ಸ್ಕೌಟ್ ಚಳವಳಿ 1907 ರಲ್ಲಿ ಇಂಗ್ಲೆಂಡ್ ನಲ್ಲಿ ಲಾರ್ಡ್ ಬೇಡನ್ ಪೊವೆಲ್ ಅವರು ಪ್ರಾರಂಭಿಸಿದ್ದು 1909 ರಲ್ಲಿ ಆಂಗ್ಲೋ ಇಂಡಿಯನ್ ಹುಡುಗರಿಗಾಗಿ, ನಂತರ 1917 ರಲ್ಲಿ ಭಾರತದಲ್ಲಿ ಪ್ರಾರಂಭವಾಯಿತು.
ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹಗಳನ್ನು ಕಲಿಯುವದರ ಜತೆಗೆ, ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೇಪಿಸಲಿರುವ ಕಾರ್ಯಕ್ರಮವೇ ಸ್ಕೌಟ್ ಮತ್ತು ಗೈಡ್ ಚಳವಳಿಯ ಮೂಲೋದ್ದೇಶ. ಪ್ರಕೃತಿಯ ಪರಿಸರದಲ್ಲಿ ನಿಂತ ಬೆಟ್ಟ, ಹರಿಯುವ ನದಿ, ಹಾರಾಡುವ ಹಕ್ಕಿ, ಅಡ್ಡಾಡುವ ಪ್ರಾಣಿಗಳು, ಸುಳಿಯುವ ಗಾಳಿ, ಇತ್ಯಾದಿಗಳನ್ನು ನೋಡಿ ಕಲಿಯುವ, ಅವುಗಳೊಡನೆ ಆಡಿ ನಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡು ಸ್ಕೌಟ್ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
1917ರ ಮಾರ್ಚ್ 21ರಂದು ಭಾರತದಲ್ಲಿ ದೇಶೀಯ ಮಕ್ಕಳಿಗೆ ಸ್ಕೌಟ್ ಚಳವಳಿ ಅಧಿಕೃತವಾಗಿ ಶುರುವಾಯಿತು. ರಾಷ್ಟ್ರೀಯ ನಾಯಕರಾದ ಪಂಡಿತ ಮದನ ಮೋಹನ ಮಾಳವೀಯ, ಪಂಡಿತ ಹೃದಯನಾಥ ಕುಂಜ್ರು ಮತ್ತು ಪಂಡಿತ ಶ್ರೀರಾಮ್ ಬಾಜಪೈ ಸೇರಿ ಸೇವಾ ಸಮಿತಿ ಸ್ಕೌಟ್ ಎಸೋಸಿಯೇಶನನ್ನು ಸ್ಥಾಪಿಸಿದರು. ಇದರ ಪ್ರಧಾನ ಕಛೇರಿ ಅಲಹಾಬಾದಿನಲ್ಲಿತ್ತು. ಜಾರ್ಜ್ ಎಸ್ ಅರುಂಡೇಲರ ಸಹಯೋಗದಲ್ಲಿ ಡಾ ಅನ್ನಿ ಬೆಸೆಂಟ್ ಚೆನ್ನೈಯಲ್ಲಿ ಸ್ಕೌಟ್ ಎಸೊಸಿಯೇಶನ್ ಫಾರ್ ಇಂಡಿಯನ್ ಬಾಯ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದರು. ಕ್ರಮೇಣ ದೇಶದ ನಾನಾ ಭಾಗಗಳಲ್ಲಿ ಅನೇಕ ತಂಡಗಳು ಹುಟ್ಟಿಕೊಳ್ಳಲಾರಂಭಿಸಿದವು. ಹುಡುಗರಿಗೆ ಸ್ಕೌಟ್ ಇದ್ದ ಹಾಗೆ ಹುಡುಗಿಯರಿಗೆ ಗೈಡ್ ಸಂಘಟನೆಗಳೂ ಆರಂಭವಾದವು. ಬಾಯ್ ಸ್ಕೌಟ್ಸ್ ಎಸೋಸಿಯೇಶನ್ ಆಫ್ ಇಂಡಿಯ, ಇಂಡಿಯನ್ ಬಾಯ್ ಸ್ಕೌಟ್ಸ್ ಎಸೋಸಿಯೇಶನ್, ಹಿಂದುಸ್ತಾನ್ ಸ್ಕೌಟ್ಸ್ ಎಸೋಸಿಯೇಶನ್, ದ ಗರ್ಲ್ಸ್ ಗೈಡ್ ಎಸೋಸಿಯೇಶನ್, ಮೊದಲಾದ ಅನೇಕ ಸಂಘಟನೆಗಳು ಹುಟ್ಟಿಕೊಂಡವು.
1921 ಮತ್ತು 1937 ರಲ್ಲಿ ಪೊವೆಲರು ಭಾರತಕ್ಕೆ ಭೇಟಿ ನೀಡಿದಾಗ ಇಲ್ಲಿದ್ದ ಎಲ್ಲಾ ಸ್ಕೌಟ್ ಸಂಘಟನೆಗಳನ್ನು ಒಂದುಗೂಡಿಸಲು ಪ್ರಯತ್ನಿದರು. ಆದರೆ ಅವರಿಗೆ ಇದರಲ್ಲಿ ಸಫಲತೆ ದೊರೆಯಲಿಲ್ಲ. ಇದಕ್ಕೆ ಈ ಚಳವಳಿಯ ಒಂದು ಮುಖ್ಯ ಅಂಗವಾದ ಪ್ರಮಾಣ ವಚನದಲ್ಲಿ “ಚಕ್ರವರ್ತಿಗೆ ಕರ್ತವ್ಯಬದ್ಧರಾಗಿರುವೆವು” ಎಂಬ ವಾಕ್ಯಾಂಶ ಕಾರಣವಾಗಿತ್ತು. ರಾಷ್ಟ್ರಾಭಿಮಾನಿ ನಾಯಕರಲ್ಲಿದ್ದ ದೇಶಭಕ್ತಿಭಾವನೆಗಳು ಬ್ರಿಟಿಶ್ ಚಕ್ರಾಧಿಪತ್ಯಕ್ಕೆ ವಿಧೇಯತೆಯನ್ನು ತೋರುವದನ್ನು ಒಪ್ಪಲಿಲ್ಲ. ಬದಲು “ಭಾರತಮಾತೆಗೆ ನಿಷ್ಠೆಯಿಂದ ವಿಧೇಯರಾಗಿರುವೆವು” ಎಂಬ ವಾಕ್ಯಾಂಶವನ್ನು ಸೇರಿಸುವ ಒತ್ತಾಯ ಮಾಡಲಾಯಿತು.
ಸ್ವಾತಂತ್ರ್ಯದ ನಂತರ 1950ರ ನವಂಬರ್ 7 ರಂದು ಈ ಎಲ್ಲಾ ಸಂಘಟನೆಗಳನ್ನು ಒಟ್ಟುಗೂಡಿಸಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ರೂಪುಗೊಂಡಿತು. ಅದರ ನೆನಪಿಗಾಗಿ ಸ್ಕೌಟ್ ಚಳವಳಿಯ ವಿವಿಧ ಹೆಸರು, ಸಂಘಟನೆಗಳು ಒಂದಾಗಿ “ಭಾರತ್ ಸ್ಕೌಟ್ ಗೈಡ್ ಸಂಸ್ಥೆ” ಎಂಬುದಾಗಿ ಕರೆಯಲ್ಪಟ್ಟ ದಿನ ನವೆಂಬರ್ 7 ಆಗಿದ್ದು “ಸಂಸ್ಥಾಪನಾ ದಿನವನ್ನಾಗಿ, ಭಾರತ್ ಸ್ಕೌಟ್ ಧ್ವಜ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಸ್ತುತ ವಿಶ್ವದ 216 ರಾಷ್ಟ್ರಗಳಲ್ಲಿ, ಪ್ರಾಂತಗಳಲ್ಲಿ 55 ದಶಲಕ್ಷಕ್ಕೂ ಹೆಚ್ಚು ಸಮವಸ್ತ್ರಧಾರಿಗಳನ್ನು ಒಳಗೊಂಡಿರುವ ಅತಿದೊಡ್ಡ ಸಂಸ್ಥೆಯಾಗಿದೆ.
ಬನ್ನಿ, ಸ್ಕೌಟ್ ಚಳವಳಿಗೆ ಹೆಚ್ಚು ಹೆಚ್ಚು ಸೇರುವ ಮೂಲಕ ಶಿಸ್ತುಬದ್ಧ ಸಾರ್ಥಕ ಜೀವನ ಮಾಡೋಣ. ಭುವಿಯ ಮೇಲಿನ ಬದುಕಿಗೆ ಪರಿಸರದೊಂದಿಗೆ ರಾಜಿಯಾಗೋಣ. ಆ ಮೂಲಕ ವಿಶ್ವ ಮಾನವರಾಗೋಣ.
ಸಂ: ಸಂತೋಷ್ ಬಿ ಪಿ ( ಬಿದರಗಡ್ಡೆ)
ಸ್ಕೌಟ್ ಮಾಸ್ಟರ್, GHPS ಕಿರವಾಡಿ ತಾ:ಹಾನಗಲ್ಲ ಜಿ: ಹಾವೇರಿ