ಬೆಂಗಳೂರು – ಕನ್ನಡದ ಸಾಕುತಂದೆ, ಕನ್ನಡದ ಕಣ್ವ, ಇಂಗ್ಲಿಷ್ ಪ್ರಾಧ್ಯಾಪಕರಾದರೂ ಸಹ ಕನ್ನಡ ಕಟ್ಟುವ ಮೂಲಕ ಇತಿಹಾಸದಲ್ಲಿ ಮರೆಯಲಾಗದ ರೀತಿಯ ಸಾಹಿತ್ಯವನ್ನು ಬರೆದವರು ಬಿ ಎಂ ಶ್ರೀಕಂಠಯ್ಯ. ಅವರ ಜನಪ್ರಿಯ ಭಾವಗೀತೆಗಳು ಕನ್ನಡದ ಹಿರಿಮೆ ಗರಿಮೆಯನ್ನು ಹೆಚ್ಚಿಸಿವೆ. ಕನ್ನಡದ ಸೇನಾನಿ ಕನ್ನಡಪರ ಹೋರಾಟಕ್ಕೆ ಶಕ್ತಿ ತುಂಬಿದ ಮಹಾ ವ್ಯಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು, ಬಿಎಂಶ್ರೀ ಪ್ರತಿಷ್ಠಾನ, ಬೆಂ ನಗರ ಜಿಲ್ಲಾ ಕಸಾಪ ಸಂಯುಕ್ತಾಶ್ರಯದಲ್ಲಿ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಇಂದು (೩-೧-೨೦೨೨) ಆಯೋಜಿಸಿದ್ದ ಬಿಎಂಶ್ರೀ ಅವರ 137ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದ ಭಾಷೆಗೆ ಕುತ್ತು ಬಂದರೆ ನಾನು ಕನ್ನಡದ ಕಾವಲು ನಾಯಿ ಎಂದು ತಮ್ಮನ್ನು ತಾವು ಕರೆದುಕೊಂಡವರು ಬಿ ಎಂ ಶ್ರೀಕಂಠಯ್ಯ. ಬೇರೆ ಭಾಷೆಯಿಂದ ಕನ್ನಡದ ಬೆಳವಣಿಗೆಗೆ ಅಡ್ಡಿ-ಆತಂಕಗಳು ಸುಳಿಯಬಾರದು ಎಂಬುದು ಬಿ ಎಂ ಶ್ರೀ ಅವರ ಅಭಿಲಾಷೆಯಾಗಿತ್ತು. ಕನ್ನಡ ಭಾಷೆಯನ್ನು ಶ್ರೀಮಂತ ಭಾಷೆಯನ್ನಾಗಿ ಬೆಳೆಸಿ ಕನ್ನಡ ಭಾಷೆಯ ಸಾರ್ವಭೌಮತ್ವವನ್ನು ಸಾರಿದ ಘನತೆ ಬಿಎಂ ಶ್ರೀ ಅವರಿಗೂ ಸಲ್ಲುತ್ತದೆ ಎಂದು ಕನ್ನಡಪರ ಚಿಂತಕರಾದ ಡಾ. ಪಿ ವಿ ನಾರಾಯಣ ಅಭಿಪ್ರಾಯಪಟ್ಟರು.
ಕನ್ನಡ ಚಳವಳಿಯನ್ನು ಮೊಟ್ಟಮೊದಲು ಆರಂಭಿಸಿ ಕನ್ನಡ ಭಾಷೆಯ ರಕ್ಷಣೆಗೆ ಹೋರಾಟ ಮಾಡಿದ ಮೊದಲಿಗರು ಬಿ ಎಂ ಶ್ರೀಕಂಠಯ್ಯ. ಸದಾಕಾಲ ಭಾಷೆಯ ಉಳಿವಿಗಾಗಿ ಶ್ರಮಿಸಿದರು ಎಂದು ಬಿಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂ ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ, ಕೇಂದ್ರ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ ಭ ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ ಎಂ ಪಟೇಲ್ ಪಾಂಡು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿಎಂಶ್ರೀ ಅವರು ರಚಿಸಿದ ಹಾಡುಗಳನ್ನು ಸವಿಗಾನ ಮಂಜು ತಂಡದವರು ಹಾಡಿದರು