ಕಾಗವಾಡ: ನಗರದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರಾಯೋಜಿತ ಕನ್ನಡ ವಿಭಾಗ ವರಕವಿ ಶಬ್ದಗಾರುಡಿಗ ಡಾ. ದ. ರಾ. ಬೇಂದ್ರೆಯವರ ೪೩ನೇ ಪುಣ್ಯಸ್ಮರಣೆಯನ್ನು ಆಯೋಜಿಸಲಾಗಿತ್ತು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಲ್ಲಿಕಾರ್ಜುನ ಆಶ್ರಮ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪ್ರೊ ಬಿ ಎ ಪಾಟೀಲ ಅವರು ಬೇಂದ್ರೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬೇಂದ್ರೆಯವರು ಮರಾಠಿ ಮನೆತನದಿಂದ ಬಂದು ಕನ್ನಡ ಸಾಹಿತ್ಯದಲ್ಲಿ ಕವಿತೆಗಳನ್ನು ಬರೆಯುವುದರ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಎ ಕರ್ಕಿ ಬೇಂದ್ರೆಯವರು ಹುಟ್ಟಿದ್ದು ೧೮೯೬ ಜನವರಿ ೩೧ ಮರಣ ಹೊಂದಿದ್ದು ೧೯೮೧ ಅಕ್ಬೋಬರ ೨೬ ಈ ಮಧ್ಯದ ಅವಧಿಯಲ್ಲಿ ಅನೇಕ ರೀತಿಯ ಕಾವ್ಯಗಳನ್ನು ರಚಿಸಿದ್ದಾರೆ. ಬಡತನದಲ್ಲಿ ಬೆಂದು ಕವಿತ್ವವನ್ನು ಅರಳಿಸಿದ್ದು ಅವರ ಸಾಧನೆಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಎಂ.ಜಕ್ಕಣ್ಣವರ ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಬೇಂದ್ರೆಯವರು ೩೫ ಕ್ಕೂ ಹೆಚ್ಚು ಕಾವ್ಯ ಸಂಕಲನಗಳನ್ನು, ನಾಟಕ, ಹರಟೆ, ವಿಮರ್ಶೆ ಹಾಗೂ ಸಂಶೋಧನೆ ಕುರಿತಾಗಿ ವಿವಿಧ ಕೃತಿಗಳನ್ನು ರಚಿಸಿ ಕನ್ನಡ ಸಾರಸತ್ವವನ್ನು ಶ್ರೀಮಂತಗೊಳಿಸಿದ್ದಾರೆ. ಬಡತನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ್ದರೂ ಅವರೊಳಗಿನ ಕವಿ ಮಾತ್ರ ಯಾವಾಗಲೂ ಹೊಸದನ್ನೇ ಕೊಡವುದಕ್ಕೆ ಹಾತೊರೆಯುತ್ತಿದ್ದನು. ಬೇಂದ್ರೆಯವರೆ ಹೇಳಿದಂತೆ ‘ಎನ್ನ ಪಾಡೆನೆಗಿರಲಿ ಅದರ ಹಾಡನಷ್ಟೇ ನೀಡುವೆ ರಸಿಕ ನಿನಗೆ’ ಎಂದಿದ್ದಾರೆ. ಬೇಂದ್ರೆಯವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಮತ್ತು ಅವರ ಸಾಹಿತ್ಯವನ್ನು ಓದುವಂತೆ ಪ್ರೊತ್ಸಾಹಿಸುವುದು ಇವತ್ತು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಎಸ್.ಎಸ್.ಮೋರೆ ಸ್ವಾಗತಿಸಿ ಪರಿಚಯಿಸಿದರು, ಪ್ರೊ.ಟಿ.ವಿ.ಧಬಾಡೆ ವಂದಿಸಿದರು. ಪ್ರೊ.ಎಸ್.ಎಂ.ಪರಗೌಡಾ ನಿರೂಪಿಸಿದರು. ಉಪ ಪ್ರಾಚಾರ್ಯ ಡಾ.ಎಸ್.ಪಿ.ತಳವಾರ, ಐಕ್ಯೂಎಸಿ ಸಂಯೋಜಕರಾದ ಪ್ರೊ.ಬಿ.ಡಿ.ಧಾಮಣ್ಣವರ, ಪ್ರೊ.ಜೆ.ಕೆ.ಪಾಟೀಲ, ಪ್ರೊ.ಆರ್.ಎಸ್.ನಾಗರಡ್ಡಿ, ಪ್ರೊ.ಎ.ಟಿ.ಪಾಟೀಲ, ಪ್ರೊ.ಎ.ಆರ್.ಅಳಗೊಂಡಿ, ಡಾ.ಚಂದ್ರಶೇಖರ ವೈ ಪ್ರೊ.ಐ.ಎಸ್.ಜಮಾದಾರ, ಪ್ರೊ.ಎಸ್.ಎ.ಇನಾಮದಾರ, ಆರ್.ಆರ್.ಮಾಳಿ ಸೇರಿದಂತೆ ಇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.