ಮೂಡಲಗಿ – ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗಲೇ ಅರಭಾವಿ ಕ್ಷೇತ್ರದ ಶಾಸಕರಿಗೆ ನೆರೆ ಸಂತ್ರಸ್ತರ ಮೇಲೆ ಪ್ರೀತಿ ಉಕ್ಕಿ ಹರಿದಿದ್ದು ಮೂರು ತಿಂಗಳಲ್ಲಿ ಮನೆ ಕೊಡಿಸುವುದಾಗಿ ಹೇಳಿದ್ದಾರೆ. ಮೂರು ವರ್ಷಗಳಲ್ಲಿ ಸಿಗದ ಮನೆ ಮೂರು ತಿಂಗಳಲ್ಲಿ ಸಿಗುತ್ತದೆಯಾ ಎಂದು ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ಮುಖಂಡ ಗುರು ಗಂಗನ್ನವರ ಕೇಳಿದರು.
ಕಳೆದ ಭಾನುವಾರ ಗೋಕಾಕ ತಾಲೂಕಿನ ತಳಕಟ್ನಾಳ ಗ್ರಾಮದಲ್ಲಿ ಶಾಸಕರು ಮಾತನಾಡುತ್ತ ಬಾಕಿ ಉಳಿದಿರುವ ನೆರೆ ಸಂತ್ರಸ್ತರಿಗೆ ಮನೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ೨೦೧೯ ರಲ್ಲಿ ಪ್ರವಾಹ ಬಂದು ಮನೆ ನಾಶವಾಗಿ ಸಂತ್ರಸ್ತರಾದ ಕೆಲವರಿಗೆ ಇನ್ನೂ ಮನೆ ಸಿಕ್ಕಿಲ್ಲವೆಂಬುದನ್ನು ಒಪ್ಪಿಕೊಂಡಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಈಗ ಚುನಾವಣೆ ಬಂದಿದ್ದರಿಂದ ಮೂರು ತಿಂಗಳಲ್ಲಿ ಮನೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳುತ್ತಿರುವುದು ವಿಚಿತ್ರವಾಗಿದೆ. ಮೂರು ವರ್ಷಗಳಾದರೂ ಸಂತ್ರಸ್ತರಿಗೆ ಸಿಗದ ಮನೆ ಮೂರು ತಿಂಗಳಲ್ಲಿ ಇವರಿಂದ ಸಿಗುತ್ತದೆಯಾ ? ಇದನ್ನು ನಾವು ನಂಬಬೇಕಾ ? ಎಂದರು.
ಸಂತ್ರಸ್ತರಿಗೆ ಮನೆ ಕೊಡಲು ಲಂಚ ಕೇಳಿ ಪಿಡಿಓ ಸಸ್ಪೆಂಡ್ ಆಗಿರುವ ಘಟನೆ ತಿಗಡಿಯಲ್ಲಿ ನಡೆಯಿತು. ಹಣ ಕೊಟ್ಟವರಿಗೆ ಮಾತ್ರ ಮನೆ ಕೊಟ್ಟ ಘಟನೆಗಳು ನಡೆದಿವೆ. ಈಗ ಚುನಾವಣೆ ಬಂದಿರುವುದರಿಂದ ಮನೆ ಕೊಡಿಸುವುದಾಗಿ ಶಾಸಕರು ಸುಳ್ಳು ಆಶ್ವಾಸನೆ ಕೊಡುತ್ತಿದ್ದಾರೆ ಎಂದು ಗಂಗಣ್ಣವರ ನುಡಿದರು.