ಕನ್ನಡ ಕನ್ನಡಿಯೊಳಗಿನ ಗಂಟಾಗಬಾರದು: ಹುಕ್ಕೇರಿಯ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
ಬೆಳಗಾವಿ: ಕನ್ನಡವನ್ನು ಕನ್ನಡಕ ಮಾಡಿಕೊಳ್ಳದೇ ಕಣ್ಣನ್ನಾಗಿ ಮಾಡಿಕೊಂಡು ಕನ್ನಡದ ಸೇವೆ ಮಾಡಬೇಕು. ಕನ್ನಡ ಕನ್ನಡಿಯೊಳಗಿನ ಗಂಟಾಗಬಾರದು. ಪ್ರತಿಯೊಬ್ಬ ಕನ್ನಡಿಗನು ಪೋಸ್ಟಮನ್ ಆಗಿ ಮನೆಮನೆಗಳಿಗೆ ಕನ್ನಡ ತಲುಪಿಸುವ ಕೆಲಸ ಮಾಡಬೇಕು ಎಂದು ಹುಕ್ಕೇರಿ-ಬೆಳಗಾವಿ ಗುರುಶಾಂತೇಶ್ವರ ಹಿರೇಮಠದ ಪೂಜ್ಯ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನಡಿಗರಿಗೆ ಕಿವಿಮಾತು ಹೇಳಿದರು.
ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆಯ ಕಾರ್ಯಕಾರಿ ಸಮಿತಿಗೆ ಧ್ವಜ ಹಸ್ತಾಂತರ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಕನ್ನಡಕ್ಕಾಗಿ ಕೈ ಎತ್ತುವದಷ್ಟೆ ಅಲ್ಲದೇ ಸಂದರ್ಭ ಬಂದರೆ ಕನ್ನಡಕ್ಕಾಗಿ ಜೀವವನ್ನು ಕೊಡಲು ಪಣ ತೊಡಬೇಕು. ಪುಣ್ಯದ ಬೀಡಾದ ನಮ್ಮ ಕನ್ನಡ ನಾಡು ನುಡಿ ಉಳಿಸಿ ಬೆಳಸುವುದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ನಾವುಗಳು ನಮ್ಮ ಬದುಕನ್ನು ಕನ್ನಡಕ್ಕಾಗಿ ಮೀಸಲಿಟ್ಟಾಗ ಮಾತ್ರ ನಮ್ಮ ನಾಡು-ನುಡಿ ರಕ್ಷಣೆ ಸಾದ್ಯವೆಂದು ಅವರು ಅಭಿಪ್ರಾಯ ಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಅಧ್ಯಕ್ಷೆಯಾಗಲು ಮತ್ತೊಂದು ಸಲ ಅವಕಾಶ ನೀಡಿದ್ದಕ್ಕಾಗಿ ಜಿಲ್ಲೆಯ ಎಲ್ಲಾ ಕಸಾಪ ಸದಸ್ಯರುಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಕನ್ನಡದ ಕೆಲಸ ಸೇವೆ ಅಂತಾ ತಿಳಿದುಕೊಂಡು ಕನ್ನಡ ಕಟ್ಟುವ ಕೆಲಸಕ್ಕೆ ಬದ್ಧರಾಗುವಂತೆ ಕನ್ನಡ ಮನಸ್ಸುಗಳಿಗೆ ಕರೆ ನೀಡಿದರು. ಬೆಳಗಾವಿ ಜಿಲ್ಲೆ ಗಡಿ ಜಿಲ್ಲೆಯಾಗಿರುವುದರಿಂದ ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಂತು ಸಹಕಾರ ನೀಡಿ ಕನ್ನಡದ ಚಟುವಟಿಕೆ, ಅಭಿವೃದ್ದಿ, ರಕ್ಷಣೆ ಕಾರ್ಯಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಗಳ ನೂತನ ಅಧ್ಯಕ್ಷರುಗಳಿಗೆ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಗೆ ಶಾಲು ಹೊದಿಸಿ ಕನ್ನಡದ ಕೊರಳು ಪಟ್ಟಿ ನೀಡಿ ಸನ್ಮಾನಿಸಿ ಕಸಾಪದ ಧ್ವಜ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದ ಮೊದಲಿಗೆ ಇತ್ತೀಚೆಗೆ ಅಗಲಿದ ನಾಡಿನ ಗಣ್ಯರಾದ ಚಂದ್ರಶೇಖರ ಪಾಟೀಲ್, ಬಸಲಿಂಗಯ್ಯ ಹಿರೇಮಠ, ಲತಾ ಮಂಗೇಶ್ಕರ, ಇಬ್ರಾಹಿಂ ಸುತಾರ, ಸುನೀತಾ ಮೊರಬದ, ಶ್ರೀನಿವಾಸ ಕುಲಕರ್ಣಿ ಇವರ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ಲತಾ ಮಂಗೇಶ್ಕರ ಹಾಡಿದ “ಏ ಮೇರೆ ವತನ ಕೇ ಲೋಗೋ” ಹಾಡನ್ನು ಶ್ರೀಮತಿ ಪ್ರತಿಭಾ ಕಳ್ಳಿಮಠ ಹಾಡಿ ಗಾನ ಶ್ರದ್ದಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ವೀರಣ್ಣ ಕಲ್ಲಪ್ಪ ಗಿರಿಮಲ್ಲಣವರ ರವರ ಸನ್ಮಾರ್ಗಿ ನೀನಾಗು “ವಚನಾಂಜಲಿ” ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಹಿರಿಯ ಸಾಹಿತಿ ಶ್ರೀಮತಿ ನೀಲಗಂಗಾ ಚರಂತಿಮಠ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು. ಕಸಾಪ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ಹಿರಿಯ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಅಕ್ಕಿ, ಡಾ. ಬಾಳಾ ಸಾಹೇಬ ಲೋಕಾಪುರೆ, ಬಿ.ವಿ.ನರಗುಂದ, ಡಾ.ಎಸ್.ಎಸ್.ಅಂಗಡಿ, ಪ್ರೊ.ಎಲ್.ವಿ.ಪಾಟೀಲ್, ಡಾ.ಹೆಚ್.ಬಿ.ಕೋಲಕಾರ, ಡಾ.ಹೆಚ್.ಆಯ್. ತಿಮ್ಮಾಪೂರ, ಬಾಲಶೇಖರ ಬಂದಿ, ಡಾ.ಸ್ಮೀತಾ ಸುರೇಬಾನಕರ, ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಶೈಲಜಾ ಬಿಂಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕನ್ನಡಿಗರು, ಗಣ್ಯರು ಪಾಲ್ಗೊಂಡಿದ್ದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ವೈ.ಮೆಣಶಿನಕಾಯಿ ಸ್ವಾಗತಿಸಿದರು. ಮಹಿಳಾ ಮಂಡಳದವರು ನಾಡಗೀತೆಯನ್ನು ಹಾಡಿದರು. ವೀರಭದ್ರ ಅಂಗಡಿ ವಂದಸಿದರು. ಪ್ರತಿಭಾ ಕಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು.