ಮೈಸೂರು -ನಗರದ ರಾಮಕೃಷ್ಣನಗರದಲ್ಲಿರುವ ಸ್ವರಾಲಯ ಸಂಗೀತ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಜ.೧೯ರಂದು ಭಾನುವಾರ ಮಧ್ಯಾಹ್ನ ೩ ಗಂಟೆಗೆ ಜಯಲಕ್ಷ್ಮಿ ಪುರಂನಲ್ಲಿರುವ ಮಹಾಜನ ಎಜುಕೇಷನ್ ಸೊಸೈಟಿ ಅಲ್ಯೂಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಜ್ಯೂನಿಯರ್ ವಿಭಾಗದ ಪ್ರಶ್ನೋತ್ತರ ಪತ್ರಿಕೆಗಳ ಪುಸ್ತಕ ಬಿಡುಗಡೆ ಸಮಾರಂಭ, ಸಂಗೀತ ಚಿಕಿತ್ಸೆಯ ಪ್ರಾತ್ಯಕ್ಷಿಕೆ ಹಾಗೂ ಶ್ರೀ ತ್ಯಾಗರಾಜ ಹಾಗೂ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ನಿವೃತ್ತ ಎಸ್ಬಿಎಂ ವ್ಯವಸ್ಥಾಪಕ ಹಾಗೂ ವಕೀಲ ಎಂ.ವೈ.ಕುಮಾರ್ ಅವರು ಉದ್ಘಾಟಿಸಿ, ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಕಲಾವಿದೆ ನಾಗರತ್ನ ಕೆ. ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸ್ವರಾಲಯ ಸಂಗೀತ ಸಂಸ್ಥೆ ಅಧ್ಯಕ್ಷೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವಿದುಷಿ ಡಾ.ಸುಮ ಹರಿನಾಥ್ ವಹಿಸಲಿದ್ದಾರೆ. ಸ್ವಾಗತ ನೃತ್ಯವನ್ನು ಸಂಸ್ಥೆ ಸದಸ್ಯರಾದ ಕು. ಅನಘ ಜಿ. ಹಾಗೂ ಕು.ಸಾನ್ವಿ ಎಂ.ವಿ. ಪ್ರಸ್ತುತಪಡಿದಲಿದ್ದಾರೆ. ವೇದಿಕೆ ಕಾರ್ಯಕ್ರಮದ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಿಳ್ಳಾರಿ ಗೀತೆ ಹಾಗೂ ಪಂಚರತ್ನ ಕೃತಿಗಳ ಗಾಯನವನ್ನು ಸಂಸ್ಥೆ ಪದಾಧಿಕಾರಿಗಳು ಹಾಗೂ ಸ್ಥಳೀಯ ವಿದ್ವಾಂಸರು ನೆರವೇರಿಸಲಿದ್ದಾರೆ ಇವರಿಗೆ ವಯೋಲಿನ್ನಲ್ಲಿ ವಿದ್ವಾನ್ ಸಿ.ಚೇತನ್ ಹಾಗೂ ಮೃದಂಗದಲ್ಲಿ ವಿದ್ವಾನ್ ವಿ.ಶ್ಯಾಮ್ ವಾದ್ಯ ಸಹಕಾರ ನೀಡಲಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ ಹೆಚ್.ಎಸ್.ಶ್ರೀಕಾಂತಾಮಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.