ಮೂಡಲಗಿ: ಮೂಡಲಗಿಯ ವೀರಶೈವ ಲಿಂಗಾಯತ ಮತ್ತು ರಾಷ್ಟ್ರೀಯ ಬಸವದಳ ಹಾಗೂ ಪಟ್ಟಣದ ವಿವಿಧ ಸಮಾಜ ಸಂಘಟನೆ ಸಹಯೋಗದಲ್ಲಿ ಸೋಮವಾರ ಸಂಜೆ ಬಸವ ಜಯಂತಿ ಅಂಗವಾಗಿ ಎತ್ತುಗಳ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಬೆಳಗಾವಿಯ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಜಿ. ಢವಳೇಶ್ವರ ಬಸವ ಜಯಂತಿ ಹಾಗೂ ಎತ್ತುಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ‘ಭೂಮಿಯಲ್ಲಿ ದುಡಿಯುವ ಎತ್ತುಗಳನ್ನು ರೈತರು ಬಸವಣ್ಣನ ರೂಪದಲ್ಲಿ ಪೂಜಿಸಿ, ಅವುಗಳಲ್ಲಿ ದೇವರನ್ನು ಕಾಣುವ ಶ್ರೇಷ್ಠ ಸಂಸ್ಕೃತಿ ಭಾರತದ್ದಾಗಿದೆ. ಎತ್ತುಗಳು ರೈತರಿಗೆ ದೈವಸ್ವರೂಪಿಗಳಾಗಿವೆ’ ಎಂದರು.
ಮೂಡಲಗಿಯಲ್ಲಿ ಬಸವ ಜಯಂತಿಯಂದು ಜೋಡು ಎತ್ತುಗಳ ಮೆರವಣಿಗೆಯನ್ನು ಹಲವಾರು ದಶಕಗಳಿಂದ ಮಾಡುತ್ತಿದ್ದು, ಈ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಬಸವೇಶ್ವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು. ಅಲಂಕೃತಗೊಂಡ 20 ಜೋಡು ಎತ್ತುಗಳು ಹಾಗೂ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.
ಆರ್.ಪಿ. ಸೋನವಾಲಕರ, ಬಸವರಾಜ ಪಾಟೀಲ, ಶಂಕರೆಪ್ಪ ತಾಂವಶಿ, ಬಿ.ವೈ. ಶಿವಾಪುರ, ರುದ್ರಪ್ಪ ವಾಲಿ, ಕೆ.ಟಿ. ಗಾಣಿಗೇರ, ಶಿವಬಸು ನೀಲಣ್ಣವರ, ಡಾ. ಬಸವರಾಜ ಪಾಲಭಾವಿ, ಎಸ್.ಆರ್. ಸೋನವಾಲಕರ, ಶಿವಾನಂದ ಗಾಡವಿ, ಈರಯ್ಯ ಹಿರೇಮಠ ಮತ್ತಿತರರು ಇದ್ದರು.