ಬೆಂಗಳೂರು : ನಾಯಂಡ ಹಳ್ಳಿಯ ರಿಂಗ್ ರಸ್ತೆಯಲ್ಲಿ ಜನವೋ ಜನ, ಸುಮಾರು 85 ರಿಂದ 100 ಜನ, ಎಲ್ಲೆಲ್ಲೂ ಗದ್ದಲ.. ಏನಾಯ್ತು ಎಂದು ಅಲ್ಲಿಯೇ ನಿಂತ ಜನರ ಬಳಿ ಕೇಳಿದಾಗ, ಸುಮಾರು 1 ಗಂಟೆಯಿಂದ ಬಸ್ ಇಲ್ಲ, ಬನಶಂಕರಿ, ಜನತಾ ಬಜಾರ್ , ಕತ್ರಿಗುಪ್ಪೆ , ಕಾಮಾಕ್ಯ ಕಡೆಗೆ ಹೋಗಲು ಬಸ್ಸೆ ಇಲ್ಲದೆ ಪರದಾಡುತ್ತ ನಿಂತಿದ್ದರು ಜನ !
ಸುಮಾರು ಮೂರು ಬಸ್ ಗೆ ಆಗುವಷ್ಟು ಜನ ಇಲ್ಲಿ ನಾವು ನಿಂತಿದ್ದೇವೆ ಆದರೆ ಬಸ್ಸು ಬರುತ್ತಿಲ್ಲ, ವೃದ್ಧರು, ಹಿರಿಯರು, ಕಿರಿಯರು, ಕೆಲಸಕ್ಕೆ ಹೋಗುವವರು, ಮನೆಗೆ ಮರಳುವ ಮಹಿಳೆಯರು… ಒಂದು ಗಂಟೆಗಿಂತಲೂ ಹೆಚ್ಚು ಕಾಲದಿಂದ ಬಸ್ಸಿಗಾಗಿ ಕಾಯಿತ್ತಿದ್ದೇವೆ ಎಂದು ಬಿ.ಎಂ.ಟಿ.ಸಿ ಬಸ್ ಗೆ ಹಿಡಿ ಶಾಪ ಹಾಕುತ್ತಾ ನಿಂತಿದ್ದರು.
ಅಂತೂ ಇಂತೂ ಸುಮಾರು 1 ತಾಸು ಕಳೆದ ಬಳಿಕ ಬಸ್ಸು ಬಂತು. ಮೂರು ಬಸ್ಸುಗಳಿಗೆ ಆಗುವ ಪ್ರಯಾಣಿಕರು ಒಮ್ಮೆಲೆ ಬಸ್ಸಿನತ್ತ ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಗಿ ಹರಸಾಹಸ ಪಟ್ಟು ಕೆಲವರು ಬಸ್ ಹತ್ತಿದರೆ , ಕೆಲವರು ಬಸ್ ಹತ್ತಲು ಆಗದೆ ನಡು ರಸ್ತೆಯಲ್ಲಿ ಹತಾಶರಾಗಿ ನಿಲ್ಲಬೇಕಾಯಿತು.
ಮೂಲಭೂತ ಸೌಕರ್ಯಗಳ ಕೊರತೆ
ಸರಕಾರ ಮಹಿಳೆಯರಿಗೆ ಬಸ್ ಫ್ರೀ ಮಾಡಿದ್ದರಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಸರಿಯಾದ ವೇಳೆಗೆ ಬಸ್ಸು ಬರುತ್ತಿಲ್ಲ, ಬಂದರೂ ವೃದ್ಧರು, ಮಕ್ಕಳಿಗೆ ತೊಂದರೆಯಾಗುತ್ತಿದೆ. ಇತ್ತ ಬಸ್ ಸ್ಟಾಪ್ ಗಳಲ್ಲೂ ಮೂಲಭೂತ ಸೌಲಭ್ಯಗಳ ಕೊರತೆ….
ಇವೆಲ್ಲರ ನಡುವೆ ವೊಲ್ವೋ ಬಸ್ಸು ಬಂದಿತ್ತು ಬಸ್ಸು ಕಾದು ಕಾದು ಸುಸ್ತು ಆಗಿದ್ದು ಜನ volvo ಬಸ್ ಗೆ ಹಣ ಕೊಟ್ಟು ಪ್ರಯಾಣ ಆರಂಭ ಮಾಡಿದ್ದರು , ತಿಂಗಳು ಪೂರ್ತಿ ಓಡಾಡಲು ರೂಪಾಯಿ 1050/- ಕೊಟ್ಟು ತೆಗೆದುಕೊಂಡ ಬಸ್ ಪಾಸ್ ವ್ಯರ್ಥವಾಗಿ… ವೊಲೋವೋ ಬಸ್ ಗೆ ಹೆಚ್ಚಿನ ದುಡ್ಡು ಕೊಟ್ಟು ಪ್ರಯಾಣಿಸಬೇಕಾಯಿತು.
ಇದಕ್ಕೆಲ್ಲ ಸಾಲಾಗಿ ಬಂದ ರಜಾ ದಿನಗಳೇ ಕಾರಣವೇ ? ಭಾನುವಾರ ರಜೆ, ಸೋಮವಾರ ಗಾಂಧೀ ಜಯಂತಿ…ಹೀಗೆ ಸಾಲಾಗಿ ರಜಾ ದಿನಗಳು ಇದ್ದಿದ್ದರಿಂದ ಬಸ್ಸುಗಳು ತುಂಬಿ ತುಳುಕುತ್ತಿವೆ. ಸಿಟಿ ಬಸ್ ಗಳು ಅಲ್ಲದೆ ಹೊರ ಊರಿಗೆ ತೆರಳುವ ಬಸ್ಸುಗಳೂ ಜನರಿಂದ ತುಂಬಿ ತುಳುಕುತ್ತಿದ್ದು ಈ ಎಲ್ಲ ಸಮಸ್ಯೆಗೆ ಬಿಎಮ್ ಟಿಸಿ ಹಾಗೂ ರಾಜ್ಯ ಸರ್ಕಾರ ಪರಿಹಾರ ಹುಡುಕಬೇಕಾಗಿದೆ.
ಚಿತ್ರ : ಬರಹ –
ತೀರ್ಥಹಳ್ಳಿ ಅನಂತ ಕಲ್ಲಾಪುರ