ಬೀದರ: ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಇಂದು ಬಿಜೆಪಿ ವತಿಯಿಂದ ಬೃಹತ್ ಜನಾಶೀರ್ವಾದ ಯಾತ್ರೆ ನಡೆಯಿತು.
ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿ, ವೃತ್ತಗಳು ಬಿಜೆಪಿ ಧ್ವಜ ಹಾಗೂ ಕಟೌಟಗಳಿಂದ ರಾರಾಜಿಸುತ್ತಿದ್ದವು.
ಪಟ್ಟಣದ ಪ್ರಮುಖ ರಾಷ್ಟ್ರೀಯ ಹೆದ್ದಾರಿ 65ಕ್ಕೆ ಹೊಂದಿಕೊಂಡ ಚಿದ್ರ ಬೈಪಾಸ ಮತ್ತು ಕೆಇಬಿ ಬೈಪಾಸನಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ 200ಕ್ಕೂ ಅಧಿಕ ಕಟೌಟ್, 50ಸ್ವಾಗತ ಕಮಾನು ಅಳವಡಿಸಲಾಗಿದೆ.
ಮಾಣಿಕನಗರ ಕ್ರಾಸ್ ಹತ್ತಿರದಿಂದ ಪ್ರಮುಖ ಮಾರ್ಗಗಳ ಮೂಲಕ ಕೇಂದ್ರ ಸಚಿವ ಭಗವಂತ ಖೂಬಾ, ಶೋಭಾ ಕರಂದ್ಲಾಚೆ ಸೇರಿದಂತೆ ಪ್ರಮುಖ ನಾಯಕರ ಭವ್ಯ ಮೆರವಣಿಗೆ ಮತ್ತು ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮ, ಉಸ್ತುವಾರಿಯನ್ನು ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ ಸಹೋದರ ಸಿದ್ದು ಪಾಟೀಲ ವಹಿಸಿಕೊಂಡಿದ್ದರು. ಅಣ್ಣನನ್ನು ಧಿಕ್ಕರಿಸಿ ಬಿಜೆಪಿ ಪಕ್ಷಕ್ಕೆ ಸೇರಿದ ಸಿದ್ದು ಪಾಟೀಲ ಹುಮನಬಾದ ಕ್ಷೇತ್ರದ ಮುಂದಿನ ವಿಧಾನ ಸಭಾ ಟಿಕೆಟ್ ಆಕಾಂಕ್ಷೆ ಹೊಂದಿದ್ದು ಈ ಕಾರಣಕ್ಕೆ ಅಣ್ಣ ಮುಂದೆ ತಮ್ಮ ಶಕ್ತಿ ಪ್ರದರ್ಶನ ನಡೆಸಲು ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಚೆ ಮತ್ತು ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಸಚಿವ ಪ್ರಭು ಚವ್ಹಾಣ ಶಕ್ತಿ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.
ಮುಂದುವರೆದ ಕೊರೋನಾ ನಿಯಮ ಉಲ್ಲಂಘನೆ
ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೊರೋನಾ ನಿಯಮ ಪಾಲನೆಗೆ ಸಾಕಷ್ಟು ಹೇಳುತ್ತಿದ್ದರೂ ಕೇಂದ್ರ ಸಚಿವರಿಂದ ಕರೋನಾ ನಿಯಮ ಉಲ್ಲಂಘನೆ ಮುಂದುವರೆದೇ ಇದೆ.
ಜನಾಶಿರ್ವಾದ ಹೆಸರಿನಲ್ಲಿ ಮತ್ತೆ ಬೃಹತ್ ರ್ಯಾಲಿ ನಡೆಸಿದ್ದು ಜನರಿಗೆ ತಿಳಿ ಹೇಳಬೇಕಾದವರೇ, ಕೇಂದ್ರ ಸಚಿವ ಭಗವಂತ್ ಖೂಬಾ ಅವರೆ ನಿಮಗೆ ಪ್ರಜ್ಞೆ ಇಲ್ವಾ..? ಎಂದು ಜನತೆ ಪ್ರಶ್ನಿಸುವಂತಾಗಿದೆ.
ಇದರಿಂದ ಕೊರೊನಾ ಮುಕ್ತ ಜಿಲ್ಲೆಯಾಗಿದ್ದ ಬೀದರ್ ನಲ್ಲಿ ಮತ್ತೆ ಕರೋನಾ ಆತಂಕ ಮೂಡಿದಂತಾಗಿದೆ.
ಕೇಂದ್ರ ಸಚಿವರ ರ್ಯಾಲಿಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್ ಭಾಗಿಯಾಗಿದ್ದು ಮಹಾರಾಷ್ಟ್ರ ಗಡಿಭಾಗದ ಕೂಗಳತೆ ದೂರಲ್ಲಿರುವ ಹುಮನಾಬಾದ್ ನಲ್ಲಿ ಇಷ್ಟು ಬೃಹತ್ ಮಟ್ಟದಲ್ಲಿ ರ್ಯಾಲಿ ನಡೆಯುತ್ತಿದ್ದರು ಕೈ ಕಟ್ಟಿ ಕುಳಿತಿದೆಯಾಕೆ ಪೊಲೀಸ್ ಇಲಾಖೆ..? ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೇಂದ್ರ ಹಾಗೂ ರಾಜ್ಯ ಸಚಿವರ ಕೈಗೊಂಬೆಯಾಗಿದೆಯಾ…? ಎಂಬ ಅನೇಕ ಪ್ರಶ್ನೆಗಳಿಗೆ ಯಾರು ಉತ್ತರ ಕೊಡುವರೋ ಎನ್ನಬೇಕಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ,ಬೀದರ