗಡಿ ಭಾಗಗಳಲ್ಲಿ ನಡೆಸಿದ್ದ ಪ್ರಯತ್ನಗಳನ್ನು ಖಂಡಿಸಿ ಅಖಿಲ ಕರ್ನಾಟಕದ ನಿರ್ಮಾಣದ ಅವಶ್ಯಕತೆಗಳನ್ನು ಮನಗಾಣಿಸಿದ್ದರು.ಅಳಿವೋ ಉಳಿವೋ? ಎಂಬ ಕೊನೆಯ ಪ್ರಶ್ನೆಯು ಎದ್ದಿರುವ ಈ ಸಮಯದಲ್ಲಿ ಕನ್ನಡಿಗರು ಕೈ ಕಟ್ಟಿಕೊಂಡು ಕುಳಿತರೆ ಕನ್ನಡ ಇತಿಹಾಸದಲ್ಲಿ ಇದೇ ಕೊನೆಯ ಪ್ರಕರಣವಾಗುವುದು. ಈ ವಿಷಾದಾಂತ ಪ್ರಕರಣಕ್ಕೆ ಇಂದಿನ ಪೀಳಿಗೆಯೇ ಕಾರಣವೆಂದು ಮುಂದಿನವರು ಬೆರಳು ಮಾಡಿ ತೋರಿಸುವರು.ಕಾರಣ ಪ್ರತಿಯೊಬ್ಬ ಕನ್ನಡಿಗನು ಎಚ್ಚೆತ್ತು ನಾಡಿನ ಗಡಿಗಳನ್ನು ಕಾಯ್ದುಕೊಳ್ಳುವ ದೀಕ್ಷೆಯನ್ನು ವಹಿಸಬೇಕು.

ಇನ್ನೊಬ್ಬರ ನೆಲದಲ್ಲಿ ಒಂದು ಅಂಗುಲವಾದರೂ ನಮಗೆ ಬೇಡ, ಆದರೆ ನಮ್ಮದನ್ನು ನಮ್ಮದಾಗಿ ಇಟ್ಟುಕೊಳ್ಳುವುದರಲ್ಲಿ ಔದಾಸಿನ್ಯ ಬೇಡ ಎಂದು ಕನ್ನಡಿಗರಲ್ಲಿ ಕಳಕಳಿ ಮನವಿ ಮಾಡಿಕೊಂಡಿರುವ ಟಿ.ಎಚ್.ಎಂ ಸದಾಶಿವಯ್ಯನವರು ಗಡಿಯ ನಿರ್ಣಯಕ್ಕೆ ಮನೆನಾಡಿನ ತತ್ವ ಅವಶ್ಯಕವೆಂದು ನಂಬಿದ್ದರು.( ಕರ್ನಾಟಕದ ಗಡಿ ಗೆರೆಗಳು(ಪೂವಾರ್ಧ) ಲೇ;ಶಿವಸುತ ಸಂ;ತಲ್ಲೂರ ರಾಯನಗೌಡ ಪಾಟೀಲ ಬೈಲಹೊಂಗಲ.1949.ಪು.4) ಈ ಮಾಹಿತಿ ಕರ್ನಾಟಕ ಏಕೀಕರಣ ಇತಿಹಾಸ ಡಾ.ಎಚ್.ಎಸ್.ಗೋಪಾಲರಾವ್.ಪುಟ ಸಂಖ್ಯೆ 119.ಆರನೇ ಮುದ್ರಣ 2014)

ಈ ಒಂದು ಸಂಗತಿಯ ಮೂಲಕ ನಾವು ಬಸರೀಗಿಡದ ವೀರಪ್ಪನವರ ಔದಾರ್ಯತೆಯನ್ನು ನೆನೆಯುತ್ತ ಅವರ ಬದುಕಿನ ಪುಟಗಳನ್ನು ತೆರೆಯಬಹುದು.ದಾನಶೂರ ಶ್ರೀ ಬಸರೀಗಿಡದ ವೀರಪ್ಪನವರದು ಸ್ವಯಂ ನಿರ್ಮಿತ ವ್ಯಕ್ತಿತ್ವ. ಕೃಷಿ ಮತ್ತು ವಾಣಿಜ್ಯ ಕಾಯಕಗಳ ಸಾಕಾರ ಮೂರ್ತಿಯಾಗಿದ್ದ ಅವರು ಬಡವರ ಬಂಧುವಾಗಿ,ಕರ್ನಾಟಕ ಏಕೀಕರಣದ ನಾಯಕ ವ್ಯಕ್ತಿಯಾಗಿ ಇವರು ಸಲ್ಲಿಸಿದ ಸೇವೆ ಅಪೂರ್ವವಾದುದು.

ಇವರು ಬಡತನದಲ್ಲಿ ಜನ್ಮ ತಾಳಿ ಬಡವರ ಬಂಧುವಾಗಿ ಬದುಕಿದರು.ಶಿಕ್ಷಣದಿಂದ ವಂಚಿತರಾಗಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿದರು.ರಾಜಕಾರಣದ ಸಂಪರ್ಕವಿಲ್ಲದೇ ರಾಜ್ಯದ ಏಕೀಕರಣಕ್ಕೆ ತಮ್ಮದೇ ಸೇವೆಗೈದರು.ತ್ಯಾಗದ ಅವರ ಜೀವನವನ್ನು ಹೊರಳಿ ನೋಡುವ ಸಂದರ್ಭವಿದು.

ಸ್ವಾತಂತ್ರ್ಯ ಹೋರಾಟಗಾರರಾಗಿ ಕರ್ನಾಟಕ ಏಕೀಕರಣದಲ್ಲಿ ತಮ್ಮದೇ ಹೋರಾಟದ ಬದುಕನ್ನು ಕಟ್ಟಿಕೊಂಡು ನಾಡಿಗೆ ಬಹುದೊಡ್ಡ ಕೊಡುಗೆ ನೀಡಿದ ಸಂಶೋಧಕ ಸಾಹಿತಿ ತಲ್ಲೂರ ರಾಯನಗೌಡರ ವ್ಯಕ್ತಿತ್ವವನ್ನು ಹುಡುಕ ಹೊರಟ ನಾನು ಅವರೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಜೀವನ ಚಿತ್ರಣಗಳನ್ನು ನೋಡುತ್ತ ಸಾಗಿದೆ. ಆಗ ನನ್ನ ಕಣ್ಣಿಗೆ ಬಸರೀಗಿಡದ ವೀರಪ್ಪನವರು ಕಂಡರು.

ಅದಕ್ಕೆ ಕಾರಣ ತುರಕರಸೀಗಿಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾಗಿರುವ ಶ್ರಿ ಮಹೇಶ ಚನ್ನಂಗಿಯವರು. ಅವರು ನನಗೆ ರಾಯನಗೌಡರ ಕುರಿತು ದಾಖಲೆ ನೀಡುವ ಜೊತೆಗೆ ಬಸರೀಗಿಡದ ವೀರಪ್ಪನವರ ಜೀವನ ಚಿತ್ರಣ ಕೃತಿಯನ್ನು ನೀಡಿದರು.

ಓದುತ್ತ ಹೊರಟಂತೆ ರಾಯನಗೌಡರು ಮತ್ತು ಬಸರೀಗಿಡದ ವೀರಪ್ಪನವರ ಸ್ನೇಹ ಅಂದಿನ ಕಾಲದಲ್ಲಿ ಲಂಡನ್‍ವರೆಗೂ ತಲುಪಿದ್ದು. ಬೈಲಹೊಂಗಲದಲ್ಲಿ ಸ್ಥಾಪನೆಯಾಗಿದ್ದ ಕಿತ್ತೂರು ರಾಣಿ ಇತಿಹಾಸಮಂಡಲಕ್ಕೆ ಸಹಾಯ ನೀಡುವ ಜೊತೆಗೆ ಅದರ ಆರಂಭೋತ್ಸವ ಕಾಲಕ್ಕೆ ನೀಡಿದ ಆಶಯ ನುಡಿಗಳು.ಬಸರೀಗಿಡದ ವೀರಪ್ಪನವರ ವ್ಯಕ್ತಿತ್ವದ ಬಗ್ಗೆ ಅಭಿಮಾನ ಮತ್ತು ಅವರ ಬದುಕಿನಲ್ಲಿ ಪಟ್ಟ ಕಷ್ಟಗಳ ಕುರಿತು ಬರಹ ರೂಪಿಸುವಲ್ಲಿ ನೆರವಾದವು.

ದಾನಶೂರ ಬಸರೀಗಿಡದ ವೀರಪ್ಪನವರು ಕೃತಿಯನ್ನು ನಾಡೋಜ ಶಾಂತರಸರು ಬರೆದಿದ್ದು.ಲಿಂಗಾಯತ ಅಧ್ಯಯನ ಸಂಸ್ಥೆ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಎಡೆಯೂರು-ಡಂಬಳ-ಗದಗ ಇವರು ಎರಡನೇ ಆವೃತ್ತಿಯಾಗಿ 2016 ರಲ್ಲಿ ಪ್ರಕಟಿಸಿದ್ದು ಆ ಕೃತಿಯಲ್ಲಿನ ವಿವರಗಳನ್ನು ಇಲ್ಲಿ ದಾಖಲಿಸಿರುವೆ.

ಜೀವನ

ಗದಗ ಜಿಲ್ಲೆಯ ರೋಣ ಬಸರೀಗಿಡದ ವೀರಪ್ಪನವರು ಹುಟ್ಟಿದ ಸ್ಥಳ. ಅಗಸ್ಟ 20. 1901 ರಂದು ತಂದೆ ಚನ್ನಪ್ಪ ತಾಯಿ ಪರಮ್ಮ ಲಿಂಗಾಯತ ಧರ್ಮದ ಸಜ್ಜನ ಗಾಣಿಗ ಕುಟುಂಬದಲ್ಲಿ ಜನಿಸಿದರು. ಅವರ ತಂದೆಗೆ ಆಗಿನ ಕಾಲದಲ್ಲಿ ಐದು ಎಕರೆ ಭೂಮಿಯಿತ್ತು ಅದರೊಂದಿಗೆ ಮನೆತನದ ಕಸುಬಾದ ಎಣ್ಣೆಯನ್ನು ಹೊತ್ತು ಮಾರುತ್ತಿದ್ದರು. ವೀರಪ್ಪನವರು ಐದು ವರ್ಷದವರಿದ್ದಾಗ ಇವರ ತಂದೆ ನಿಧನರಾದರು.

ತಾಯಿಯೇ ಕುಟುಂಬದ ಜವಾಬ್ದಾರಿ ಮುನ್ನಡೆಸುತ್ತ ವೀರಪ್ಪನವರನ್ನು ಶಾಲೆಗೆ ಸೇರಿಸಿದರು. ಬಡತನದ ಬೇಗೆಯಲ್ಲಿ ತಾಯಿ ಪ್ರತಿದಿನ ಎಣ್ಣೆಯನ್ನು ಅಲೆಯುತ್ತ ಮಾರುತ್ತ ಬದುಕುತ್ತಿದ್ದುದು ವೀರಪ್ಪನವರ ಮೇಲೆ ಪ್ರಭಾವ ಬೀರಿತು. ತಮ್ಮ ಹದಿಮೂರನೆಯ ವಯಸ್ಸಿಗೆ ಶಾಲೆಯನ್ನು ಬಿಟ್ಟು ಜೀವನದ ಹೋರಾಟಕ್ಕೆ ಕಾಲಿಟ್ಟರು.

ಕಳಕಪ್ಪ ಸುಂಕದ ಎಂಬುವವರಲ್ಲಿ ಹಮಾಲಿ ಕೆಲಸಕ್ಕೆ ಸೇರಿದರು. ಅಲ್ಲಿ ಅವರು ಡಬ್ಬಿ ಹೊರುವುದು.ಚೀಲ ಹೊರುವುದು ಮುಂತಾದ ಕೆಲಸ ಮಾಡತೊಡಗಿದರು.ಅವರಿಗೆ ಆಗ ಸಿಗುತ್ತಿದ್ದ ಪಗಾರ ವರ್ಷಕ್ಕೆ 35 ರೂ.ಗಳು ಐದು ವರ್ಷ ಈ ಕೆಲಸ ಮಾಡಿದರು. ನಂತರ ರೋಣದ ಫಣಿಯಪ್ಪಗೌಡರಲ್ಲಿ ಹೆಚ್ಚಿನ ವೇತನಕ್ಕೆ ಕೆಲಸಕ್ಕೆ ಸೇರಿದರು. ಪ್ರಾಮಾಣಿಕತೆ ಮತ್ತು ನಿಷ್ಠೆ ಇವರ ಕಾಯಕದ ತತ್ವವಾಗಿತ್ತು ಇದರಲ್ಲೇನಾದರೂ ಕಿಂಚಿತ್ ಲೋಪ ಬಂದರೆ ಆ ಕೆಲಸಕ್ಕೆ ವಿದಾಯ ಹೇಳುವ ನಿಷ್ಠುರವಾದಿಯಾಗಿದ್ದರು ವೀರಪ್ಪನವರು.

ಒಂದು ದಿನ ಅಂಥಹ ಪ್ರಸಂಗ ನಡೆದೇ ಬಿಟ್ಟಿತು. ಅವರ ಧಣಿ ಇವರಿಗೆ ತಮ್ಮ ಪ್ರೇಯಸಿಯ ಹಾಸಿಗೆಯನ್ನು ಹಾಸಲು ಹೇಳಿದರು.ವೀರಪ್ಪನವರು ಕಿಡಿಕಿಡಿಯಾದರು.ಅದನ್ನು ಮಾಡುವುದಿಲ್ಲ ಎಂದು ವಿನಯವಾಗಿಯೇ ಹೇಳಿದರು. ಧಣಿಯ ಪಿತ್ತ ನೆತ್ತಿಗೇರಿತ್ತು. ಅವರು ಕೂಡಲೇ ವೀರಪ್ಪನವರನ್ನು ಕೆಲಸದಿಂದ ತಗೆದು ಹಾಕಿದರು.

ಕಿರಾಣಿ ವ್ಯಾಪಾರದಲ್ಲಿ ವೀರಪ್ಪನವರು

ನೌಕರಿ ಕಳೆದುಕೊಂಡು ಸ್ವಾಭಿಮಾನದಿಂದ ಮನೆಗೆ ಬಂದ ವೀರಪ್ಪನವರು ತಮ್ಮದೇ ಸ್ವಂತ ಅಂಗಡಿ ತೆರೆಯಲು ನಿರ್ಧರಿಸಿದರು.ಅದಕ್ಕೆ ತಾಯಿಯ ತಂದೆ (ತಾತ) ಯ ಸಹಾಯ ಕೂಡ ದೊರಕಿತು. ಊರಿನಲ್ಲಿ ಕಿರಾಣಿ ವ್ಯಾಪಾರ ಆರಂಭಿಸಿದರು. ಒಳ್ಳೆಯ ರೀತಿಯಲ್ಲಿ ಅಂಗಡಿಯ ವ್ಯಾಪಾರ ಸಾಗತೊಡಗಿತು. ಮಗನ ವ್ಯವಹಾರ ಕಂಡು ತಾಯಿಯೂ ಸಂತಸಗೊಂಡಳು. ಜೊತೆಗೆ ಮಗನಿಗೆ ವಿವಾಹ ಮಾಡುವ ಯೋಚನೆಯನ್ನೂ ಮಾಡಿದಳು.

ಜಕ್ಕಲಿ ಗ್ರಾಮದ ವೀರಭದ್ರಪ್ಪ ಸಜ್ಜನ ಅವರ ಮಗಳಾದ ಅಯ್ಯವ್ವನೊಡನೆ ವಿವಾಹವೂ ಜರುಗಿತು.ಸಂಸಾರ ಸುಖವಾಗಿ ಸಾಗುತ್ತಿರಲು ದಿನಗಳೆದಂತೆ ಬೆಲೆಗಳಲ್ಲಿ ಇಳಿಮುಖವಾಗತೊಡಗಿತು. ಇವರ ಅಂಗಡಿಯಲ್ಲಿ ಹಾಕಿದ್ದ ಸಾಮಗ್ರಿಗಳ ಮೇಲೆ ಬರಬೇಕಾದ ಲಾಭಾಂಶವಿರಲಿ ಅಸಲಿಗೂ ಕೂಡ ತೊಂದರೆಯುಂಟಾಗತೊಡಗಿತು.

ಇದರಿಂದ ಕಿರಾಣಿ ಅಂಗಡಿಯ ಬಾಗಿಲನ್ನು ಹಾಕುವಂತಾಯಿತು.ಕಷ್ಟದ ದಿನಗಳವು. ವೀರಪ್ಪನವರು ಎದೆಗುಂದಲಿಲ್ಲ. ಸುಮ್ಮನೆ ಕುಳಿತುಕೊಳ್ಳದೇ ಒಂದು ಮೋಟಾರು ಕೊಂಡರು.ಮೋಟಾರ ನಡೆಸಲು ಚಾಲಕ ಮತ್ತು ಕ್ಲೀನರ್ ನೇಮಿಸಿಕೊಂಡರು ಅಲ್ಲಿಯೂ ಕೂಡ ಅವರಿಗೆ ಲಾಭವಾಗದೇ ಹೋಯಿತು.

ಬದುಕಿನಲ್ಲಿ ತಿರುವು

ಏನನ್ನೇ ಮಾಡಿದರೂ ಅದರಲ್ಲಿ ಯಶಸ್ಸು ಕಾಣದೇ ಹಾನಿಗೊಳಗಾಗುವ ರೀತಿಯಿಂದ ವೀರಪ್ಪನವರು ಮುಂದೇನು ಮಾಡಬೇಕು ಎಂದು ಯೋಚಿಸುತ್ತಿರುವಾಗ ಗಿರಡ್ಡಿ ಸಕ್ಕರೆಗೌಡರು ಇವರ ನೆರವಿಗೆ ಬಂದರು.ಅವರ ಹಿತವಚನ ಅವರ ಬದುಕಿನಲ್ಲಿ ಹೊಸ ದಿಕ್ಕಿನತ್ತ ಯೋಚಿಸಲು ಅವಕಾಶ ನೀಡಿತು.

ಯಾವುದೇ ವ್ಯವಹಾರ ಅನುಭವವಿಲ್ಲದೇ ಮಾಡಕೂಡದು.ಇನ್ನೊಬ್ಬರ ಮೇಲೆ ಸಂಪೂರ್ಣ ಅವಲಂಬನೆಯಾಗಬಾರದು.ಮೋಟಾರ್ ಸರ್ವಿಸ್ ಕೆಲಸದಲ್ಲಿ ನೀನು ಅನನುಭವಿ.ಸ್ವತಃ ನೀನೇ ಚಾಲಕನಾದಾಗ ಮಾತ್ರ ಅದರಲ್ಲಿ ನಿನ್ನ ಸಾಧನೆ ಆಗಬಲ್ಲದುಎಂಬ ಸಕ್ಕರೆಗೌಡರ ಮಾತುಗಳು ಮನಸ್ಸಿಗೆ ನಾಟಿದವು.

ಮನೆಗೆ ಬಂದರು.ಎಣ್ಣೆ ಮಾರಿ ತಾಯಿ ಕೂಡಿಟ್ಟಿದ್ದ 250 ರೂಪಾಯಿಯನ್ನು ತಗೆದುಕೊಂಡರು.ತಾಯಿಗೆ ಹೇಳದೇ ಪುಣೆಗೆ ಹೋದರು. ಅಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದರು. ನಂತರ ಡ್ರೈವರ್ ಕೂಡ ಆದರು. ಆರು ತಿಂಗಳ ನಂತರ ಕೆಲಸದ ಎಲ್ಲ ವಿವರಗಳನ್ನು ಕಲಿತುಕೊಂಡು ಊರಿಗೆ ಮರಳಿದರು.

ಹಿಂದೆ ಮಾಡಿಟ್ಟಿದ್ದ ಸಾಲ ಹಾಗೆಯೇ ಇತ್ತು .ಇವರಿಗೆ ಹಣ ನೀಡಿದವರು ಹಣ ಕೇಳತೊಡಗಿದರು. ಆಗ ಮತ್ತೆ ಗಿರಡ್ಡಿ ಸಕ್ಕರೆಗೌಡರ ಮೊರೆ ಹೋದರು. ಆಗ ಅವರ ಸಹಕಾರದಂತೆ ಗಿರಡ್ಡಿ ಬಸನಗೌಡರು.ಭದ್ರಾಪುರ ಬಸೆಟ್ಟೆಪ್ಪನವರು. ಸೂಡಿ ಸಂಗಪ್ಪನವರು. ಹಣ ಸಾಲವಾಗಿ ಕೊಟ್ಟರು.ತಮ್ಮ ತಾಯಿ ಕೂಡಿಟ್ಟಿದ್ದ ಹನ್ನೆರಡು ನೂರು ರೂಪಾಯಿ ಎಲ್ಲವನ್ನೂ ತಗೆದುಕೊಂಡು ಮುಂಬಯಿಗೆ ಬಂದು ಮೋಟಾರು ಖರೀದಿಸಿ ತಾವೇ ಚಾಲನೆ ಮಾಡಿಕೊಂಡು ರೋಣಕ್ಕೆ ಬಂದರು.

ಮೋಟಾರು ಸರ್ವಿಸ್ ಆರಂಭಿಸಿದರು. ಒಂದು ವರ್ಷದಲ್ಲಿ ಹತ್ತು ಸಾವಿರ ಲಾಭ ಗಳಿಸಿದರು.ತಮ್ಮ ಖರ್ಚು ತಗೆದು ಉಳಿದ ಹಣವನ್ನು ಕೂಡಿಡಲು ಆರಂಭಿಸಿದರು. ಮೂರನೆಯ ವರ್ಷಕ್ಕೆ ಹನ್ನೊಂದು ಸಾವಿರ ರೂಪಾಯಿಗಳನ್ನು ಹೊಂದಿದ್ದರು.ಇವರ ದಯಾ ಗುಣ ಹೇಗಿತ್ತೆಂದರೆ ಮೋಟಾರು ನಡೆಸಿಕೊಂಡು ಬರುತ್ತಿರುವಾಗ ದಾರಿಯಲ್ಲಿ ವಿಕಲಚೇತನರು ಗರ್ಭಿಣಿಯರು ಕಂಡರೆ ಅವರನ್ನು ತಮ್ಮ ಮೋಟಾರಿನಲ್ಲಿ ಹತ್ತಿಸಿಕೊಂಡು ಅವರಿಗೆ ಹಣ ಪಡೆಯದೇ ಕರೆದುಕೊಂಡು ಬರುತ್ತಿದ್ದರು.

ಕರ್ನಾಟಕದ ಫೋರ್ಡ

ಪ್ರಾಮಾಣಿಕತೆ ಶ್ರದ್ಧೆ ಕೈಗೊಂಡ ಕಾರ್ಯದಲ್ಲಿ ಪ್ರೀತಿ. ಬಂದುದನ್ನು ಎದುರಿಸುವ ಎದೆಗಾರಿಕೆ,ಮಾಡಿಯೇ ತೀರುತ್ತೇನೆಂಬ ಛಲಗಾರಿಕೆ ಇದ್ದರೆ ಮಾನವ ಏನಾಗಬಲ್ಲನೆಂಬುದಕ್ಕೆ ಬಸರೀಗಿಡದ ವೀರಪ್ಪನವರೇ ಸಾಕ್ಷಿ. ರೋಣದಿಂದ ಗದಗಕ್ಕೆ ಕ್ರಿ.ಶ 1929 ರಲ್ಲಿ ತಮ್ಮ ವ್ಯವಹಾರವನ್ನು ಗದಗಿಗೆ ವರ್ಗಾಯಿಸಿದರು.ವರ್ಷ ವರ್ಷಕ್ಕೆ ಮೋಟಾರುಗಳ ಸಂಖ್ಯೆ ಬೆಳೆಯಿತು.

ಇದೇ ಸಮಯದಲ್ಲಿ ಸಹಕಾರಿ ತಳಹದಿಯ ಮೇಲೆ ವೀರಪ್ಪನವರು ಹಲವರನ್ನು ಕೂಡಿಸಿಕೊಂಡು ಸಾರಿಗೆ ಕೂಟವನ್ನು ಕಟ್ಟಿದರು.ಅವುಗಳಿಗೆ ಅವರೇ ಅಧ್ಯಕ್ಷರಾದರು.ಲಕ್ಷ್ಮೀ ಮೋಟರ್ ಕಂಪನಿ. ಕಂಬೈನ್ಡ ಕಂಪನಿ.ಶಿರಹಟ್ಟಿ ಕಂಪನಿ.ರೆಗ್ಯುಲರ್ ಮೋಟರ ಸರ್ವಿಸ್.ಮುಂತಾದ ಸಾರಿಗೆ ಕೂಟಗಳು ಅಸ್ತಿತ್ವಕ್ಕೆ ಬಂದವು.ಇವುಗಳ ಮೂಲಕ 120 ಕ್ಕೂ ಹೆಚ್ಚು ಬಸ್ ಸೇವೆಗಳು ನಡೆಯುತ್ತಿದ್ದವು.ಇವುಗಳಲ್ಲಿ ಬಸರೀಗಿಡದ ವೀರಪ್ಪನವರ ಪಾಲು ಹೆಚ್ಚಾಗಿತ್ತು. ಇವರ ಒಡೆತನದಲ್ಲಿ ಅಂದು 45ಕ್ಕೂ ಹೆಚ್ಚು ವಾಹನಗಳಿದ್ದವು. ಆಗ ಜನ ಇವರ ವ್ಯಕ್ತಿತ್ವವನ್ನು ಕಂಡು ಕರ್ನಾಟಕದ ಫೋರ್ಡ ಎಂದು ಕರೆದರು.

1929ರ ನಂತರ ಮೋಟರ್ ಸರ್ವಿಸ್ ಜೊತೆಗೆ ಮೋಟರ ಬಿಡಿಭಾಗಗಳ ಅಂಗಡಿಯೊಂದನ್ನು ತೆರೆದರು.ಜೊತೆಗೆ ಪೆಟ್ರೋಲ್ ಏಜೆನ್ಸಿ.ಚಿಮಣಿ ಎಣ್ಣೆ ಎಜೆನ್ಸಿ.ಮೋಟರ್ ಟಾಯರ್ ಟ್ಯೂಬ್ ಎಜೆನ್ಸಿ ಪಡೆದರು. ಹುಬ್ಬಳ್ಳಿ ಮತ್ತು ಬಾಗಲಕೋಟೆಗಳಲ್ಲಿಯೂ ಇವರ ಅಂಗಡಿಗಳ ಶಾಖೆಗಳು ಪ್ರಾರಂಭಗೊಂಡವು. ಅಷ್ಟೇ ಅಲ್ಲ ಮುಂಬಯಿಯ ಸ್ಟ್ಯಾಂಡರ್ಡ ಬೀದಿಯಲ್ಲಿ ಮೋಟಾರು ಟಾಯರ್ ಮಾರುವ ದಲಾಲಿ ಅಂಗಡಿಯನ್ನು ಇದೇ ಕಾಲಕ್ಕೆ ಪ್ರಾರಂಭಿಸಿದರು.

ಕೆಲಸಗಾರರೊಂದಿಗೆ ಕೆಲಸಗಾರ

ಗಿರಡ್ಡಿ ಸಕ್ಕರೆಗೌಡರರ ಹಿತವಚನ “ಯಾವುದೇ ವ್ಯವಹಾರ ಅನುಭವವಿಲ್ಲದೇ ಮಾಡಕೂಡದು.ಇನ್ನೊಬ್ಬರ ಮೇಲೆ ಸಂಪೂರ್ಣ ಅವಲಂಬನೆಯಾಗಬಾರದು.ಮೋಟಾರ್ ಸರ್ವಿಸ್ ಕೆಲಸದಲ್ಲಿ ನೀನು ಅನನುಭವಿ.ಸ್ವತಃ ನೀನೇ ಚಾಲಕನಾದಾಗ ಮಾತ್ರ ಅದರಲ್ಲಿ ನಿನ್ನ ಸಾಧನೆ ಆಗಬಲ್ಲದು” ಈ ಮಾತನ್ನು ತಮ್ಮ ಬದುಕಿನುದ್ದಕ್ಕೂ ನೆನಪಿಟ್ಟುಕೊಂಡು ಬದುಕಿದವರು ವೀರಪ್ಪನವರು. ಇವರು ಗದಗಿನಲ್ಲಿ ಒಂದು ಉದ್ಯೋಗ ಶಾಲೆ ಪ್ರಾರಂಭಿಸಿದರು.ಅದರಲ್ಲಿ 300 ಜನ ಕೆಲಸ ಮಾಡುತ್ತಿದ್ದರು.ಇಲ್ಲಿ ಮೋಟಾರು ದುರಸ್ತಿ.ಮೋಟಾರುಗಳ ಚಸ್ ಕಟ್ಟುವುದು ಸೇರಿದಂತೆ ಮೋಟಾರುಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಗಳು ಜರುಗುತ್ತಿದ್ದವು.

ಸ್ವತಃ ವೀರಪ್ಪನವರೇ ಮುಂದೆ ನಿಂತು ಈ ಕಾರ್ಯಗಳಲ್ಲಿ ತೊಡಗುತ್ತಿದ್ದರು. ಯಾವುದೇ ಮೋಟಾರು ಕೆಟ್ಟಿದೆ ಅಂದರೆ ಸಾಕು ಅದನ್ನು ತಂದು ಎಷ್ಟೇ ಹೊತ್ತಾದರೂ ದುರಸ್ತಿ ಮಾಡದೇ ಬಿಡುತ್ತಿರಲಿಲ್ಲ.ಅಷ್ಟೇ ಅಲ್ಲ ಅಲ್ಲಿ ದುಡಿಯುವ ಕಾರ್ಮಿಕರು.ಕಂಡಕ್ಟರ್.ಡ್ರೈವರ್.ಕ್ಲೀನರ್ ಎಲ್ಲರನ್ನೂ ವೈಯುಕ್ತಿಕವಾಗಿ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು.

ಬಸರಿದ್ದವರಿಗೆ ಬಾರಾಣೆ ಕೂಲಿ

1942-43 ರ ಸಮಯ. ಬ್ರಿಟಿಷ್ ಆಳ್ವಿಕೆಯದು.ಬೀದರ್ ರಾಯಚೂರ ಬಿಜಾಪುರ ಕಲ್ಬುರ್ಗಿ ಬಿಸಿಲಿನಿಂದ ಬಸವಳಿದ ಸ್ಥಳಗಳು. ಅಲ್ಲಿನ ಜನ ಗುಳೆ ಹೊರಟು ಬಂದಾಗ ಬಸರೀಗಿಡದ ವೀರಪ್ಪನವರು ಗದಗಿನಲ್ಲಿ ತಮ್ಮ ಶೆಡ್‍ಗಳಲ್ಲಿ ಅವರಿಗೆ ಆಶ್ರಯ ನೀಡಿದರು.ಬರಗಾಲದ ಈ ಸಂದರ್ಭದಲ್ಲಿ ರಸ್ತೆ ಹಾಕಿಸುವ. ಬಾವಿ ತೋಡಿಸುವ.

ಬರಗಾಲ ಕಾಮಗಾರಿಗಳನ್ನು ಗದಗ ಕೊಪ್ಪಳ ಮಾರ್ಗದಲ್ಲಿ ವೀರಪ್ಪನವರು ಮಾಡಿಸುತ್ತಿದ್ದರು.ಇಂತಹ ಸಂದರ್ಭದಲ್ಲಿ ಅವರು ಕೂಲಿಕಾರರಿಗೆ ವೇತನ ಬಟವಟೆ ಮಾಡುವ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ಗರ್ಭಿಣಿ ಸ್ತ್ರೀಯೊಬ್ಬಳು ನಿಂತಿದ್ದಳು. ಆಗ ಎಲ್ಲರ ಕೂಲಿ ಎಂಟಾಣೆ ಆಗಿತ್ತು. ಇವಳ ಈ ಸ್ಥಿತಿ ಕಂಡ ವೀರಪ್ಪನವರು ಅವರನ್ನು ಸಂತೈಸಿದರು.ಜೊತೆಗೆ ಅಲ್ಲಿಯ ವ್ಯವಸ್ಥಾಪಕರಿಗೆ ಎಂಟಾಣೆ ಬದಲು ಬಾರಾಣೆ ಕೂಲಿ ಕೊಡಿಸಿದರು.

ಯಾರೇ ಗರ್ಭಿಣಿ ಸ್ತ್ರೀಯರು ಕೆಲಸದಲ್ಲಿ ತೊಡಗಿದ್ದರೆ ಅವರಿಗೆಲ್ಲ ಬಾರಾಣೆ ಕೂಲಿ ಕೊಡುವಂತೆ ಆದೇಶಿಸಿದರು.ಅದು ಅಂದಿನ ಕಾಲದಲ್ಲಿ ಸುತ್ತಮುತ್ತಲಿನ ಸ್ಥಳಗಳಿಗೆಲ್ಲ ಹಬ್ಬಿತು.ಇದನ್ನರಿತ ಕೆಲವು ಮನಸುಗಳು ಉದ್ದೇಶಪೂರ್ವಕವಾಗಿ ಗರ್ಭಿಣಿ ಸ್ತ್ರೀಯರನ್ನು ಕೆಲಸಕ್ಕೆ ಹಚ್ಚಿದರು.

ಈ ವಿಷಯ ಅರಿತ ವೀರಪ್ಪನವರು ತಮ್ಮ ಶೆಡ್‍ಗಳಲ್ಲಿ ಅವರಿಗೆ ವಿಶ್ರಾಂತಿ ನೀಡಿಸಿ ಕೆಲಸಕ್ಕೆ ಹಚ್ಚದೇ ಊಟ ವಸತಿ ನೀಡತೊಡಗಿದರು.ಅಷ್ಟೇ ಅಲ್ಲದೇ ನಿರ್ಗತಿಕರಿಗೆ ವಯಸ್ಸಾದವರಿಗೆ ಕೂಡ ತಮ್ಮ ಶೆಡ್‍ಗಳಲ್ಲಿ ಉಳಿಸಿಕೊಂಡು ಬರಗಾಲದ ಸಂದರ್ಭದಲ್ಲಿ ಉಚಿತ ಊಟ ವಸತಿ ಒದಗಿಸಿದರು.

ಕರುಣಾಮಯಿ

1942-43 ರಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಬರ ಬಿದ್ದಿತ್ತು. ಜನ ತಲ್ಲಣಿಸಿದರು. ಬ್ರಿಟಿಷ್ ಸರಕಾರ ಏನೂ ಮಾಡದಾಯಿತು. ವಿಜಾಪುರ ರಾಯಚೂರ ಬೀದರ ಗುಲ್ಬರ್ಗಾ ಭಾಗಗಳಲ್ಲಿನ ಜನ ಈ ಬರಗಾಲದ ಭೀಕರತೆಯಿಂದ ಕಂಗೆಟ್ಟು ಮಲೆನಾಡ ಕಡೆಗೆ ಗುಳೆ ಹೊರಟಿತು.

ಆಗ ಬಿಜಾಪುರ ಜಿಲ್ಲೆ ಮತ್ತು ರಾಯಚೂರ ಜಿಲ್ಲೆಯ ಕೆಲವು ಸ್ಥಳಗಳಿಗೆ ಬಸರೀಗಿಡದ ವೀರಪ್ಪನವರ ಬಸ್ಸುಗಳೇ ಹೆಚ್ಚು ಸಂಚರಿಸುತ್ತಿದ್ದವು. ಒಂದು ದಿನ ಬಾಗಲಕೋಟೆಯಿಂದ ಗದುಗಿಗೆ ಬಸರೀಗಿಡದ ಬಸ್ ಹೊರಟಿತ್ತು. ವೀರಪ್ಪನವರೇ ಚಾಲಕ. ದಾರಿಯಲ್ಲಿ ಗುಳೇಕಾರರ ಹಿಂಡುಗಳು ರಸ್ತೆಯುದ್ದಕ್ಕೂ ಹೊರಟಿದ್ದವು.ಅವರನ್ನು ದಾಟುತ್ತ ಬಸ್ಸು ಮುಂದೆ ಸಾಗುತ್ತಿತ್ತು.

ಒಂದು ಕಡೆ ದಾರಿಯ ನಡುವೆ ಜನ ಗುಂಪುಕಟ್ಟಿ ನಿಂತಿದ್ದರು. ವೀರಪ್ಪನವರು ಎಷ್ಟು ಹಾರ್ನ ಬಾರಿಸಿದರೂ ಜನ ಚದುರಲಿಲ್ಲ.ಇವರು ಬಸ್‍ನಿಂದ ಇಳಿದು ಜನರ ನೂಕುನುಗ್ಗಲನ್ನು ಸರಿಸಿ ಬಂದು ನೋಡುತ್ತಾರೆ ಆ ಸುಡು ಬಿಸಿಲಿನಲ್ಲಿ ಮಹಿಳೆಯೊಬ್ಬಳ ಹೆರಿಗೆಯಾಗಿತ್ತು. ಅವಳು ಸಾಯುವ ಸ್ಥಿತಿಯಲ್ಲಿದ್ದಳು.

ಬಸರೀಗಿಡದ ವೀರಪ್ಪನವರ ಕಣ್ಣು ತುಂಬಿ ಬಂದವು. ಅವಳನ್ನು ಮೆಲ್ಲನೆ ಎಬ್ಬಿಸಿ ತಮ್ಮ ಬಸ್ಸಿನಲ್ಲಿ ಕೂಡ್ರಿಸಿದರು.ತಮ್ಮ ಬಸ್ಸಿನಲ್ಲಿ ಎಷ್ಟು ಜನರಿಗೆ ಹತ್ತಲು ಅವಕಾಶವಿತ್ತೋ ಅಷ್ಟು ಜನರನ್ನು ಹತ್ತಿಸಿಕೊಂಡರು.ಮುಂದಿನ ಊರಿನಲ್ಲಿ ಆಸ್ಪತ್ರೆಗೆ ಆ ಮಹಿಳೆಯನ್ನು ಮಗುವನ್ನು ದಾಖಲಿಸಿ ಉಪಚಾರ ನಡೆಸಲು ಅನುಕೂಲ ಮಾಡಿದರು.ಜೀವ ಹೋಗುವ ಸ್ಥಿತಿಯಲ್ಲಿದ್ದ ಮಹಿಳೆ ಬದುಕಿ ಉಳಿದಳು.ನಂತರ ಗುಳೇಕಾರರನ್ನೆಲ್ಲ ಗದುಗಿಗೆ ಕರೆ ತಂದರು. ತಮ್ಮ ಶೆಡ್‍ಗಳಲ್ಲಿ ಅವರಿಗೆ ಊಟ ಮತ್ತು ವಸತಿಯ ವ್ಯವಸ್ಥೆ ಮಾಡಿದರು. ಇಂತಹ ಕರುಣಾಮಯಿ ಹೃದಯ ವೀರಪ್ಪನವರದು.

ವೀರೇಶ್ವರ ಪುಣ್ಯಾಶ್ರಮ ಗದಗ

1942 ರ ಸಮಯ ಎಪ್ಪತ್ತು ಎಂಬತ್ತು ಶಿಷ್ಯರನ್ನು ಕಟ್ಟಿಕೊಂಡು ಪಂಡಿತ ಪಂಚಾಕ್ಷರಿ ಗವಾಯಿಗಳು ಊರೂರು ಅಲೆಯುತ್ತಿದ್ದರು. ಕೀರ್ತನ ನಾಟಕಗಳಿಂದ ಬಂದ ಉತ್ಪನ್ನದಿಂದ ಅವರ ಹೊಟ್ಟೆ ಬಟ್ಟೆ ನಡೆಯಬೇಕು. ಬೀಡು ಬಿಟ್ಟಲ್ಲಿ ಗವಾಯಿಗಳಿಂದ ಶಿಷ್ಯರಿಗೆ ಸಂಗೀತ ಪಾಠ. ಎಲ್ಲಿಯಾದರೂ ಒಂದು ಸ್ಥಳದಲ್ಲಿ ನೆಲೆನಿಂತು ಶಿಷ್ಯರಿಗೆ ಸಂಗೀತ ಹೇಳಿಕೊಡುವ ಆಸೆ ಗವಾಯಿಗಳದ್ದು. ಆದರ ಇಂಥಹ ಒಂದು ಅವಕಾಶವನ್ನು ಅಂದಿನ ದಿನಗಳಲ್ಲಿ ಯಾರೂ ಕಲ್ಪಿಸಿಕೊಡಲು ಮುಂದೆ ಬರಲಿಲ್ಲ. ಆಗ ಗವಾಯಿಗಳ ಕ್ಯಾಂಪು ಶಿರಹಟ್ಟಿಯಲ್ಲಿತ್ತು.

80 ಜನ ಶಿಷ್ಯರು ಮೂರು ಸಾವಿರ ರೂಪಾಯಿಗಳ ಸಾಲ.ಕಡು ಕಷ್ಟದ ದಿನಗಳು. ವೀರಪ್ಪನವರಿಗೆ ಸುದ್ದಿ ತಿಳಿಯಿತು. ಅವರನ್ನು ಗದುಗಿಗೆ ಕರೆತಂದರು.ತಮ್ಮ ಅಂಗಡಿಯ ಸ್ಥಳದಲ್ಲಿ ವಾಸ್ತವ್ಯ ಕಲ್ಪಿಸಿದರು. ಕೆಲವು ದಿನಗಳ ಬಳಿಕ ತಮ್ಮ ಶೆಡ್ಡಿನ ಒಂದು ಭಾಗದಲ್ಲಿ ಐದು ಸಾವಿರ ರೂಪಾಯಿ ವೆಚ್ಚ ಮಾಡಿ ಗವಾಯಿಗಳಿಗೆ ಮತ್ತು ಅವರ ಶಿಷ್ಯರಿಗೆ ಊಟ.ವಸತಿ.ಪಾಠ.ಪ್ರವಚನಗಳಿಗೆ ಅನುಕೂಲವಾಗುವಂತಹ ಕಟ್ಟಡ ಕಟ್ಟಿಸಿಕೊಟ್ಟರು.ಅದಕ್ಕೆ ವೀರೇಶ್ವರ ಪುಣ್ಯಾಶ್ರಮಎಂದು ಹೆಸರಿಡಲಾಯಿತು.

ಅದು ನಾಲತವಾಡ ಶರಣ ವೀರೇಶ್ವರರ ಸವಿನೆನಪಿಗಾಗಿ ಇಟ್ಟ ಹೆಸರಾಗಿತ್ತು. ವೀರೇಶ್ವರ ಪುಣ್ಯಾಶ್ರಮಕ್ಕೆ ಗದುಗಿನ ಅನೇಕ ನಾಗರಿಕರು ಭಕ್ತಿಯಿಂದ ಸಹಾಯ ಸಲ್ಲಿಸಿದರು.ಡಿ.ಎಂ.ಮುಲ್ಕಿ.ಸಿದ್ದರಾಮಪ್ಪ ಮಾನ್ವಿ.ವೀರಮ್ಮ.ವೀರಣ್ಣ ಮುಂತಾದವರು.

ಗವಾಯಿಗಳು ನೆಮ್ಮದಿಯಿಂದ ಇರಬೇಕು..ಅವರಿಂದ ಶಿಷ್ಯರಿಗೆ ಸಂಗೀತ ಪಾಠ ಚನ್ನಾಗಿ ನಡೆಯಬೇಕು.ಅವರಿಗೆ ಯಾವುದೇ ತೊಂದರೆಯಾಗಬಾರದು. ಇದು ವೀರಪ್ಪನವರ ಇಚ್ಚೆ.ಅದಕ್ಕಾಗಿ ಅವರು ಗವಾಯಿಗಳಿಗಿದ್ದ ಮೂರು ಸಾವಿರ ರೂಪಾಯಿಗಳ ಸಾಲವನ್ನು ತೀರಿಸಿದರು. ಜೊತೆಗೆ ತಮ್ಮ ಮೋಟಾರು ವಾಹನಗಳಿಂದ ಬರುವ ಲಾಭಾಂಶದಲ್ಲಿ ಒಂದಂಶವನ್ನು ಆಶ್ರಮಕ್ಕೆ ಸಲ್ಲಿಸುವ ಯೋಜನೆ ಹಾಕಿದರು.ಇದನ್ನರಿತ ಇತರ ಸಾರಿಗೆ ಒಕ್ಕೂಟದ ಮಾಲೀಕರು ಕೂಡ ತಮ್ಮ ಲಾಭದ ಸ್ವಲ್ಪ ಭಾಗವನ್ನು ಪುಣ್ಯಾಶ್ರಮಕ್ಕೆ ಅರ್ಪಿಸಿದರು.

ಕೆಲವು ದಿನಗಳ ಬಳಿಕ ಪಂಚಾಕ್ಷರಿ ಗವಾಯಿಗಳಿಗೆ ನಾಲತ್ತವಾಡದ ವೀರೇಶ್ವರ ಶರಣರ ಪುರಾಣ ಪ್ರವಚನ ನಡೆಸಬೇಕೆಂಬ ಬಯಕೆಯಾಯಿತು. ಆ ವರ್ಷದ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಪುಟ್ಟರಾಜರಿಂದ ಸಂಭ್ರಮದಿಂದ ಜರುಗಿತು. 1945 ರಲ್ಲಿ ಪಂಚಾಕ್ಷರಿ ಗವಾಯಿಗಳು ಲಿಂಗೈಕ್ಯರಾದರು. ಬಸರಿಗೀಡದ ವೀರಪ್ಪನವರು ವೀರೇಶ್ವರ ಪುಣ್ಯಾಶ್ರಮಕ್ಕೆ ಗದುಗಿನ ಪೂರ್ವ ದಿಕ್ಕಿನಲ್ಲಿರುವ ತಮ್ಮ ಹೊಲದಲ್ಲಿ ಒಂದು ಭಾಗವನ್ನು ಕೊಟ್ಟರು.

ಅಲ್ಲಿಯೇ ಪಂಚಾಕ್ಷರಿ ಗವಾಯಿಗಳ ಸಮಾಧಿ ಮಾಡಲಾಯಿತು. ಮುಂದೆ ಊರಿನಿಂದ ಆಶ್ರಮ ಇಲ್ಲಿಗೆ ಸ್ಥಳಾಂತರವಾಯಿತು.ಇಂದಿಗೂ ವೀರೇಶ್ವರ ಪುಣ್ಯಾಶ್ರಮ ಸಮರ್ಥವಾಗಿ ಸಾಗಿದೆ.

ತಲ್ಲೂರು ರಾಯನಗೌಡರೊಂದಿಗೆ ಲಂಡನ್ನಿಗೆ ಪ್ರಯಾಣ 1946 ರಲ್ಲಿ ಬೈಲಹೊಂಗಲದಲ್ಲಿ ಕಿತ್ತೂರು ಚನ್ನಮ್ಮ ರಾಣಿ ಇತಿಹಾಸ ಮಂಡಲ ಸ್ಥಾಪನೆಯಾಗಿತ್ತು. ಅದರ ಉದ್ಘಾಟನೆ ಸಂದರ್ಭದಲ್ಲಿ ಬಸರೀಗಿಡದ ವೀರಪ್ಪನವರು ಆಗಮಿಸಿದ್ದರು.ಜೊತೆಗೆ ಆಶಯ ನುಡಿಗಳನ್ನಾಡಿ 1000 ರೂಪಾಯಿಗಳನ್ನು ಈ ಕಾರ್ಯಕ್ಕೆ ಕೊಡುವುದಾಗಿ ವಾಗ್ದಾನ ಮಾಡಿ ಆ ಕೂಡಲೇ 250 ರೂಪಾಯಿಗಳನ್ನು ನೀಡಿದ್ದರು.

ಈ ಮಂಡಳಿಯ ಕಾರ್ಯಾಧ್ಯಕ್ಷರು ತಲ್ಲೂರ ರಾಯನಗೌಡರು. ಇವರಿಬ್ಬರ ಸ್ನೇಹ ಮುಂದೆ ಕರ್ನಾಟಕ ಏಕೀಕರಣ ಹೋರಾಟದ ಸಮಯದಲ್ಲಿಯೂ ಮುಂದುವರೆದು ತಲ್ಲೂರ ರಾಯನಗೌಡರು ಬರೆದ ಕರ್ನಾಟಕದ ಗಡಿ ಗೆರೆಗಳು(ಪೂವಾರ್ಧ) ಕೃತಿಯ ಪ್ರಕಟಣೆಗೆ ಬಸರೀಗಿಡದ ವೀರಪ್ಪನವರು ಸಹಾಯ ನೀಡಿದರು.

ಅವರಿಬ್ಬರ ನಡುವೆ ಪತ್ರ ವ್ಯವಹಾರವೂ ಜರುಗಿತ್ತು. ಸ್ವಾತಂತ್ರ್ಯ ನಂತರ ಮುಂಬಯಿ ಸರಕಾರವು ರಸ್ತೆ ಸಾರಿಗೆಯನ್ನು ರಾಷ್ಟ್ರೀಕರಣ ಮಾಡುವ ಪ್ರಯತ್ನ ನಡೆಸಿತು. ಖಾಸಗೀ ಮೋಟಾರುಗಳ ಮಾಲೀಕರು ತಮ್ಮ ಸಾರಿಗೆ ಉದ್ಯೋಗವನ್ನು ನಿಲ್ಲಿಸಿ ಬೇರೆ ಉದ್ಯೋಗವನ್ನು ಹುಡುಕಿಕೊಳ್ಳುವ ಹೊತ್ತು ಬಂತು. ವೀರಪ್ಪನವರು ಈ ಯೋಜನೆ ಕುರಿತು ತಲ್ಲೂರು ರಾಯನಗೌಡರೊಂದಿಗೆ ಚರ್ಚಿಸಿದರು.ಇಟ್ಟಂಗಿ ಕಾರ್ಖಾನೆಯನ್ನು ಪ್ರಾರಂಭಿಸಿದರು. ಅದು ಒಗ್ಗುವುದಿಲ್ಲವೆಂದು ಕೈ ಬಿಟ್ಟರು.ಒಕ್ಕಲುತನಕ್ಕೆ ಬೇಕಾಗುವ ಪರಿಕರಗಳನ್ನು ಸಿದ್ಧಗೊಳಿಸುವ ಉದ್ಯೋಗ ನಡೆಸಿದರು. ಅದು ಕೂಡ ಸರಿ ಹೋಗದೇ ನಿಂತು ಹೋಯಿತು.

ಪ್ರಯೋಗಶೀಲರಾದ ವೀರಪ್ಪನವರಿಗೆ ಸುಮ್ಮನೆ ಕೂಡ್ರುವುದೆಂದರೆ ಆಗದು. ಆಗ ವೀರಪ್ಪನವರು ತಲ್ಲೂರು ರಾಯಗೌಡರೊಂದಿಗೆ ಒಂದು ಹೊಸ ಯೋಜನೆ ಕುರಿತು ಚರ್ಚಿಸಿದರು.ಅದನ್ನು ಕೇಳಿ ರಾಯನಗೌಡರು ಹೌಹಾರಿದರು. ಆದರೆ ವೀರಪ್ಪನವರು ಶಾಂತವಾಗಿ ಆತ್ಮವಿಶ್ವಾಸದಿಂದ ತಮ್ಮ ಕನಸಿನ ಯೋಜನೆ ಕುರಿತು ಕರ್ನಾಟಕದಲ್ಲಿ ಇದುವರೆಗೆ ಯಾರೂ ಮಾಡದ ದಂಧೆಯಾಗಿರುವ ಸಮುದ್ರ ಸಾರಿಗೆಯ ವ್ಯವಹಾರವನ್ನು ನಾವು ಯಾಕೆ ಕೈಗೊಳ್ಳಬಾರದು.? ಇದು ವೀರಪ್ಪನವರ ಪ್ರಶ್ನೆ.

ಇದೊಂದು ಹುಚ್ಚು ಸಾಹಸ.ನಗೆಗೀಡು ಆಗದಂತೆ ನಮ್ಮ ಜಾಳಿಗೆ ಬೀಸಬೇಕು. ಎಂದು ರಾಯನಗೌಡರೆಂದಾಗ ಅಂತಃಕರಣ ಶುದ್ಧವಿದ್ದರೆ ಪರಮಾತ್ಮನೂ ಅನುಗ್ರಹಿಸುತ್ತಾನೆ ಎಂದರು ಮತ್ತು ಮುಂದುವರಿದೆ ಮುಂದೆ ಕೆಲವೇ ದಿನಗಳಲ್ಲಿ ಕರ್ನಾಟಕ ಏಕೀಕರಣವಾಗುವುದು.ಆಗ ಕನ್ನಡಿಗರಿಗೆ ಮೂರು ನಾಲ್ಕು ಉತ್ತಮ ಬಂದರುಗಳು ದೊರೆಯುವವು. ಆಗ ಪರಪ್ರಾಂತದವರಿಗೆ ನಾವು ಬಾಡಿಗೆ ಕೊಡುವುದನ್ನು ಈಗಿನಿಂದಲೇ ಏಕೆ ತಪ್ಪಿಸಬಾರದು ಎಂದು ಕೇಳಿದರು.

ಪರದೇಶದಿಂದ ದೊಡ್ಡ ದೊಡ್ಡ ಹಡಗುಗಳು ಮಾಲು ಹೇರಿಕೊಂಡು ,ಮದರಾಸು,ಕರಾಚಿಯಂತಹ ದೊಡ್ಡ ಬಂದರುಗಳಲ್ಲಿ ಮಾಲು ಇಳಿಸಿ ಹೋಗುತ್ತವೆ. ಈ ಮಾಲು ದೇಶದ ಒಳ ಪೇಟೆಗಳಿಗೆ ರೈಲು ಮಾರ್ಗಗಳಲ್ಲಿಯೋ ರೋಡು ಮಾರ್ಗಗಳಲ್ಲಿಯೋ ಹೋಗುತ್ತಿರುತ್ತದೆ.

ಇಂತಹ ಮಾಲನ್ನು ಮುಂಬಯಿ ಬಂದರದಿಂದ ಮದರಾಸು ಬಂದರವರೆಗಿನ ಕರಾವಳಿ ಪ್ರದೇಶಗಳಿಗೆ ಮುಟ್ಟಿಸುವುದೇ ವೀರಪ್ಪನವರ ಸಮುದ್ರ ಸಾರಿಗೆಯ ಉದ್ದೇಶವಾಗಿದ್ದಿತು. ಆದುದರಿಂದ ಅವರ ಪ್ರತಿಯೊಂದು ಮಾತಿನಲ್ಲಿಯೂ ಉಗಿ ಹಡಗ ನಾವೆ ಮೊದಲಾದವುಗಳ ಯಾಂತ್ರಿಕ ಪರಿಜ್ಞಾನ ಪಡೆಯುವ ಹಂಬಲವೇ ಕಂಡು ಬರುತ್ತಿದ್ದಿತು.

ಈ ಸಾಹಸದ ಉದ್ಯಮದ ಅಭ್ಯಾಸಕ್ಕಾಗಿ ವೀರಪ್ಪನವರು ತಲ್ಲೂರ ರಾಯನಗೌಡರೊಂದಿಗೆ 1950 ನೆಯ ವರ್ಷದ ಮೇ 16 ನೆಯ ದಿನಾಂಕದಂದು ವಿಮಾನಮಾರ್ಗವಾಗಿ ಹೊರಟು ಲಂಡನ್ ತಲುಪಿದರು.
ಲಿವ್ಹರ್ ಪೂಲ್. ಹಲ್ ಮತ್ತು ಕಾರ್ಡಿಫ್ ಬಂದರುಗಳಲ್ಲಿ ಹಡಗು ನಿರ್ಮಿಸುವ ಕಾರ್ಯ ಪರಿಶೀಲಿಸುವುದನ್ನು ಅವರು ಮೊದಲೇ ಅಲ್ಲಿಗೆ ಬರೆದು ಗೊತ್ತು ಮಾಡಿಕೊಂಡಿದ್ದರು. ಲಂಡನ್ ನಗರದ ಉಪನಗರವಾದ ಅರ್ಲ್‍ಕೋರ್ಟ ಹತ್ತಿರ ಬ್ರಿಟಿಷ್ ಇಂಡಷ್ಟ್ರೀಯಲ್ ಫೇರ್ ಅನ್ನು ಅವರು ಸಾಗರೋತ್ತರ ಅತಿಥಿಗಳಾಗಿ ಮೂರು ದಿನಗಳವರೆಗೆ ಸಂದರ್ಶಿಸಿದರು.

ಬದುಕಿನ ಕೊನೆಯ ಘಟ್ಟ

ವೀರಪ್ಪನವರು ಹೆಬ್ಬಯಕೆಯಿಂದ ಲಂಡನ್ನಿಗೆ ಹೋಗಿದ್ದರು. ಆದರೆ ಅವರ ಬಯಕೆ ಈಡೇರದೆ ಮುರುಟುವ ಸಮಯವೊದಗಿತ್ತು. ಲಂಡನ್ನಿನ ತಂಪು ಹವೆ ಅವರ ಪುಪ್ಪುಸಗಳ ಮೇಲೆ ತೀವ್ರವಾದ ಪರಿಣಾಮ ಮಾಡಿ ಡಬಲ್ ನಿಮೋನಿಯಾಕ್ಕೆ ತುತ್ತಾದರು. ಲಂಡನ್ನಿನ ಆಸ್ಪತ್ರೆಗೆ ದಾಖಲಾದರು.

ಕೆಲವು ದಿನಗಳಲ್ಲಿ ಅವರ ಪುಪ್ಪಸದಲ್ಲಿ ಬೆಳೆದಿದ್ದ ಕ್ಯಾನ್ಸರನ್ನು ವೈದ್ಯರು ಕಂಡು ಹಿಡಿದಿದ್ದರು. ಆಗ ವೈದ್ಯರು ತಲ್ಲೂರ ರಾಯನಗೌಡರನ್ನು ಕರೆದು ನಿಮ್ಮ ಗೆಳೆಯನ ಜೀವ ಇನ್ನು ಹೆಚ್ಚು ಇರಲಾರದು. ಇಂತಹ ತಂಪು ಹವೆಯಲ್ಲಿ ಅಪರಿಚಿತ ನಾಡಿನಲ್ಲಿ ಸಂಚರಿಸುವುದು ತರವಲ್ಲ ಎಂದು ಹೇಳಿ ಒಂದೂವರೆ ವರ್ಷದ ಔಷಧೋಪಚಾರ ಬರೆದುಕೊಟ್ಟರು. ಇಪ್ಪತ್ತೊಂದು ದಿನ ಅಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೀರಪ್ಪನವರು ಭಾರತಕ್ಕೆ ಮರಳಿದರು. ಅವರ ಹಡಗು ಉದ್ಯಮದ ಬಯಕೆ ಕನಸಾಗಿಯೇ ಉಳಿಯಿತು.

ವೀರಪ್ಪನವರು ರೋಗಕ್ಕೆ ಹೆದರಲಿಲ್ಲ. ಸಾವಿಗೆ ಅಂಜಲಿಲ್ಲ.ವೀರಪ್ಪನವರು ಲಿಂಗೈಕ್ಯರಾಗುವದಕ್ಕೆ ಮೂರು ತಿಂಗಳ ಮುಂಚೆ ಚಿಕಿತ್ಸೆಗಾಗಿ ಪುಣೆಗೆ ಹೋಗಿದ್ದರು. ರೈಲುನಿಲ್ದಾಣದಲ್ಲಿ ಶ್ರೀ ಎಸ್ ನಿಜಲಿಂಗಪ್ಪನವರನ್ನು ಕಂಡರು. ಆಗ ವೀರಪ್ಪನವರು ಕರ್ನಾಟಕ ಏಕೀಕರಣವನ್ನು ಯಾವಾಗ ತರುತ್ತೀರಿ. ನಾನು ಇನ್ನೂ ಎಷ್ಟು ದಿನ ಹೀಗೆ ಇರಲಿ.?

(ಏಕೀಕರಣವಾಗುವವರೆಗೆ ಗಡ್ಡ ತಗೆಸುವುದಿಲ್ಲ ಎಂಬ ವಾಗ್ದಾನ ಮಾಡಿದ್ದರು) ಎಂದು ಕೇಳಿದರು. ನಿಜಲಿಂಗಪ್ಪನವರಿಗೆ ಶೂಲದಿಂದ ಇರಿದಂತಾಯಿತು. ಅವರ ಕಣ್ಣುಗಳು ತೇವಗೊಂಡವು. ಅವರು ಭಾರವಾದ ಹೃದಯದಿಂದ ಅಲ್ಲಿಂದ ಹೋದರು. ಸದಾ ಸಮಾಜದ ಚಿಂತನೆಯಲ್ಲಿ ಬದುಕುತ್ತಿದ್ದ ಜೀವವದು. ಸಾವು ಅವರನ್ನು ಮೆಟ್ಟಿ ಪಾವಿತ್ರ್ಯತೆ ಪಡೆದುಕೊಂಡಿತು. 7-3-1952 ರಂದು ವೀರಪ್ಪನವರು ಲಿಂಗದೊಳಗಾದರು.

ವೀರಪ್ಪನವರ ಮಾತು ಬರಿಯ ಮಾತಾಗಿರಲಿಲ್ಲ.ಕೆಲಸಕ್ಕೆ ಬಾರದ ಮಾತನ್ನು ಅವರು ಆಡುವ ಗೋಜಿಗೇ ಹೋಗುತ್ತಿರಲಿಲ್ಲ. ಪರೋಪಕಾರದ ಬದುಕು ಅವರದು.

ಕೊಡುಗೈದಾನಿ ವೀರಪ್ಪನವರು

ವೀರಪ್ಪನವರು ವಿವಿಧ ಸಂಘಸಂಸ್ಥೆಗಳಿಗೆ ನೀಡಿದ ದಾನಗಳು ಹಲವು. ಅವುಗಳಲ್ಲಿ ಮಹತ್ವವಾದ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಅಂದಿನ ಕಾಲದಲ್ಲಿ ಅವರ ಈ ನಿಸ್ವಾರ್ಥ ಕೊಡುಗೆ ಯಾವತ್ತೂ ಏನನ್ನೂ ಅಪೇಕ್ಷಿಸದೇ ತಮ್ಮ ದುಡಿಮೆಯ ಪರಿಶ್ರಮದಿಂದ ಪ್ರೀತಿಯಿಂದ ನೀಡಿದುದಾಗಿತ್ತು.

  • ಹುಬ್ಬಳ್ಳಿಯ ಭೂಮರಡ್ಡಿ ಇಂಜನೀಯರಿಂಗ್ ಕಾಲೇಜಿಗೆ 55.000 ರೂ. ನೀಡಿರುವರು.
  • ಬಸವೇಶ್ವರ ವಿದ್ಯಾವರ್ಧಕ ಸಂಘ ಬಾಗಲಕೋಟ ಇವರಿಗೆ 11.000 ರೂ.
  • ಗದುಗಿನ ಶಿವಾನಂದ ಮಠಕ್ಕೆ ಭೂಮಿ ದಾನ ಕೊಡಮಾಡಿದ್ದಾರೆ
  • ಬೆಳಗಾವಿಯ ನಾಗನೂರ ರುದ್ರಾಕ್ಷಿ ಮಠದ ದಾಸೋಹ ಕಟ್ಟಡಕ್ಕೆ 5151 ರೂ. ಕೊಡುಗೆ
  • ಗದುಗಿನ ಮಾಡೆಲ್ ಹೈಸ್ಕೂಲಿಗೆ 5000 ರೂ ಕಾಣಿಕೆ
  • ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ರೂ.5000 ಮತ್ತು ದೇವಸ್ಥಾನ ಕಟ್ಟಡ ಮುಗಿಯುವವರೆಗೆ ಕಮೀಟಿಯರು ಅಪೇಕ್ಷಿಸಿದ ಸಹಾಯ
  • ವಿಜಯಪುರ ಬಿ.ಎಲ್.ಡಿ.ಇ ಗೆ 5111 ರೂ ನೀಡಿರುವರು
  • ವೀರೇಶ್ವರ ಪುಣ್ಯಾಶ್ರಮ ಗದಗ ಕ್ಕೆ 2 ಎಕರೆ ಭೂಮಿ ಮತ್ತು ಕಟ್ಟಡಕ್ಕೆ 10.000 ರೂ
  • ಬಸವೇಶ್ವರ ಶಾಲೆ ಕಲಬುರ್ಗಿ ಇವರಿಗೆ 10.111 ರೂ. ದೇಣಿಗೆ
  • ರೋಣ ಎಸ್.ಎಫ್.ಪಾಟೀಲ ಹೈಸ್ಕೂಲ್ ಗೆ 5 ಎಕರೆ ಭೂಮಿ ದಾನ ಹಾಗೂ ಕಟ್ಟಡ ಕಟ್ಟಿಸಲು 10.000 ರೂ.
  • ಜಕ್ಕಲಿಯ ಕನ್ನಡ ಶಾಲೆ ಕಟ್ಟಡಕ್ಕೆ 5001 ರೂ.
  • ರೋಣದ ವೀರಭದ್ರೇಶ್ವರ ಹಾಗೂ ಹೊನ್ನೆತ್ತೆಮ್ಮನ ಗುಡಿಗೆ ದಾನ ನೀಡಿರುವರು
  • ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಅಂದಾಜು 25.000 ರೂ ಕೊಡುಗೆ
  • ಗಾಂಧೀಜಿ ನಿಧನರಾದಾಗ ಸ್ವತಃ ವೀರಪ್ಪನವರೇ ಅವರ ಅಂತ್ಯದ ಸ್ಥಳ ದೆಹಲಿಗೆ ಭೇಟಿ ನೀಡಿ ಅವರ ಚಿತಾಭಸ್ಮವನ್ನು ತಂದು ಅದನ್ನು ಪ್ರತಿಷ್ಠಾಪನೆ ಮಾಡಲು ತಮ್ಮ 2 ಎಕರೆ ಭೂಮಿ ದಾನಗೈದು ಅಲ್ಲಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ
  • ಕರ್ನಾಟಕ ಏಕೀಕರಣಕ್ಕೆ ವೀರಪ್ಪನವರಷ್ಟೇ ಅವರ ಧರ್ಮಪತ್ನಿ ಶ್ರೀಮತಿ ಅಯ್ಯವ್ವನವರೂ ಕೂಡ 25 ತೊಲಿ ಬಂಗಾರ ಮಾರಿ ಹೋರಾಟಗಾರರಿಗೆ ಸಹಾಯ ಹಸ್ತ ಚಾಚಿದ್ದಾರೆ. ಶ್ರೀಮತಿ ಅಯ್ಯವ್ವನವರೂ ತಮ್ಮ ಪತಿಯ ಸರ್ವಕಾರ್ಯಗಳಿಗೂ ಸಹಕಾರ ನೀಡಿದ್ದಾರೆ.
  • ಬಸರೀಗಿಡದ ವೀರಪ್ಪನವರ ಸ್ಮರಣೆಯಲ್ಲಿ

ಬಡತನದಲ್ಲಿ ಜನಿಸಿ ಬಡತನವೆಂಬ ವೈರಿಯನ್ನು ಅನುಭವದ ಮೂಸೆಯಲ್ಲಿ ಉಂಡು ಸಿರಿತನದ ಬದುಕನ್ನು ಪರಿಶ್ರಮದ ಮೂಲಕ ಹೊಂದಿದ ದಾನಶೂರ ವೀರಪ್ಪನವರು ಕನ್ನಡ ನಾಡಿನಲ್ಲಿ ಮರೆಯಲಾಗದ ಮಾಣಿಕ್ಯ. ಹಡಗು ಉದ್ಯಮದ ಕನಸು ಕಂಡ ಕನಸುಗಾರ ಕರ್ನಾಟಕ ಏಕೀಕರಣಕ್ಕೆ ತನು-ಮನ-ಧನದಿಂದ ದುಡಿದ ಧೀಮಂತ.

ಇಂತಹ ವ್ಯಕ್ತಿಯ ಸ್ಮರಣೆ ಇಂದಿಗೂ ತಮ್ಮ ಕುಟುಂಬದವರಿಂದ ಜರಗುತ್ತಿದ್ದುದು ಶ್ಲಾಘನೀಯ. ಅವರ ಪುಣ್ಯತಿಥಿಯನ್ನು ಪ್ರತಿ ವರ್ಷ ಮಾರ್ಚ 7 ರಂದು ಗದಗನಲ್ಲಿ ಅವರ ಮೊಮ್ಮಕ್ಕಳು ಮರಿಮೊಮ್ಮಕ್ಕಳು ಸೇರಿ ಪರಿಸರ ರಕ್ಷಣೆ.ಆರೋಗ್ಯ ಶಿಬಿರ.ನೇತ್ರ ತಪಾಸಣೆ.ಬಡ ಮತ್ತು ನಿರ್ಗತಿಕರಿಗೆ ಔಷಧೋಪಚಾರದಂತಹ ತಮ್ಮ ಮನೆಯ ಆವರಣದಲ್ಲಿ ವಿಶಿಷ್ಟ ಅತಿಥಿಗಳನ್ನು ಕರೆದು ವೇದಿಕೆಯಲ್ಲಿ ವೀರಪ್ಪಜ್ಜನವರನ್ನು ಸ್ಮರಿಸುತ್ತ ಕಾರ್ಯಕ್ರಮಗಳನ್ನು 2012 ರಿಂದ ಜರುಗಿಸುತ್ತ ಬಂದಿರುವುದು ನಿಜಕ್ಕೂ ಸ್ವಾಗತಾರ್ಹ.

ಸರಕಾರಿ ಪ್ರಥಮ ದರ್ಜೆ ಕಾಲೇಜು ಕಲಘಟಗಿ ಜಿಲ್ಲೆ ಧಾರವಾಡದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸ್ನೇಹಿತ ರವಿಶಂಕರ ಗಡಿಯಪ್ಪನವರ (ಶ್ರಾವಣ ಬ್ಲಾಗ್ ಸ್ಥಾಪಕರು) .ನನಗೆ ಪ್ರಕಾಶ ಬಸರೀಗಿಡದ ಅವರ ದೂರವಾಣಿ ಸಂಖ್ಯೆಯನ್ನು ಒದಗಿಸಿದರು.

ಇದು ನನಗೆ ಅವರ ಕುಟುಂಬದ ಸದಸ್ಯರು ಸದ್ಯದ ಸ್ಥಿತಿಯಲ್ಲಿ ವೀರಪ್ಪಜ್ಜನವರ ಕುರಿತು ನಡೆಯುತ್ತಿರುವ ಚಟುವಟಿಕೆಗಳನ್ನು ಹಂಚಿಕೊಳ್ಳಲು ಸಹಾಯಕವಾಯಿತು.ಬಸರೀಗಿಡದ ವೀರಪ್ಪನವರ ಮೊಮ್ಮಕ್ಕಳಲ್ಲಿ ಪ್ರಕಾಶ (ವಯಸ್ಸು 60) ಡಾ.ಸತೀಶ (ವಯಸ್ಸು 57) ,ಡಾ.ರಾಜೇಂದ್ರ (ವಯಸ್ಸು 56) ತಮ್ಮ ಕುಟುಂಬದ ಸದಸ್ಯರೊಂದಿಗೆ ಅಜ್ಜನವರ ನೆನಪನ್ನು ಉಳಿಸಿರುವರು.

ವೀರಪ್ಪಜ್ಜನವರ ಸ್ಮರಣೆ ಕುರಿತು ಶಾಂತರಸದ ಕೃತಿಯನ್ನು ಪ್ರಕಟಿಸಲು ದಾಸೋಹವನ್ನು ಕೂಡ ಇವರು ನೀಡಿದ್ದು ಸದ್ಯ ಇನ್ನೊಂದು ಬೃಹತ್ ಸಂಪುಟವನ್ನು ಆರು ನೂರು ಪುಟಗಳವರೆಗೆ ವಿಷಯವನ್ನು ಸಂಗ್ರಹಿಸಿ ಮುದ್ರಣ ಪೂರ್ಣಗೊಳಿಸಿದ್ದು ಕೋರೋನ ಸಲುವಾಗಿ ಬಿಡುಗಡೆ ಕಾರ್ಯಕ್ರಮ ಮುಂದೂಡಲಾಗಿದೆ.

ಇದೊಂದು ಬೃಹತ್ ಗ್ರಂಥವಾಗಿದ್ದು. ಖಚಿತ ಆಧಾರಗಳನ್ನು ಸಂಗ್ರಹಿಸಿದ್ದು ಮಹತ್ವದ ಸಂಗತಿಯಾಗಿದೆ. ಅಷ್ಟೇ ಅಲ್ಲದೇ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ.ದಾನರಡ್ಡಿಯವರ ಮಾರ್ಗದರ್ಶನದಲ್ಲಿ ಗಂಗೂಬಾಯಿ ಪವಾರ್ ಅವರು ವೀರೇಶ್ವರ ಪುಣ್ಯಾಶ್ರಮ ಕುರಿತು ಸಂಶೋಧನೆಯನ್ನು ಪೂರ್ಣಗೊಳಿಸಿದ್ದು ಅದರಲ್ಲಿ ಬಸರೀಗಿಡದ ವೀರಪ್ಪನವರ ಕುರಿತು ಉಲ್ಲೇಖಿಸಿರುವುದು ಸದ್ಯದ ಬೆಳವಣಿಗೆ.

ಇಷ್ಟೇ ಅಲ್ಲ ವೀರಪ್ಪನವರ ಕುರಿತು ಗಂಗಾಧರ ಶಾಸ್ತ್ರಿ ಚಿತ್ತರಗಿಯವರು ಬರಗಾಲ ಬಂಟ ಬಸರೀಗಿಡದ ವೀರಣ್ಣನವರ ಚರಿತ್ರೆ.ಪ್ರಕಾಶಕರು ವೀರೇಶ್ವರ ಪುಣ್ಯಾಶ್ರಮ ಗದಗ (1943). ವಿರುಪಾಕ್ಷಸ್ವಾಮಿ ಮುಧೋಳರ ಸಂಪಾದನೆ ಪುಣ್ಯಸ್ಮರಣೆ ಮತ್ತು ಎ.ಬಿ.ಮುತ್ತಾಳ. ಪ್ರಕಾಶಕರು ಕೈ.ವಾ.ಬಸರೀಗಿಡದ ವೀರಪ್ಪನವರ ಸ್ಮಾರಕ ಗ್ರಂಥ ಸಮಿತಿ ಕೊಪ್ಪಳ (ಜಿಲ್ಲಾ ರಾಯಚೂರು) 1956 ಕೃತಿಗಳು ಪ್ರಕಟವಾಗಿದ್ದು.

ಅವುಗಳ ಮೂಲಕ ಬಸರೀಗಿಡದ ವೀರಪ್ಪನವರ ಬದುಕಿನ ಚಿತ್ರಣವನ್ನು ನಾವು ಕಾಣಲು ಸಾಧ್ಯ. ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಇವರ ಕುರಿತು ಸಂಶೋಧನೆ ಜರುಗಬೇಕು. ಅಷ್ಟೇ ಅಲ್ಲ ಸಾರಿಗೆ ಕ್ಷೇತ್ರದ ಅವರ ಕೊಡುಗೆ ಸ್ಮರಿಸುವ ದಿನವನ್ನು ಸರ್ಕಾರದ ಮಟ್ಟದಲ್ಲಿ ಜರುಗುವಂತಾದರೆ ಅವರ ಸ್ಮರಣೆ ಸಾರ್ಥಕವಾದಂತಾಗುವುದರಲ್ಲಿ ಸಂದೇಹವಿಲ್ಲ.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-591117

RELATED ARTICLES

Most Popular

close
error: Content is protected !!
Join WhatsApp Group